
ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ ಎರಡು ದಿನಗಳ ಅಂತರ್ರಾಷ್ಟ್ರೀಯ ‘ಮಾಧ್ಯಮ ಸಮಾವೇಶ ೨೦೨೬’ಪನೀರ್ ಕ್ಯಾಂಪಸ್ನಲ್ಲಿ ಮಂಗಳವಾರ ಉದ್ಘಾಟನೆಗೊಂಡಿತು.
“ಪ್ರಚಾರದಿಂದ ಶಾಂತಿಯವರೆಗೆ: ಜಾಗತಿಕ ಸಂಘರ್ಷಗಳಲ್ಲಿ ಮಾಧ್ಯಮದ ಜವಾಬ್ದಾರಿಯ ಮರುಚಿಂತನೆ”ಎಂಬ ವಿಷಯದ ಮೇಲೆ ಬೆಳಕು ಚೆಲ್ಲುವ ಈ ಸಮಾವೇಶವನ್ನು ‘ದಿ ನ್ಯೂಸ್ ಮಿನಿಟ್ನ ಮುಖ್ಯ ಸಂಪಾದಕಿ ಧನ್ಯಾ ರಾಜೇಂದ್ರನ್ ಉದ್ಘಾಟಿಸಿ, ಈಗಿನ ಕಾಲಘಟ್ಟದಲ್ಲಿ ಪತ್ರಿಕೋದ್ಯಮದ ನೈತಿಕ ಸವಾಲುಗಳ ಕುರಿತು ಮಾತನಾ ಡಿದರು. ಹೊಸ ತಲೆಮಾರಿನ ಪತ್ರಕರ್ತರು ತಂತ್ರಜ್ಞಾನವನ್ನು ಅಪಾಯಕಾರಿಯೆಂದು ತಿಳಿಯಬೇಕಾಗಿಲ್ಲ. ಕೃತಕ ಬುದ್ಧಿಮತ್ತೆಯು ಕೆಲಸವನ್ನು ಕಸಿದುಕೊಳ್ಳುತ್ತದೆ ಎಂಬ ಭಯ ಬೇಡ. ನಮ್ಮ ವೃತ್ತಿಪರತೆ, ಜನಪರತೆಯನ್ನು ಸರಿದಾರಿಯಲ್ಲಿ ಇರಿಸಿಕೊಂಡರೆ ಕೃತಕ ಬುದ್ಧಿಮತ್ತೆಯು ನಮಗೆ ಅನುಕೂಲಕಾರಿಯಾಗಿಯೂ ಕೆಲಸ ಮಾಡಬಲ್ಲದು ಎಂದು ಅವರು ಆಶಯ ವ್ಯಕ್ತಪಡಿಸಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ಅಧ್ಯಕ್ಷೀಯ ನುಡಿಗಳನ್ನಾಡಿ,ಮಾಧ್ಯಮವು ವಸ್ತುನಿಷ್ಠತೆಯನ್ನು ಅಳವಡಿಸಿಕೊಳ್ಳಬೇಕು. ಜನಪರವಾದ ವರದಿಗಾರಿಕೆಯನ್ನು ಮಾಡಬೇಕು ಎಂದರು.
ಅಮೆರಿಕದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯ ಡಾ. ನಿಖಿಲ್ ಮೊರೊ ದಿಕ್ಸೂಚಿ ಭಾಷಣ ಮಾಡಿ ‘ ಜಾಗತಿಕ ಪತ್ರಿಕೋದ್ಯಮವು ಕೇವಲ ದತ್ತಾಂಶಗಳನ್ನು ಆಧರಿಸಿ ಸುದ್ದಿ ಮಾಡದೇ ಮಾನವಪರ ವರದಿಗಾರಿಕೆ, ವಿಶ್ಲೇಷಣೆಗೆ ಒತ್ತು ನೀಡಬೇಕು ’ಎಂದು ಹೇಳಿದರು.
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಮುಖ್ಯಸ್ಥೆ ಡಾ. ಮೌಲ್ಯಾ ಬಾಲಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ, ಸಹ ಪ್ರಾಧ್ಯಾಪಕಿ ಡಾ. ಅನಿಶಾ ಸಮಾವೇಶದ ಆಶಯ ನುಡಿಗಳನ್ನಾಡಿದರು. ಸಂಶೋಧಕಿ ಅಂಜಲಿ ರೈ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಮಾಧ್ಯಮ ಗೋಷ್ಠಿಗಳು ನಡೆದವು. ನಿವೃತ್ತ ಲೆಫ್ಟಿನೆಂಟ್ ಜನರಲ್ ಎ.ಕೆ. ಭಟ್, ನ್ಯೂಸ್ ಮಿನ್ಯುಟ್ ಮುಖ್ಯ ಸಂಪಾದಕಿ ಧನ್ಯಾ ರಾಜೇಂದ್ರನ್, ಟಿವಿ ೯ ಡಿಜಿಟಲ್ ಸಂಪಾದಕ ಡಾ.ಭಾಸ್ಕರ್ ಹೆಗ್ಡೆ, ರುದ್ರಂ ಡೈನಾಮಿಕ್ಸ್ ಸಹ ನಿರ್ದೇಶಕಿ ಡಾ.ಶ್ರದ್ಧಾ ರೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

























