
ಬೆಂಗಳೂರು,ಜು.೨-ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ, ಜಿಬಿಎ ಮುಖ್ಯ ಆಯುಕ್ತರ ಮಾರ್ಗದರ್ಶನದಲ್ಲಿ ನಗರದ ಐದು ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಪಾದಚಾರಿಗಳಿಗೆ ಸುರಕ್ಷಿತ ಮತ್ತು ಮುಕ್ತ ಸಂಚಾರ ಕಲ್ಪಿಸುವ ಉದ್ದೇಶದಿಂದ ಆರಂಭಿಸಿರುವ ಕಾರ್ಯಾಚರಣೆಯಲ್ಲಿ ಮೊದಲ ಎರಡು ದಿನಗಳಲ್ಲಿ ಒಟ್ಟು ೧೧೫ ಕಿಲೋಮೀಟರ್ ಫುಟ್ಪಾತ್ಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.
ಮೊದಲ ದಿನ ಐದು ನಗರಪಾಲಿಕೆ ವ್ಯಾಪ್ತಿಯಲ್ಲಿ ೭೦ ಕಿಲೋಮೀಟರ್ ಫುಟ್ಪಾತ್ ತೆರವುಗೊಳಿಸಲಾಗಿದ್ದು, ಸುಮಾರು ೨,೦೦೦ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್ಗಳು ತೆರವುಗೊಂಡಿವೆ. ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಹೋಟೆಲ್, ತರಕಾರಿ ಅಂಗಡಿ, ತಳ್ಳುವ ಗಾಡಿ, ಅನಧಿಕೃತ ಜಾಹೀರಾತು ಫಲಕ, ತಾತ್ಕಾಲಿಕ ಶೆಲ್ಟರ್ ಸೇರಿದಂತೆ ಪಾದಚಾರಿಗಳಿಗೆ ಅಡ್ಡಿಯಾಗಿದ್ದ ಎಲ್ಲಾ ರೀತಿಯ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.
ಇದರ ಜೊತೆಗೆ ಪಾದಚಾರಿ ಮಾರ್ಗದಲ್ಲಿದ್ದ ಅಕ್ರಮ ಸಿಮೆಂಟ್ ಕಟ್ಟೆಗಳು, ಗೋಡೆಗಳು, ಮರಗಳ ಸುತ್ತಲಿನ ಕಟ್ಟೆ-ಕಂಬಿಗಳು ಹಾಗೂ ನಂದಿನಿ ಹಾಲಿನ ಕೇಂದ್ರಗಳ ಬಳಿಯ ಅನಧಿಕೃತ ನಿರ್ಮಾಣಗಳನ್ನೂ ತೆರವು ಮಾಡಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ದಿನವೂ ಕಾರ್ಯಾಚರಣೆ ಮುಂದುವರಿದಿದ್ದು, ಸುಮಾರು ೪೫ ಕಿಲೋಮೀಟರ್ ರಸ್ತೆ ವ್ಯಾಪ್ತಿಯಲ್ಲಿ ಅನಧಿಕೃತ ಶೆಡ್ ಹಾಗೂ ಅಂಗಡಿಗಳನ್ನು ತೆರವು ಮಾಡಲಾಗಿದೆ. ಫುಟ್ಪಾತ್ ಮೇಲೆ ವ್ಯಾಪಾರ ನಡೆಸುತ್ತಿದ್ದ ೭೦೦ಕ್ಕೂ ಹೆಚ್ಚು ವ್ಯಾಪಾರಿಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆದರೆ ಕಾರ್ಯಾಚರಣೆಗೆ ವಿರೋಧವೂ ವ್ಯಕ್ತವಾಗಿದೆ. ತಮ್ಮ ಜೀವನೋಪಾಯ ಕಳೆದುಕೊಳ್ಳುತ್ತಿರುವ ಬಡ ವ್ಯಾಪಾರಿಗಳು, “ಇದು ಬಡವರ ಮೇಲಿನ ದಬ್ಬಾಳಿಕೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌರಿಪಾಳ್ಯ ಹಾಗೂ ಟ್ಯಾನರಿ ರಸ್ತೆ ಭಾಗಗಳಲ್ಲಿ ಮಾತ್ರ ಒತ್ತುವರಿ ತೆರವು ಮಾಡಿಲ್ಲ ಎಂಬ ಆರೋಪವನ್ನೂ ಕೆಲವರು ಮಾಡಿದ್ದಾರೆ.
ಇನ್ನೊಂದೆಡೆ, ಸ್ಥಳೀಯ ರಾಜಕೀಯ ಮುಖಂಡರು ತಮ್ಮ ಕ್ಷೇತ್ರದ ವ್ಯಾಪಾರಿಗಳನ್ನು ತೆರವು ಮಾಡದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ನಮ್ಮ ಕ್ಷೇತ್ರದ ಮತದಾರರನ್ನು ತೆರವು ಮಾಡಬೇಡಿ” ಎಂಬ ದೂರವಾಣಿ ಕರೆಗಳು ಬರುತ್ತಿವೆ. ಮುಂದಿನ ತಿಂಗಳು ನಡೆಯಲಿರುವ ಜಿಬಿಎ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲ ನಾಯಕರು ರಾಜಕೀಯ ಒತ್ತಡ ಹೇರುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫುಟ್ಪಾತ್ಗಳನ್ನು ಪಾದಚಾರಿಗಳಿಗೆ ಮುಕ್ತಗೊಳಿಸುವ ಸರ್ಕಾರದ ಕಾರ್ಯಾಚರಣೆ ಒಂದು ಕಡೆ ವೇಗ ಪಡೆದುಕೊಂಡಿದ್ದರೆ, ಮತ್ತೊಂದೆಡೆ ಬಡ ವ್ಯಾಪಾರಿಗಳ ಅಸಮಾಧಾನ ಮತ್ತು ರಾಜಕೀಯ ಒತ್ತಡದ ಆರೋಪಗಳು ಚರ್ಚೆಗೆ ಗ್ರಾಸವಾಗಿವೆ.



























