
ಸಂಜೆವಾಣಿ ನ್ಯೂಸ್
ಮೈಸೂರು ಆ.25:- ಸಾರ್ವಜನಿಕರಿಗೆ ವಿಶ್ರಾಂತಿಯ ತಾಣವಾಗಬೇಕಿದ್ದ ಉದ್ಯಾನವನವೇ ಈಗ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ.
ನಗರದ ಪ್ರತಿಷ್ಠಿತ ಬಡಾವಣೆ ರಾಮಕೃಷ್ಣ ನಗರ ಎ ಮತ್ತು ಬಿ ಬ್ಲಾಕ್ ನಡುವಿನ ವಿಶ್ವಮಾನವ ಜೋಡಿ ರಸ್ತೆಗೆ ಹೊಂದಿಕೊಂಡಿರುವ ನಂದನವನ ಉದ್ಯಾನವನ ನಿರ್ವಹಣೆ ಇಲ್ಲದೆ ಪುಂಡರ ತಾಣವಾಗಿ ಪರಿವರ್ತನೆಗೊಂಡಿದೆ.
ಕಸ, ಗಿಡಗಂಟಿಗಳಿಂದ ತುಂಬಿ ವಿಷ ಜಂತುಗಳ ವಾಸಸ್ಥಾನವಾಗಿದೆ. ಪಕ್ಕದ ರಸ್ತೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಆರಂಭವಾದ ಬಳಿಕ ಅಲ್ಲಿಗೆ ಬರುವವರ ಕಾರುಗಳ ಸಾಲೇ ತಡೆಗೋಡೆಯಾಗಿದ್ದು, ಅದರ ಮರೆಯಲ್ಲಿ ಮೂತ್ರ ವಿಸರ್ಜನೆ ಸಾಮಾನ್ಯವಾಗಿದೆ.
ಸಂಜೆಯಾಗುತ್ತಿದ್ದಂತೆ ಧೂಮಪಾನ, ಮದ್ಯಪಾನದ ಅಮಲು, ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಪ್ರಶ್ನಿಸಿದ ಸ್ಥಳೀಯರಿಗೇ ಬೆದರಿಕೆ ಹಾಕುವ ಘಟನೆಗಳೂ ನಡೆದಿವೆ. ಇದರಿಂದ ಅಕ್ಕಪಕ್ಕದ ನಿವಾಸಿಗಳ ನೆಮ್ಮದಿ ಹಾಳಾಗಿದೆ.
ಕೂಡಲೇ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು, ಅವ್ಯವಸ್ಥೆಯ ಗೂಡಾಗಿರುವ ಈ ಉದ್ಯಾನವನವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ವಾಯು ವಿಹಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.

































