
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.24: ಆರ್ ವೈ ಎಂ ಇಂಜಿನಿಯರಿಂಗ್ ಕಾಲೇಜಿನ ಎಂ.ಬಿ.ಎ ವಿಭಾಗದ ವತಿಯಿಂದ ರಾಷ್ಟ್ರಮಟ್ಟದ ‘ಅಸ್ತ್ರ ಮ್ಯಾನೇಜ್ಮೆಂಟ್ ಫೆಸ್ಟ್–2026’ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲಾಯಿತು. ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ಈ ಮಹತ್ವದ ಕಾರ್ಯಕ್ರಮವು ಪದವಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಜೊತೆಗೆ, ಅವರಲ್ಲಿರುವ ನಾಯಕತ್ವ, ಸೃಜನಶೀಲತೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಉದ್ದೇಶವನ್ನು ಹೊಂದಿತ್ತು.
ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿಗಳಾದ ಡಾ. ಅರವಿಂದ್ ಪಟೇಲ್ ಅವರು ಉದ್ಘಾಟಿಸಿ ಮಾತನಾಡುತ್ತಾ.. ಇಂತಹ ಮ್ಯಾನೇಜ್ಮೆಂಟ್ ಫೆಸ್ಟ್ಗಳು ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ವಿಶಿಷ್ಟ ವೇದಿಕೆಯಾಗಿದ್ದು, ಅವರ ಆತ್ಮವಿಶ್ವಾಸವನ್ನು ವೃದ್ಧಿಸಿ ಭವಿಷ್ಯ ನಿರ್ಮಾಣಕ್ಕೆ ದಿಕ್ಕು ತೋರಿಸುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳು ಸ್ಪರ್ಧೆಗಳ ಮೂಲಕ ಅನುಭವ ಪಡೆಯುವುದರಿಂದ ಜೀವನದಲ್ಲಿ ಯಶಸ್ಸಿನ ದಾರಿಗೆ ಹೆಜ್ಜೆಯಿಡಲು ಸಹಕಾರಿಯಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು. ಸಂಸ್ಥೆ ಸದಾ ಇಂತಹ ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಜಾನೇಕುಂಟೆ ಬಸವರಾಜ್, ಕಾಲೇಜಿನ ಪ್ರಾಚಾರ್ಯರಾದ ಡಾ. ಹೆಚ್. ಮಹಾಬಲೇಶ್ವರ್, ಉಪಪ್ರಾಚಾರ್ಯರಾದ ಡಾ. ಸವಿತಾ ಸೋನಾಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿದರು. ವಿಭಾಗದ ಮುಖ್ಯಸ್ಥರಾದ ಡಾ. ಎ. ತಿಮ್ಮನಗೌಡ ಅವರು ಎಲ್ಲ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ ಮತ್ತು ಅಗತ್ಯತೆಯನ್ನು ಪ್ರಸ್ತಾವಿಕ ನುಡಿಯಲ್ಲಿ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯ ನಿರ್ದೇಶಕರಾದ ನವೀನ್ ಲೋಕೆರೆ ಹಾಗೂ ಮುರಳಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ತಮ್ಮ ಉದ್ಯಮ ಜೀವನದ ಅನುಭವಗಳನ್ನು ಹಂಚಿಕೊಂಡರು. ಅವರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿತು.
ಉದ್ಘಾಟನಾ ಸಮಾರಂಭದ ನಂತರ ವಿವಿಧ ಸ್ಪರ್ಧೆಗಳು ವಿದ್ಯಾರ್ಥಿಗಳ ಉತ್ಸಾಹವನ್ನು ಹೆಚ್ಚಿಸಿತು. ಹಣಕಾಸಿನ ನಿರ್ವಹಣೆಗೆ ಸಂಬಂಧಿಸಿದ ‘ಕೌಟಿಲ್ಯ’, ಉತ್ತಮ ವ್ಯವಸ್ಥಾಪನಾ ಕೌಶಲ್ಯವನ್ನು ಅಳೆಯುವ ‘ಸಮರ್ಥ’, ಮಾರುಕಟ್ಟೆ ತಂತ್ರಗಳನ್ನು ಪರೀಕ್ಷಿಸುವ ‘ಸವ್ಯಸಾಚಿ’, ರಸಪ್ರಶ್ನೆಯ ರೂಪದಲ್ಲಿನ ‘ವಿವೇಚನ’, ಮಾನವ ಸಂಪನ್ಮೂಲ ನಿರ್ವಹಣೆಯ ‘ನಿರ್ಗುಣ’ ಹಾಗೂ ಸಾಂಸ್ಕೃತಿಕ ಪ್ರತಿಭೆಗಳಿಗೆ ‘ರಂಗಕ್ಷೇತ್ರ’ ಎಂಬ ಹೆಸರಿನಲ್ಲಿ ವೈವಿಧ್ಯಮಯ ಸ್ಪರ್ಧೆಗಳು ಜರುಗಿದವು. ಈ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ, ತಂಡ ಮನೋಭಾವ ಹಾಗೂ ಸೃಜನಶೀಲತೆಯನ್ನು ಪ್ರತಿಬಿಂಬಿಸಿತು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 40 ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಜೇತರು ಪ್ರಶಸ್ತಿ ಪಡೆದು ಸಂತಸಗೊಂಡರು. ಬೆಳಿಗ್ಗೆಯಿಂದ ಸಂಜೆ 7 ಗಂಟೆಯವರೆಗೆ ನಿರಂತರವಾಗಿ ನಡೆದ ಈ ಫೆಸ್ಟ್ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡಿದಂತಾಯಿತು.
ಒಟ್ಟಿನಲ್ಲಿ, ‘ಅಸ್ತ್ರ ಮ್ಯಾನೇಜ್ಮೆಂಟ್ ಫೆಸ್ಟ್–2026’ವು ವಿದ್ಯಾಭ್ಯಾಸದ ಗಡಿಯಾಚೆಗೆ ಹೋಗಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ, ಉತ್ಸಾಹಭರಿತ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿ ಯಶಸ್ವಿಯಾಗಿ ನೆರವೇರಿತು.






















