Home ಜಿಲ್ಲೆ ಮೈಸೂರು ರೂಪಾಯಿ ಮೌಲ್ಯ ವೃದ್ಧಿಗೆ ರಫು ್ತ ಪ್ರಮಾಣ ಹೆಚ್ಚಳ ಅಗತ್ಯ

ರೂಪಾಯಿ ಮೌಲ್ಯ ವೃದ್ಧಿಗೆ ರಫು ್ತ ಪ್ರಮಾಣ ಹೆಚ್ಚಳ ಅಗತ್ಯ

ಸಂಜೆವಾಣಿ ನ್ಯೂಸ್
ಮೈಸೂರು, ಜು.14:-
ಆಮದನ್ನು ಹೆಚ್ಚಿಸಿದಷ್ಟೂ ರೂಪಾಯಿಯ ಮೌಲ್ಯ ಡಾಲರ್ ಎದುರು ಕುಸಿಯುತ್ತದೆ. ಆಮದು ಪ್ರಮಾಣವನ್ನು ತಗ್ಗಿಸಿ, ರಫ್ತು ಪ್ರಮಾಣವನ್ನು ಹೆಚ್ಚಿಸಿದಾಗ ಮಾತ್ರ ಭಾರತೀಯ ರೂಪಾಯಿಯ ಮೌಲ್ಯ ವೃದ್ಧಿಯಾಗಲು ಸಾಧ್ಯ ಎಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಹೇಳಿದರು.


ನಗರದ ಹೋಟೆಲ್ ಪ್ರೆಸಿಡೆಂಟ್‍ನಲ್ಲಿ ರಾಜ್ಯದ ರಫ್ತು ವಲಯವನ್ನು ವಿಸ್ತರಿಸುವ ಉದ್ದೇಶದಿಂದ ಆಯೋಜಿಸಿದ್ದ 6 ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಚೀನಾ ಉತ್ಪನ್ನಗಳ ಬಗ್ಗೆ ಜಾಗೃತಿ ಅಗತ್ಯ:
ಚೀನಾದಿಂದ ಆಮದು ಮಾಡಿಕೊಳ್ಳುವ ಸೋಲಾರ್ ಪ್ಯಾನಲ್ ಸೇರಿದಂತೆ ಇತರ ವಿದೇಶಿ ಉತ್ಪನ್ನಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿಲ್ಲ. ಬದಲಾಗಿ ನಾವು ಸ್ಥಳೀಯವಾಗಿ ಉತ್ಪಾದಿಸುವ ಗುಣಮಟ್ಟದ ಪದಾರ್ಥಗಳನ್ನು ಖರೀದಿಸಬೇಕು ಮತ್ತು ನಮ್ಮ ದೇಶದಿಂದ ರಫ್ತು ಮಾಡುವತ್ತ ಗಮನ ಹರಿಸಬೇಕು. ಚೈನಾ ಉತ್ಪನ್ನಗಳ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯ ಕೊರತೆಯ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕು ಎಂದು ತಿಳಿಸಿದರು.


ಮೈಸೂರಿನಲ್ಲಿ ರಫ್ತು ಕೇಂದ್ರ:
ಈ ತರಬೇತಿಯಲ್ಲಿ ಮಾರುಕಟ್ಟೆಯ ಜಾಗತಿಕ ಸ್ಪರ್ಧೆಗೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನು ಸರಿಯಾದ ಬೆಲೆಯಲ್ಲಿ ಹೇಗೆ ರಫ್ತು ಮಾಡಬೇಕೆಂಬುದರ ಕುರಿತು ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದರು.


ರಫ್ತು ವಲಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 3 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 1 ಕೋಟಿ ರೂ. ಅನುದಾನ ನೀಡಿದೆ. ರಿಂಗ್ ರಸ್ತೆಯಲ್ಲಿರುವ ಶೇಷಾದ್ರಿಪುರಂ ಸಂಸ್ಥೆಯ ಪಕ್ಕದಲ್ಲಿ ಮೈಸೂರು ರಫ್ತು ಕೇಂದ್ರ ತಲೆ ಎತ್ತುತ್ತಿದೆ. ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯುದ್ಧದ ಕಾರಣಗಳಿಂದಾಗಿ ಸ್ಟೀಲ್, ಟೈಲ್ಸ್ ಬೆಲೆ ಏರಿಕೆಯಿಂದ ಕಾಮಗಾರಿ ಕೊಂಚ ತಡವಾಗಿದ್ದರೂ, ಶೀಘ್ರದಲ್ಲೇ ಇದು ಉದ್ಯಮಿಗಳ ಸೇವೆಗೆ ಲಭ್ಯವಾಗಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ರಫ್ತಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಕೆಲಸ ಮಾಡಲಿವೆ. ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು, ಮಾರಾಟ ಮಾಡಲು ಹಾಗೂ ಒನ್-ಟು-ಒನ್ ಮೀಟಿಂಗ್ ನಡೆಸಲು ಇಲ್ಲಿ ಉತ್ತಮ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.


