Home ಜಿಲ್ಲೆ ರಸ್ತೆಗಳ ಸುಧಾರಣೆಗೆ ಗ್ರಾಮಸ್ಥರ ಸಹಕಾರಕ್ಕೆ ಸಚಿವ ಪಾಟೀಲ ಮನವಿ

ರಸ್ತೆಗಳ ಸುಧಾರಣೆಗೆ ಗ್ರಾಮಸ್ಥರ ಸಹಕಾರಕ್ಕೆ ಸಚಿವ ಪಾಟೀಲ ಮನವಿ

ವಿಜಯಪುರ:ಮೇ.೪: ರಸ್ತೆಗಳ ಸುಧಾರಣೆಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರ ಬಳಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೪೦೦ ಲಕ್ಷ ವೆಚ್ಚದಲ್ಲಿ ಕಂಬಾಗಿ- ದೇವರ ಗೆಣ್ಣೂರ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಕಬ್ಬು ಸಾಗಣೆ ವಾಹನಗಳ ಓಡಾಟ ಹೆಚ್ಚಳದಿಂದ ರಸ್ತೆಗಳು ಬೇಗ ದುರಸ್ಥಿಗೆ ಬರುತ್ತಿವೆ. ರಸ್ತೆಗಳ ಅತೀಕ್ರಮಣ ತೆರವು ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ರಸ್ತೆ ಕಾಮಗಾರಿ ಪ್ರಾರಂಭಕ್ಕೂ ಮುನ್ನ ರೈತರು ತಮ್ಮ ತೋಟಗಳಿಗೆ ಪೈಪು ಮತ್ತೀತರ ಮೂಲಭೂತ ಸೌಕರ್ಯ ಕೆಲಸಗಳನ್ನು ಪೂರ್ಣಗೊಳಿಸಬೇಕು. ನಂತರ ಯಾವುದೇ ಕಾರಣಕ್ಕೂ ರಸ್ತೆ ಅಗೆಯಬಾರದು ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.
ನಿವೃತ್ತ ಶಿಕ್ಷಕ ವಿ. ವಿ. ಅರಕೇರಿ ಮಾತನಾಡಿ, ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದಾಗ ನೀರಾವರಿಯಷ್ಟೇ ಅಲ್ಲ, ಸಮುದಾಯ ಭವನ, ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಈಗ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ ದೇಸಾಯಿ, ಪ್ರಶಾಂತ ಹಿರೇದೇಸಾಯಿ, ಕೆ. ಎಚ್. ಮುಂಬಾರೆಡ್ಡಿ, ಎಚ್. ಬಿ. ಹರನಟ್ಟಿ, ವೆಂಕಣ್ಣ ಬಿದರಿ, ಉಮೇಶ ಮಲ್ಲಣ್ಣವರ, ಸದಾಶಿವ ನಾಯಕ, ರವಿ ಬಿರಾದಾರ, ವಾಸು ಗಿರೇಗೋಳ, ಲೋಕೋಪಯೋಗಿ ಇಲಾಖೆ ಎಇಇ ಪ್ರಮೋದಕುಮಾರ ಹಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ನಾನಾ ಮುಖಂಡರು ಉಪಸ್ಥಿತರಿದ್ದರು.