
ನವದೆಹಲಿ. ಜು.18:- ಸಂದೇಹಾಸ್ಪದ ಪೌರತ್ವ ಹೊಂದಿರುವ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ತಗೆದುಹಾಕುವ ಸಾಂವಿಧಾನಿಕ ಅಧಿಕಾರ ಭಾರತೀಯ ಚುನಾವಣಾ ಆಯೋಗಕ್ಕೆ ಇದೆ. ಆದರೆ, ಯಾವುದೇ ವ್ಯಕ್ತಿ ಭಾರತದ ಪ್ರಜೆಯೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವ ಕಾನೂನಾತ್ಮಕ ಹಕ್ಕು ಆಯೋಗಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಕುರಿತು ಸ್ಪಷ್ಟನೆ ನೀಡಿದೆ. ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳದ ಪ್ರಕರಣಗಳನ್ನು ಉಲ್ಲೇಖಿಸಿದ ನ್ಯಾಯಾಲಯ, “ಚುನಾವಣಾ ಆಯೋಗವು ಕೇವಲ ಮತದಾರರ ಪಟ್ಟಿಯನ್ನು ನಿರ್ವಹಿಸುವ ಸಂಸ್ಥೆಯಾಗಿದ್ದು, ಪೌರತ್ವ ನಿರ್ಧರಿಸುವ ಪ್ರಾಧಿಕಾರವಲ್ಲ” ಎಂದು ಪುನರುಚ್ಚರಿಸಿದೆ.
ಸಂದೇಹಾಸ್ಪದ ಪೌರತ್ವದ ರುಜುವಾತುಗಳನ್ನು ಹೊಂದಿರುವ ಜನರ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ದೇಶದಲ್ಲಿ ಒಬ್ಬ ವ್ಯಕ್ತಿಯ ಪೌರತ್ವವನ್ನು ನಿರ್ಣಯಿಸಲು ಕೇಂದ್ರ ಸರ್ಕಾರವೇ ಏಕೈಕ ಸಮರ್ಥ ಪ್ರಾಧಿಕಾರವಾಗಿದೆ ಎಂದು ಕೋರ್ಟ್ ಹೇಳಿದೆ.
ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ಎನ್ಆರ್ಸಿ ವಿರೋಧಿ ಜಂಟಿ ವೇದಿಕೆಯ ಸಂಚಾಲಕ ಪ್ರಸೆಂಜಿತ್ ಬೋಸ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಈ ಆದೇಶ ಹೊರಡಿಸಿದೆ. ವಿಶೇಷ ಪರಿಷ್ಕರಣೆ ವೇಳೆ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡ ಜನರಿಗೆ ಪಶ್ಚಿಮ ಬಂಗಾಳ ಸರ್ಕಾರವು ಪಡಿತರ ಸೇರಿದಂತೆ ಅಗತ್ಯ ಸಾಮಾಜಿಕ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ನಿರಾಕರಿಸುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಕೋಲಾರ/ಬಂಗಾಳ ಶೈಲಿಯ ಅಪೀಲುಗಳು: ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಆಯೋಗದ ನಿರ್ಧಾರದ ವಿರುದ್ಧ ಸುಮಾರು 33 ಲಕ್ಷ ಜನರು ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಕೋರ್ಟ್ಗೆ ತಿಳಿಸಿದರು.
ಅಪೀಲು ನ್ಯಾಯಾಧಿಕರಣಗಳು ಇದುವರೆಗೆ ವಿಲೇವಾರಿ ಮಾಡಿರುವ 30,000 ಮೇಲ್ಮನವಿಗಳ ಪೈಕಿ ಶೇಕಡಾ 70 ರಷ್ಟು ಪ್ರಕರಣಗಳಲ್ಲಿ ಸಾರ್ವಜನಿಕರ ಪರ ತೀರ್ಪು ಬಂದಿದ್ದು, ಅವರ ಹೆಸರುಗಳನ್ನು ಪುನಃ ಸೇರಿಸಲು ಆದೇಶಿಸಲಾಗಿದೆ.
ಚುನಾವಣಾ ಆಯೋಗದ ನಿರ್ಧಾರವನ್ನೇ ಅಂತಿಮ ಪೌರತ್ವ ನಿರ್ಧಾರವೆಂದು ಪರಿಗಣಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಅನ್ನಪೂರ್ಣ ಯೋಜನೆಯಡಿ ಸಿಗುವ ಆಹಾರ ಧಾನ್ಯಗಳನ್ನು ನಿಲ್ಲಿಸಲಾಗುತ್ತಿದೆ ಎಂದು ವಕೀಲರು ಕಳವಳ ವ್ಯಕ್ತಪಡಿಸಿದರು.
ಮೇಲ್ಮನವಿಗಳ ತ್ವರಿತ ವಿಲೇವಾರಿಗಾಗಿ ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೊರೆ ಹೋಗುವಂತೆ ಸೂಚಿಸಿದ ಸುಪ್ರೀಂ ಪೀಠವು, ಪ್ರಕರಣದ ಇತರ ಆಯಾಮಗಳ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿದೆ.






























