
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ ೨೮ರಿಂದ ಅಕ್ಟೋಬರ್ ೪ರವರೆಗೆ ನಡೆಯಲಿರುವ ೨೮ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಮಂಗಳವಾರ ಮಹೋತ್ಸವ ಸಭಾಭವನದಲ್ಲಿ ನಡೆಯಿತು.
ಭಜನಾ ಕಮ್ಮಟದ ಕಾರ್ಯದರ್ಶಿ ಎ. ವೀರು ಶೆಟ್ಟಿ ಮಾತನಾಡಿ, ತಾಲೂಕು ಹಾಗೂ ವಲಯ ಭಜನಾ ಪರಿಷತ್ಗಳ ಮೂಲಕ ಬೇಸಿಗೆ ರಜೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, ಕಾನೂನು ಮಾಹಿತಿ ಮತ್ತು ಆರೋಗ್ಯ ಶಿಬಿರ, ಭಜನೋತ್ಸವ, ಮನೆ-ಮನೆ ಭಜನೆ, ಸತ್ಸಂಗ, ಶ್ರಮದಾನ, ಸ್ವಚ್ಛತಾ ಕಾರ್ಯಕ್ರಮ, ರಾಷ್ಟ್ರೀಯ ದಿನಾಚರಣೆ ಹಾಗೂ ಹಬ್ಬ-ಹರಿದಿನಗಳ ಆಚರಣೆ ಸೇರಿದಂತೆ ಹಲವು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
“ಭಜನಾ ಪರಿಷತ್ನ ಚಟುವಟಿಕೆಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಹಾಗೂ ಸಂಸ್ಕಾರಯುತ ಪರಿವರ್ತನೆಗೆ ಕಾರಣವಾಗಿವೆ. ಈ ವರ್ಷದ ಭಜನಾ ಕಮ್ಮಟದ ಪೂರ್ವತಯಾರಿಗಳು ರಾಜ್ಯದಾದ್ಯಂತ ಉತ್ತಮವಾಗಿ ನಡೆಯುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ’ ಎಂದು ಅವರು ತಿಳಿಸಿದರು.
ಕಮ್ಮಟದ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಾದ್ಯಂತ ಭಜನಾ ಪರಿಷತ್ ಮೂಲಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಜನಾ ತರಬೇತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಈಗಾಗಲೇ ರಾಜ್ಯ ಭಜನಾ ಪರಿಷತ್ ಪದಾಧಿಕಾರಿಗಳ ಸಭೆ ನಡೆಸಲಾಗಿದೆ ಎಂದರು.
೨೮ನೇ ವರ್ಷದ ಭಜನಾ ಕಮ್ಮಟದ ಶಿಬಿರಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ತಾಲೂಕು ಮಟ್ಟದಲ್ಲಿ ಭಜನಾ ಪರಿಷತ್ ಸಭೆಗಳು ನಡೆಯುತ್ತಿವೆ. ಸೆಪ್ಟೆಂಬರ್ ೨೭ರಂದು ಮಧ್ಯಾಹ್ನ ೨.೩೦ರಿಂದ ಶಿಬಿರಾರ್ಥಿಗಳ ನೋಂದಣಿ ಆರಂಭವಾಗಲಿದೆ ಎಂದು ತಿಳಿಸಿದರು.
ಕಮ್ಮಟದ ವಸತಿ ವ್ಯವಸ್ಥೆ, ಉದ್ಘಾಟನಾ ಸಮಾರಂಭ, ನಗರ ಭಜನೆ, ಸಾಧಕ ಭಜನಾ ಮಂಡಳಿಗಳ ಆಯ್ಕೆ, ಸಂಪನ್ಮೂಲ ವ್ಯಕ್ತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅಕ್ಟೋಬರ್ ೪ರಂದು ನಡೆಯಲಿರುವ ಭಜನೋತ್ಸವ ಮತ್ತು ಸಮಾರೋಪ ಸಮಾರಂಭದ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ವಿವಿಧ ಜವಾಬ್ದಾರಿಗಳ ನಿರ್ವಹಣೆಗೆ ಪೂರಕ ಸಮಿತಿಗಳನ್ನು ರಚಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಭಜನಾ ಪರಿಷತ್ ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್ ವಹಿಸಿದ್ದರು.
ವೇದಿಕೆಯಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಬಿ. ಭುಜಬಲಿ, ಲಕ್ಷ್ಮೀನಾರಾಯಣ ರಾವ್, ಪಾರ್ಶ್ವನಾಥ್ ಜೈನ್, ಮಹಾವೀರ ಅಜ್ರಿ, ಕೇಶವ ಪಿ., ಡಾ. ಶಶಿಕಾಂತ್ ಜೈನ್, ರತ್ನವರ್ಮ ಜೈನ್ ಹಾಗೂ ಶ್ರೀ ನಿವಾಸ ರಾವ್ ಉಪಸ್ಥಿತರಿದ್ದರು.
ಭಜನಾ ಕಮ್ಮಟದ ವಿವಿಧ ಉಪಸಮಿತಿಗಳ ಪ್ರಮುಖರು, ಊರಿನ ಮಹನೀಯರು ಹಾಗೂ ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಪವಿತ್ರ ಸುನಿಲ್ ಸ್ವಾಗತಿಸಿದರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.































