
ವಿಜಯಪುರ: ಮೇ.೩:ಭಗವಾನ್ ಗೌತಮ ಬುದ್ಧರು ಬೋಧಿಸಿದ ಅಷ್ಟಾಂಗ ಮಾರ್ಗವು ಮಾನವ ಜೀವನಕ್ಕೆ ದಿಕ್ಕು ತೋರಿಸುವ ಶಾಶ್ವತ ಮೌಲ್ಯಗಳ ಸಂಕೇತವಾಗಿದ್ದು, ಅದನ್ನು ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪಜಾ/ಪಪಂ ಘಟಕದ ಸಹಯೋಗದಲ್ಲಿ ಇತ್ತಿಚಿಗೆ ಹಮ್ಮಿಕೊಂಡಿದ್ದ ಭಗವಾನ್ ಗೌತಮ ಬುದ್ಧರ ೨೫೭೦ನೇ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಬುದ್ಧರು ಅನುಸರಿಸಿದ ಜೀವನ ಮಾರ್ಗದ ಮಹತ್ವವನ್ನು ವಿವರಿಸಿ, ಅಷ್ಟಾಂಗ ಮಾರ್ಗವು ವ್ಯಕ್ತಿಯ ಒಳಗೊಳಗಿನ ಶಾಂತಿ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಬುದ್ಧರು ವಿಶ್ವದ ಮೊದಲ ಶಾಂತಿದೂತರಾಗಿದ್ದು, ಅವರ ಶಾಂತಿ ಸಂದೇಶಗಳು ಇಂದಿನ ದಿನಗಳಲ್ಲಿಯೂ ಅತ್ಯಂತ ಪ್ರಸ್ತುತವಾಗಿವೆ ಎಂದು ಹೇಳಿದರು.
ಪ್ರಾಧ್ಯಾಪಕ ಪ್ರೊ. ರಾಜಕುಮಾರ ಪಿ. ಮಾಲಿಪಾಟೀಲ್ ಮಾತನಾಡಿ, ಬುದ್ಧನ ತತ್ವಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಹನುಮಂತಯ್ಯಾ ಪೂಜಾರಿ, ಪ್ರೊ. ಉದಯಕುಮಾರ ಕುಲಕರ್ಣಿ, ಡಾ. ಅಕ್ಷಯ ಯಾರ್ದಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಸ್ನಾತಕ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿನಿಯರು ಮತ್ತಿತರಿದ್ದರು.
ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕÀ ಡಾ. ಸಂಜೀವಕುಮಾರ ಗಿರಿ ನಿರೂಪಿಸಿ ಸ್ವಾಗತಿಸಿದರು. ಪಜಾ/ಪಪಂ ಘಟಕದ ಉಪನಿರ್ದೇಶಕ ಡಾ. ಬಾಬು ಆರ್. ಎಲ್. ವಂದಿಸಿದರು.






















