
ಸುಳ್ಯ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವದ ಪ್ರಯುಕ್ತ ಭಕ್ತಿ ಸಂಭ್ರಮದ ಬ್ರಹ್ಮ ರಥೋತ್ಸವ ನಡೆಯಿತು.
ಸಾವಿರಾರು ಮಂದಿ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು. ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳ ಬಳಿಕ ಬ್ರಹ್ಮ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕಾಚು ಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ ಶ್ರೀ ಭೂತಬಲಿ , ಶಯನೋತ್ಸವ, ಕವಾಟ ಬಂಧನ ಜರುಗಿತು. ರಥೋತ್ಸವ ವೇಳೆ ಸಿಡಿಮದ್ದು ಪ್ರದರ್ಶನ ಬಾನಂಗಳದಲ್ಲಿ ಆಕರ್ಷಕ ವರ್ಣ ಚಿತ್ತಾರ ಬಿಡಿಸಿತು. ಸಾವಿರಾರು ಮಂದಿ ರಥೋತ್ಸವ ಕಣ್ತುಂಬಿಕೊಂಡರು.
ದೇವಳದ ಮೈದಾನದಲ್ಲಿ ಭಜನಾ ತಂಡಗಳ ಕುಣಿತ ಭಜನೆ, ಗೊಂಬೆ ಕೀಲು ಕುದುರೆ, ಕರಗನೃತ್ಯ, ಗೊಂಬೆಯಾಟ ಹಾಗೂ ಬೇತಾಳಗಳು, ಚೆಂಡೆ ವಾದನ ಕೊಂಬು ಕಹಳೆ ವಿಶೇಷ ಆಕರ್ಷಣೆಯಾಗಿತ್ತು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಶಾಸಕಿ ಭಾಗೀರಥಿ ಮುರುಳ್ಯ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷರುಗಳು, ಸಲಹಾ ಸಮಿತಿ ಸದಸ್ಯರುಗಳು, ಭಕ್ತರು ಉಪಸ್ಥಿತರಿದ್ದರು.

























