
ಯಾದಗಿರಿ,ಮೇ.14-ನಗರದ ಖಾಸಗಿ ಲಾಡ್ಜ್ವೊಂದರಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ನಗರದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಹೈದರಾಬಾದ್ನ ವಿನಾಯಕನಗರ ನಿವಾಸಿ ಲಕ್ಷ್ಮಣರಾವ್ (51) ಮೃತ ವ್ಯಕ್ತಿಯಾಗಿದ್ದು, ಮೃತನ ಕುತ್ತಿಗೆಗೆ ಟವೆಲ್ ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತನೊಂದಿಗೆ ಯಾದಗಿರಿಗೆ ಬಂದಿದ್ದ ಅಕ್ಕ ಸಜ್ಜಾ ವರಲಕ್ಷ್ಮಿ ಹಾಗೂ ಬಾವ ಸಜ್ಜಾ ವೆಂಕಟರತ್ನ ಘಟನೆ ಬಳಿಕ ನಾಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಮೂರು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಮೂವರು ಖಾಸಗಿ ಹೋಟೆಲ್ನಲ್ಲಿ ತಂಗಿದ್ದರು. ಮಂಗಳವಾರ ಸಂಜೆ ಬಳಿಕ ಅಕ್ಕ-ಭಾವ ಹೋಟೆಲ್ನಿಂದ ಹೊರ ಹೋಗಿದ್ದು, ಬಳಿಕ ಮರಳಿ ಬಂದಿಲ್ಲ ಎನ್ನಲಾಗಿದೆ.
ಬುಧವಾರ ಬೆಳಿಗ್ಗೆ ಕೊಠಡಿ ಬಾಗಿಲು ತೆರೆಯದ ಹಿನ್ನೆಲೆ ಹೋಟೆಲ್ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಲಕ್ಷ್ಮಣರಾವ್ ಶವವಾಗಿ ಪತ್ತೆಯಾಗಿದ್ದಾನೆ.
ಘಟನೆ ತಿಳಿಯುತ್ತಿದ್ದಂತೆಯೇ ನಗರ ಪೆÇಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.
“ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ” ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.























