
ಕೆಜಿಎಫ್.ಏ೨೧:ವಿಶ್ವಮಾನವ ಬಸವಣ್ಣ ೧೨ನೇ ಶತಮಾನದ ಸಮಾಜ ಸುಧಾರಕರು, ಮಹಾತ್ಮರು, ಜಗತ್ತಿನಲ್ಲಿ ಹೊಸ ವಿಚಾರ ಧಾರೆಯನ್ನು ಹರಿಸಿದವರು, ಜಾತಿ ನಿರ್ಮೂಲನೆಗಾಗಿ ಅಸ್ಪೃಶ್ಯತೆಯ ವಿನಾಶಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಬಸವಣ್ಣ ಇಂದಿನ ಸಮಾಜಕ್ಕೆ ಅವಶ್ಯಕವೆಂದು ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಲಕ್ಷ್ಮಯ್ಯ ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಲಕ್ಷ್ಮಯ್ಯ ಅವರು ಮಾತನಾಡಿ, ಅನುಭವ ಮಂಟಪದ ಮೂಲಕ ಈಗಿನ ಸಂಸತ್ತಿನ ಕಲ್ಪನೆಯನ್ನು ೧೨ನೇ ಶತಮಾನದಲ್ಲೇ ನೀಡಿದ ಮಹಾ ಪುರುಷ, ಜಾತಿ ಬೇಧವಿಲ್ಲದೆ ಪ್ರತಿಯೊಬ್ಬ ಮನುಷ್ಯನನ್ನೂ ಸಮಾನ ಎಂದು ಬಸವಣ್ಣ ಬೋಧಿಸಿದ್ದು, ಎಲ್ಲಾ ರೀತಿಯ ದುಡಿಮೆಯೂ ಅಷ್ಟೇ ಮುಖ್ಯ ಎಂದು ತಿಳಿಸಿಕೊಟ್ಟಿದ್ದರು.
ಹೀಗೆ ಕಾಯಕವೇ ಕೈಲಾಸ ಎಂದು ಸಾರಿದ ವಿಶ್ವ ಗುರು ಬಸವಣ್ಣನವರು ಸಾಮಾಜಿಕ ಪಿಡುಗುಗಳನ್ನು ಹೊಡೆದೊಡಿಸಲು ಪ್ರಯತ್ನಪಟ್ಟರು, ಇವರ ತತ್ವಶಾಸ್ತ್ರ ಮತ್ತು ವಚನಗಳು ಇಂದಿಗೂ ಪ್ರಸ್ತುತವಾಗಿದೆ. ಇಂತಹ ಸಂದೇಶ ಮತ್ತು ನೀತಿ ಮಾರ್ಗಗಳನ್ನು ನಾವು ನೀವೆಲ್ಲ ಉಳಿಸಿ ಬೆಳೆಸಬೇಕಾಗಿದೆ, ಜೊತೆಜೊತೆಗೆ ಅನುಸರಣೆ ಮಾಡಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಲಕ್ಷ್ಮಯ್ಯ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿಸ್ತಂತು ಪೊಲೀಸ್ ಇನ್ಸ್ಪೆಕ್ಟರ್ ನಾಗಪ್ಪ ಖಾನಾಪೂರ, ಪಿಎಸ್ಐ ಮಹೇಶ್ ಮಾಲಿ, ಆರ್ಎಸ್ಐ ಯಮನಪ್ಪ ಪಾತ್ರೂಟ, ಶಾಖಾಧೀಕ್ಷಕ ವಿ.ಮಂಜುನಾಥ ಸೇರಿದಂತೆ ಜಿಲ್ಲೆಯ ಪಿಎಸ್ಐ, sಎಎಸ್ಐ, ಸಿಬ್ಬಂದಿಗಳು ಹಾಜರಿದ್ದರು. ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಸಿಬ್ಬಂದಿಗಳು ಮತ್ತು ಲಿಪಿಕ ನೌಕರರು ಭಾಗವಹಿಸಿದ್ದರು.
ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಹಾಗೂ ಇಲಾಖೆಯ ಎಲ್ಲಾ ಕಛೇರಿಗಳಲ್ಲಿ ಬಸವಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

