ಉದ್ಯಮಿಗಳು ಯಾವುದೇ ಕನ್ಸಲ್ಟೆಂಟ್‍ಗಳು ಅಥವಾ ಏಜೆಂಟರ ಬಳಿ ಹೋಗಿ ವಂಚನೆಗೆ ಒಳಗಾಗುವ ಮುನ್ನ, ಇಲಾಖೆಯ ಅಧಿಕಾರಿಗಳು ನೀಡುವ ಅಧಿಕೃತ ಸೇವೆಯ ಮಾಹಿತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಮೈಸೂರು ರಫ್ತು ಕ್ಷೇತ್ರಕ್ಕೆ ಅಪಾರ ಅವಕಾಶ:
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಡಾ.ಕೆ.ಬಿ. ಲಿಂಗರಾಜು ಮಾತನಾಡಿ, ರಫ್ತು ಮಾಡುವುದು ಎಂದರೆ ಕೇವಲ ವಿದೇಶಕ್ಕೆ ಸರಕನ್ನು ಕಳುಹಿಸುವುದಲ್ಲ. ಅದು ನಮ್ಮ ದೇಶದ ಗುಣಮಟ್ಟ ಮತ್ತು ಸಾಮಥ್ರ್ಯವನ್ನು ಜಗತ್ತಿಗೆ ಪರಿಚಯಿಸುವ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.


ಮೈಸೂರು ಕೇವಲ ಸಾಂಸ್ಕೃತಿಕ ರಾಜಧಾನಿಯಷ್ಟೇ ಅಲ್ಲದೆ ಕೈಗಾರಿಕೆ, ಕೃಷಿ, ಆಹಾರ ಸಂಸ್ಕರಣೆ, ಮಾಹಿತಿ ತಂತ್ರಜ್ಞಾನ, ಜವಳಿ, ಅಗರಬತ್ತಿ, ಸ್ಯಾಂಡಲ್ ಉತ್ಪನ್ನಗಳು, ಜೇನುತುಪ್ಪ, ಕಾಫಿ, ಮಸಾಲೆ ಪದಾರ್ಥಗಳು, ಆಯುರ್ವೇದ ಉತ್ಪನ್ನಗಳು ಹಾಗೂ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉತ್ತಮ ರಫ್ತು ಅವಕಾಶಗಳನ್ನು ಹೊಂದಿದೆ ಎಂದರು.
ನಮ್ಮ ಜಿಲ್ಲೆಯ ಸಾವಿರಾರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪುವ ಸಾಮಥ್ರ್ಯವಿದೆ. ಆದರೆ ಅವರಿಗೆ ಸರಿಯಾದ ಮಾಹಿತಿ, ತರಬೇತಿ, ದಾಖಲಾತಿಗಳ ಅರಿವು ಮತ್ತು ಮಾರುಕಟ್ಟೆ ಸಂಪರ್ಕದ ಕೊರತೆಯಿದೆ. ಈ ತರಬೇತಿಯು ಅಂತಹ ಕೊರತೆಗಳನ್ನು ನೀಗಿಸಲಿದೆ ಎಂದು ಹೇಳಿದರು.


ಇ-ಕಾಮರ್ಸ್ ಮೂಲಕ ವಿಶ್ವದ ಯಾವುದೇ ದೇಶಕ್ಕಾದರೂ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ಲಭ್ಯವಿದೆ. ಆದ್ದರಿಂದ ನಮ್ಮ ಯುವ ಉದ್ಯಮಿಗಳು ತಂತ್ರಜ್ಞಾನವನ್ನು ಅಳವಡಿಸಿಕೊಂಡು, ‘ಮೇಡ್ ಇನ್ ಮೈಸೂರ್’ ಮತ್ತು ‘ಮೇಡ್ ಇನ್ ಕರ್ನಾಟಕ’ ಎಂಬ ಹೆಸರಿನಲ್ಲಿ ಜಾಗತಿಕ ಮಟ್ಟದಲ್ಲಿ ತಲುಪುವ ಸಂಕಲ್ಪ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಟಿಪಿಸಿ ರಫ್ತು ಸೌಲಭ್ಯ ಕೇಂದ್ರದ ಉಪ ನಿರ್ದೇಶಕಿ ಮೇಘಲಾ ಎಲ್. ಅರವಿಂದ್ ಭಟ್, ಉಮಾ ಸೇರಿದಂತೆ ರಫ್ತು ನಿರ್ವಹಣಾ ತರಬೇತಿ ಅಭ್ಯರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.