
ಪುತ್ತೂರು: ಮಾನವನ ಸಂಸ್ಕೃತಿಯಲ್ಲಿ ಭತ್ತದ ಗದ್ದೆಗಳಿಗೆ ವಿಶೇಷವಾದ ಸ್ಥಾನ ಇದೆ. ಆದರೆ ಪ್ರಸ್ತುತ ರೈತವರ್ಗ ಭತ್ತದ ಕೃಷಿಯಿಂದ ದೂರವಾದ ಕಾರಣ ಗದ್ದೆಗಳು ಅಪರೂಪವಾಗಿವೆ. ಈ ನಡುವೆ ಕೆಸರುಗದ್ದೆಯಂತಹ ಕ್ರೀಡಾಕೂಟಗಳು ಈ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡುತ್ತಿವೆ. ಕೃಷಿಪರಂಪರೆಯನ್ನು ನೆನೆಪಿಸುವ ಜತೆಗೆ ಮಣ್ಣಿನ ಸಂಸ್ಕೃತಿಯ ಅನಾವರಣ ಈ ಕ್ರೀಡಾಕೂಟಗಳಿಂದ ಆಗುತ್ತಿದೆ ಎಂದು ಖ್ಯಾತ ವಕೀಲರಾದ ಮಹೇಶ್ ಕಜೆ ಅಭಿಪ್ರಾಯಪಟ್ಟರು.

ಅವರು ಅಳಕೆಮಜಲು ಪೆಲತ್ತಿಂಜದಲ್ಲಿ ಎಸ್ಆರ್ಕೆ ಲ್ಯಾಡರ್ಸ್, ಸುದ್ದಿ ಬಿಡುಗಡೆ, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ್ಸ್ ಇಂಡಿಯಾ ಪುತ್ತೂರು ಸೆಂಟರ್ ಮತ್ತು ಆರ್ವಿ ಇಂಟರ್ ಗ್ರಾಫಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಕೆಸರ್ಡ್ ಕುಸಲ್ದ ಲೇಸ್ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ರಾಮಕುಂಜೇಶ್ವರ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು ಸತೀಶ್ ಭಟ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಇಡ್ಕಿದು ಗ್ರಾ.ಪಂ ಸದಸ್ಯ ಚಿದಾನಂದ ಪೆಲತ್ತಿಂಜ ಅವರು ನೆರವೇರಿಸಿದರು. ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯದರ್ಶಿ ಚಂದ್ರಕಾಂತ ಅವರು ತೆಂಗಿನ ಸಿರಿಯನ್ನು ಅರಳಿಸಿದರು. ದಕ್ಷಿಣ ಕನ್ನಡ ಅಮೆಚೂರು ಕಬಡ್ಡಿ ಅಸೋಸಿಯೇಶನ್ನ ರೆಫ್ರಿ ಬೋರ್ಡ್ ಅಧ್ಯಕ್ಷ ಶಿವರಾಮ್ ಏನೆಕಲ್ ಅವರು ಸಂಪ್ರದಾಯದಂತೆ ತೆಂಗಿನ ಕಾಯಿ ಒಡೆದರು. ಆರ್ವಿ ಇಂಟರ್ಗ್ರಾಫಿಕ್ಸ್ನ ಆಡಳಿತ ಪಾಲುದಾರ ಜ್ಞಾನೇಶ್ ವಿಶ್ವಕರ್ಮ ಸೆಲ್ಪಿ ಪಾಯಿಂಟ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಗದ್ದೆಗೆ ಹಾಲೆರೆದು ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯಪ್ರಶಸ್ತಿ ಪುರಸ್ಕೃತ ರಾಮಕುಂಜೇಶ್ವರ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು ಸತೀಶ್ ಭಟ್, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಪುತ್ತೂರು ಇದರ ಪ್ರೊ. ಡಾ.ಅಜಿತ್ ಹೆಬ್ಬಾರ್, ಎಸ್ಆರ್ಕೆ ಲ್ಯಾಡರ್ಸ್ನ ಮಾಲಕ ಕೇಶವ ಅಮೈ, ಪುತ್ತೂರು ಸೆಂಟರ್ ಇದರ ಅಧ್ಯಕ್ಷ ಶಿವರಾಮ ಮತಾವು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಲತಿ ಕೇಶವ, ಶೊಭಾ ಶಿವಾನಂದ್, ಸೃಜನ್ ಊರುಬೈಲು, ಗಿರೀಶ್ರಾಜ್ ಎಂ.ವಿ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶರತ್ ಪಾರ ಉಪಸ್ಥಿತರಿದ್ದರು.
ಎಸ್.ಆರ್.ಕೆ.ಲ್ಯಾಡರ್ಸ್ನ ಮಾಲಕ ಕೇಶವ ಅಮೈ ಸ್ವಾಗತಿಸಿ, ಕರ್ನಾಟಕ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಉಮೇಶ್ ಮಿತ್ತಡ್ಕ ವಂದಿಸಿದರು. ನೆಲ್ಯಾಡಿ ಸೈಂಟ್ ಜೋಸೆಪ್ ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.

































