Home ಜಿಲ್ಲೆ ತುಮಕೂರು ಇ-ಕೆವೈಸಿ ಮಾಡಿಸದಿದ್ದರೆ ಕೈ ಸೇರದು ಪಿಎಂ ಕಿಸಾನ್ ಕಂತು

ಇ-ಕೆವೈಸಿ ಮಾಡಿಸದಿದ್ದರೆ ಕೈ ಸೇರದು ಪಿಎಂ ಕಿಸಾನ್ ಕಂತು

ಹುಳಿಯಾರು, ಸೆ. ೪- ನಕಲಿ ಫಲಾನುಭವಿಗಳನ್ನು ತಡೆಯಲು ಮತ್ತು ಪಾರದರ್ಶಕವಾಗಿ ಹಣ ಜಮೆ ಮಾಡಲು ಪಿ.ಎಂ. ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಪಡೆಯಲು ಕೇಂದ್ರ ಸರ್ಕಾರ ರೈತರಿಗೆ ಬಯೋಮೆಟ್ರಿಕ್, ಫೇಸ್ ಆಧಾರಿತ ಇ-ಕೆವೈಸಿ ಕಡ್ಡಾಯಗೊಳಿಸಿದೆ. ಒಂದು ವೇಳೆ ಕವೈಸಿ ಮಾಡಿಸದಿದ್ದರೆ, ಮುಂದಿನ ಕಂತಿನ ಹಣದಿಂದ ವಂಚಿತರಾಗುವುದ ನಿಶ್ಚಿತ ಎಂದು ಚಿಕ್ಕನಾಯಕನಹಳ್ಳಿ ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ಶಿವರಾಜ್ ಕುಮಾರ್ ತಿಳಿಸಿದ್ದಾರೆ.


ಪಿ.ಎಂ. ಕಿಸಾನ್ ಯೋಜನೆಯ ೨೪ನೇ ಕಂತು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಕೇಂದ್ರ ಯೋಜನೆಯಡಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ (ಡಿಬಿಟಿ) ಮೂಲಕ ೨,೦೦೦ ರೂ. ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ವಾರ್ಷಿಕ ಮೂರು ಕಂತಿನಲ್ಲಿ ರೈತರ ಖಾತೆಗೆ ೬೦೦೦ ರೂ. ಲಭ್ಯವಾಗುತ್ತಿದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಮುಂದಿನ ಕಂತನ್ನು ನೇರವಾಗಿ ರೈತರ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗಳಿಗೆ ಪಡೆಯಲು ಅರ್ಹ ಫಲಾನುಭವಿಗಳಿಗೆ ಇ-ಕೆವೈಸಿ ಅನಿವಾರ್ಯ ಎಂದು ಅವರು ಹೇಳಿದ್ದಾರೆ.


ಕೇಂದ್ರ ಮಾರ್ಗಸೂಚಿ: ನೇರ ನಗದು ವರ್ಗಾವಣೆ ಮೂಲಕ ಈ ಹಣ ರೈತರ ಖಾತೆಗೆ ಸೇರುತ್ತಿದ್ದರೂ ಈ ಬಾರಿ ಕಂತು ಬಿಡುಗಡೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಅನ್ನು ಎಸ್.ಪಿಂ.ಸಿ.ಐ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಜತೆ ಲಿಂಕ್ ಮಾಡಿಸಿದ್ದರೂ ಈ ಸಲ ಪ್ರತಿಯೊಬ್ಬ ಫಲಾನುಭವಿ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿಕ ಇ- ಕೆವೈಸಿ ಮಾಡಿಸಲೇಬೇಕಾಗಿದೆ. ಈ ಮೂಲಕ ಮೃತರನ್ನು ಕೈಬಿಟ್ಟು ಅರ್ಹ ಫಲಾನುಭವಿಗಳ ಪತ್ತೆಗೆ ಸರ್ಕಾರ ಮುಂದಾಗಿದೆ.


ಪಿ.ಎಂ. ಕಿಸಾನ್ ಯೋಜನೆಯ ಇ-ಕೆವೈಸಿ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ಕಂತಿನ ಹಣ ಬಿಡುಗಡೆಗೊಳ್ಳುವ ಪೂರ್ವದಲ್ಲಿಯೇ ಇ-ಕೆವೈಸಿ ಮಾಡಿಸಿಕೊಳ್ಳಬೇಕಿದೆ. ಒಂದು ವೇಳೆ ಇ-ಕೆವೈಸಿ ವಿವರ ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದಲ್ಲಿ ಫಲಾನುಭವಿ ಖಾತೆಗೆ ಹಣ ಬಿಡುಗಡೆಗೆ ಅಡ್ಡಿ ಆಗಬಹುದು.


ಫೇಸ್, ಬಯೋಮೆಟ್ರಿಕ್: ರೈತರು ಎರಡು ವಿಧಾನಗಳಲ್ಲಿ ಯಾವುದನ್ನಾದರೂ ಬಳಸಿಕೊಂಡು ಇ-ಕೆವೈಸಿ ಪೂರ್ಣಗೊಳಿಸಬಹುದು, ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿಯನ್ನು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ) ಮತ್ತು ರಾಜ್ಯ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಿಸಬಹುದಾಗಿದೆ. ಜತೆಗೆ ಮುಖ ದೃಢೀಕರಣ ಆಧಾರಿತ ಇ-ಕೆವೈಸಿ ಮಾಡಿಕೊಳ್ಳಲು ಪಿ.ಎಂ.ಕಿಸಾನ್ ಮೊಬೈಲ್ ಆಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಇದು ವಿಶೇಷವಾಗಿ ಬೆರಳಚ್ಚು ಸಾಧ್ಯವಿಲ್ಲದವರಿಗೆ ನೆರವಾಗಲಿದೆ.


ಮೊಬೈಲ್‌ನಲ್ಲೂ ಇ-ಕೆವೈಸಿ
ಫಲಾನುಭವಿಗಳು ಸ್ವಯಂ ಪ್ರೇರಿತವಾಗಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೂಡ ಇ-ಕೆವೈಸಿ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್ ನಿಂದ ಪಿಎಂ-ಕಿಸಾನ್ ಮೊಬೈಲ್ ಆಪ್ ಮತ್ತು ಆಧಾರ್ ಫೇಸ್ ಆರ್ಡಿ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ರೈತರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು. ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ತಮ್ಮ ಮುಖವನ್ನು ಸ್ಕ್ಯಾನ್ ಮಾಡಲು ಒಪ್ಪಿಗೆ ನೀಡಿದರೆ, ಇ-ಕೆವೈಸಿ ಪೂರ್ಣಗೊಂಡಿದೆ ಎಂದು ಗುರುತಿಸಲಾಗುತ್ತದೆ. ತಾಲ್ಲೂಕಿನ ಎಲ್ಲಾ ರೈತರು ಇ-ಕೆವೈಸಿ ಮಾಡಿಸಿ ಪಿ.ಎಂ. ಕಿಸಾನ್ ಯೋಜನೆಯ ಮೊತ್ತವನ್ನು ಪಡೆದುಕೊಳ್ಳಬೇಕು ಎಂದು ಶಿವರಾಜ್‌ಕುಮಾರ್ ತಿಳಿಸಿದ್ದಾರೆ.