Home ಜಿಲ್ಲೆ ಕಲಬುರಗಿ ನಮ್ಮದು ಅಂಬೇಡ್ಕರ್ ರಕ್ತ; ಭಯಪಡುವ ಜಾಯಮಾನ ನನ್ನದಲ್ಲ, ರಮೇಶ್ ಜಿಗಜಿಣಗಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ನಮ್ಮದು ಅಂಬೇಡ್ಕರ್ ರಕ್ತ; ಭಯಪಡುವ ಜಾಯಮಾನ ನನ್ನದಲ್ಲ, ರಮೇಶ್ ಜಿಗಜಿಣಗಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಕಲಬುರಗಿ,ಜೂ.19-ದಲಿತ ವ್ಯಕ್ತಿಗೆ ಆರ್‍ಎಸ್‍ಎಸ್ ಉಸಾಬರಿ ಯಾಕೆ ? ಆರ್ ಎಸ್ ಎಸ್ ತಂಟೆಗೆ ಬಂದವರು ಉಳಿದಿಲ್ಲ ಎಂಬ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಯಾಗಿ ಯಾರಿಗೂ ಭಯಪಡುವುದಿಲ್ಲ ಎಂದಿದ್ದಾರೆ.
ರಮೇಶ್ ಜಿಗಜಿಣಗಿ ಕುರಿತ ಹೇಳಿಕೆ ಕುರಿತು ಎಕ್ಸ್ ಪೆÇೀಸ್ಟ್‍ನಲ್ಲಿ ಉತ್ತರಿಸಿರುವ ಪ್ರಿಯಾಂಕ್ ಖರ್ಗೆ, ಜಿಗಜಣಗಿ ಅವರ ಪ್ರಶ್ನೆಯನ್ನು ವಿವಿಧ ಆಯಾಮಗಳಿಂದ ವಿಮರ್ಶಿಸಬೇಕಾಗಿದೆ. ದಲಿತ ಸಮುದಾಯದವರೇ ಆಗಿರುವ ರಮೇಶ್ ಜಿಗಜಿಣಗಿಯವರಿಗೆ ಆರ್‍ಎಸ್‍ಎಸ್ ಗರ್ಭಗುಡಿಯೊಳಗೆ ಪ್ರವೇಶ ಸಿಗದಿರುವ ಹತಾಶೆಯ ಮಾತೇ ? ಎಂದು ಪ್ರಶ್ನಿಸಿದ್ದಾರೆ.
ದಲಿತರಿಗೆ ಆರ್‍ಎಸ್‍ಎಸ್ ವಿಷಯ ಯಾಕೆ ಬೇಕು ಎಂಬ ರಮೇಶ್ ಜಿಗಜಿಣಗಿಯವರು ನನಗೆ ಹೇಳಿರುವ ಮತ್ತು ಕೇಳಿರುವ ಪ್ರಶ್ನೆಗೆ ಉತ್ತರ ಎಂದು ಅವರು ಬರೆದುಕೊಂಡಿದ್ದು, ಶ್ರೇಣಿಕೃತ ವ್ಯವಸ್ಥೆಯ ಮೂಲಭೂತವಾದವನ್ನು ನಂಬಿರುವ ಆರ್‍ಎಸ್‍ಎಸ್ ಸಹವಾಸಕ್ಕೆ ದಲಿತರು ಹೋಗಬೇಡಿ ಎಂದ ಎಚ್ಚರಿಕೆಯ ಮಾತುಗಳೇ ? ಎಂದಿದ್ದಾರೆ.
ಸಮಾಜದಲ್ಲಿನ ಮೇಲರಿಮೆಯ ಮನಸ್ಥಿತಿಯ ಜನರ ಹಿತಾಸಕ್ತಿ ಕಾಯಲು ರೂಪುಗೊಂಡಿರುವ ಆರ್‍ಎಸ್‍ಎಸ್ ಅನ್ನು ಪ್ರಶ್ನೆ ಮಾಡಲು ದಲಿತನಾಗಿ ನಿನಗೆ ಅರ್ಹತೆ ಇಲ್ಲ ಎಂದು ನನಗೆ ಹೇಳಿರುವ ಕುಹುಕುದ ಮಾತುಗಳೇ ? ಆರ್‍ಎಸ್‍ಎಸ್ ನಂತಹ ವ್ಯವಸ್ಥೆಯನ್ನು ಸಂವಿಧಾನದ ಹಾದಿಗೆ ತರಲು ದಲಿತರಿಗೆ ಸಾಧ್ಯವಿಲ್ಲ ಎಂಬ ಹತಾಶೆಯ ಮಾತುಗಳೇ ? ಎಂದು ಪ್ರಶ್ನಿಸಿದ್ದಾರೆ. ಈ ಬೆದರಿಕೆ ಹಿಂದಿರುವ ಕಾರಣಗಳೇನು ? ಯಾರು ಉಳಿದಿಲ್ಲ ಎಂದರೆ ಏನರ್ಥ, ಆರ್‍ಎಸ್‍ಎಸ್ ಭಯೋತ್ಪಾದಕ ಸಂಘಟನೆಯೇ? ಪ್ರಶ್ನಿಸುವವರನ್ನು ಮುಗಿಸುತ್ತದೆಯೇ ಎಂದು ಕೇಳಿದ್ದಾರೆ.
ನಾನು ಬಾಬಾ ಸಾಹೇಬರ ಸಿದ್ದಾಂತದವನು, ಪ್ರಶ್ನಿಸುವ ಧೈರ್ಯ ಮತ್ತು ವೈಚಾರಿಕತೆ ಅವರಿಂದಲೇ ಬಂದಿರುವುದು, ಬಾಬಾ ಸಾಹೇಬರನ್ನು ನಂಬಿದವರಿಗೆ “ಅಂಜಿಕೆ” ತಿಳಿದಿರುವುದಿಲ್ಲ.
ನಾನು ಸಂವಿಧಾನದ ರಕ್ಷಣೆಯ ನೆರಳಲ್ಲಿರುವವರು ಸಂವಿಧಾನದಡಿಯಲ್ಲಿ ಮಾನ್ಯತೆಯೇ ಇಲ್ಲದವರಿಗೆ ಭಯಪಡುವ ಜಾಯಮಾನ ನನ್ನದಲ್ಲ.
ನಾನು ಅಂಜುವುದು ನೈತಿಕತೆಗೆ ಹೊರತು, ಬೆದರಿಕೆಗಳಿಗಲ್ಲ, ಏಕೆಂದರೆ ನಮ್ಮದು ಅಂಬೇಡ್ಕರ್‍ರವರ ರಕ್ತ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.