Home ಜಿಲ್ಲೆ ಬಳ್ಳಾರಿಯಲ್ಲಿ ಸಂಭ್ರಮದ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಬಳ್ಳಾರಿಯಲ್ಲಿ ಸಂಭ್ರಮದ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಬಳ್ಳಾರಿ,ಜೂ.21- ‘ಆರೋಗ್ಯವೇ ಭಾಗ್ಯ’ ಎಂಬ ದಿವ್ಯ ಮಂತ್ರಕ್ಕೆ ಜೀವ ತುಂಬುವಂತೆ, ಭಾನುವಾರ ಜಿಲ್ಲಾ ಕೇಂದ್ರದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಯಿತು.

ವಯಸ್ಸಿನ ಭೇದವಿಲ್ಲದೆ, ನೂರಾರು ಜನರು ಮುಂಜಾನೆಯ ತಂಗಾಳಿಯಲ್ಲಿ ಯೋಗಾಸನಗಳನ್ನು ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಸಂದೇಶವನ್ನು ಸಾರಿದರು.

ಸುರ್ಯೋದಯದ ವೇಳೆಗೆ ‘ಆರೋಗ್ಯಕರ ವೃದ್ದಾಪ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಎಸ್.ಜಿ. ಲಾ-ಕಾಲೇಜು ಆವರಣ(ಶೆಟ್ಟರ್ ಗುರುಶಾಂತಪ್ಪ ಲಾ ಕಾಲೇಜು ಮೈದಾನ)ವು ಯೋಗ ಪಟುಗಳಿಂದ ಕಂಗೊಳಿಸುತ್ತಿತ್ತು.

ಪೂರ್ವ ನಿಗದಿಯಂತೆ ಮುಂಜಾನೆ 7 ಗಂಟೆಯಿಂದಲೇ ನೆರೆದ ಸಾವಿರಾರು ಸಾರ್ವಜನಿಕರು ಸೂರ್ಯ ನಮಸ್ಕಾರ, ಪ್ರಾಣಾಯಾಮ ಹಾಗೂ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಅಧಿಕಾರಿಗಳು, ಸಿಬ್ಬಂದಿ, ಶಾಲಾ- ಕಾಲೇಜು ಮಕ್ಕಳು, ಹಿರಿಯ ನಾಗರಿಕರು, ಸಾರ್ವಜನಿಕರು ಎಲ್ಲರೂ ಒಂದೇ ಲಯದಲ್ಲಿ ಯೋಗ ಮಾಡಿ ಗಮನ ಸೆಳೆದರು.

ಪತಂಜಲಿ ಯೋಗ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ಯೋಗ ತರಬೇತುದಾರ ಇಸ್ವಿ ಪಂಪಾಪತಿ ಅವರು ದೈನಂದಿನ ಜೀವನಕ್ಕೆ ಅಗತ್ಯವಿರುವ ಪ್ರಮುಖ ಆಸನಗಳ ಮಹತ್ವವನ್ನು ತಿಳಿಸಿಕೊಡುವ ಮೂಲಕ 45 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಿಸಿದರು.

ಯೋಗ ಎನ್ನುವುದು ಕೇವಲ ಕಸರತ್ತಲ್ಲ; ಅದು ನಮ್ಮ ಆತ್ಮವನ್ನು ಪ್ರಕೃತಿಯೊಂದಿಗೆ ಜೋಡಿಸುವ ಅದ್ಭುತ ಕಲೆ. ಇಂದಿನ ಒತ್ತಡದ ಜಗತ್ತಿಗೆ ಯೋಗವೇ ಸಂಜೀವಿನಿ ಎಂದು ತಿಳಿಸಿದರು.

ವರ್ಷದ 365 ದಿನಗಳೂ ಯೋಗವನ್ನು ನಮ್ಮ ಜೀವನದ ಒಂದು ಭಾಗವಾಗಿಸಿಕೊಳ್ಳಬೇಕು. ದಿನಕ್ಕೆ ಕೇವಲ 20 ರಿಂದ 30 ನಿಮಿಷಗಳ ಯೋಗಾಭ್ಯಾಸವು ನಮ್ಮನ್ನು ದೈಹಿಕವಾಗಿ ಸದೃಢ ಹಾಗೂ ಮಾನಸಿಕವಾಗಿ ಶಾಂತವಾಗಿಡಬಲ್ಲದು ಎಂಬ ಸಂಕಲ್ಪದೊಂದಿಗೆ ನೆರದಿದ್ದವರಿಗೆ ಯೋಗಾಭ್ಯಾಸ ನೆರವೇರಿಸಿದರು.

ಬಳಿಕ ಕಾರ್ಯಕ್ರಮದಲ್ಲಿ ಯೋಗ ಪಟುಗಳಾದ ಶಾಲಾ ಮಕ್ಕಳು ಯೋಗ ಪ್ರದರ್ಶನದ ಮೂಲಕ ನೃತ್ಯ ಪ್ರದರ್ಶನ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್ ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಫಣೇಂಧರ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿ- ಸಿಬ್ಬಂದಿ, ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಯೋಗಾಭ್ಯಾಸದಲ್ಲಿ ಭಾಗವಹಿಸಿದವರೆಲ್ಲರಿಗೂ ಅರಣ್ಯ ಇಲಾಖೆ ವತಿಯಿಂದ ವಿವಿಧ ಬಗೆಯ ಸಸಿ- ಗಿಡಗಳನ್ನು ವಿತರಿಸಲಾಯಿತು.