
ಬೆಂಗಳೂರುಏ.೧೪:ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಪಾರದರ್ಶಕ ನೇಮಕಾತಿ ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗ ಅಕ್ರಮಗಳಲ್ಲಿ ಮುಳುಗಿದೆ. ಈ ಸರ್ಕಾರ ಒಂದೇ ಒಂದು ನೇಮಕಾತಿ ಮಾಡಿಲ್ಲ. ಇಂಥ ಸಂದರ್ಭದಲ್ಲಿ ತಮ್ಮ ಹಕ್ಕು ಸಾಧನೆಗಾಗಿ ನಿರುದ್ಯೋಗಿ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.
ಪಕ್ಷದ ಕಚೇರಿಯಲ್ಲಿ ಕೇಂದ್ರ ಸಚಿವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತಾಡುತ್ತಾ, ಈ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿ. ಪೊಲೀಸ್ ಕೇಸುಗಳಿಗೆಲ್ಲ ಹೆದರಬೇಡಿ. ಆ ಕೇಸುಗಳನ್ನು ಕಿತ್ತೆಸೆಯುವುದು ನಮ್ಮ ಜವಾಬ್ದಾರಿ ಎಂದು ಕುಮಾರಸ್ವಾಮಿ ಅವರು ನಿರುದ್ಯೋಗಿ ಯುವಕರಿಗೆ ಧೈರ್ಯ ತುಂಬಿದರು.
ಈ ಕೆಟ್ಟ ಸರ್ಕಾರದ ವಿರುದ್ಧ ಇಡೀ ರಾಜ್ಯದ ಎಲ್ಲೆಡೆ ಹೋರಾಟ ಮಾಡಬೇಕು. ಧಾರವಾಡ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಹೋರಾಟ ನಡೆಸಬೇಕು. ಇದನ್ನು ನಾನು ರಾಜಕೀಯಕ್ಕಾಗಿ ಕೇವಲ ರಾಜಕೀಯಕ್ಕಾಗಿ ಹೇಳುತ್ತಿಲ್ಲ. ಪ್ರತಿಭಾವಂತ ನಿರುದ್ಯೋಗಿ ಯುವಜನರ ಭವಣೆಯನ್ನು ಕಂಡು ರೋಸಿ ಹೋಗಿ ಹೇಳುತ್ತಿದ್ದೇನೆ ಎಂದು ಕೇಂದ್ರ ಸಚಿವರು ಬೇಸರದಿಂದ ಹೇಳಿದರು.
ಕೆಪಿಎಸ್ಸಿಯಲ್ಲಿ ಏನೇನು ನಡೆಯುತ್ತಿದೆ ನಾನು ಗಮನಿಸುತ್ತಿದ್ದೇನೆ. ಅದನ್ನು ಕ್ಲೀನ್ ಮಾಡುತ್ತೇನೆ ಎಂದು ನಿರಂತರವಾಗಿ ಹೇಳುತ್ತಿರುವ ಮುಖ್ಯಮಂತ್ರಿಗಳು ಇನ್ನೂ ಕ್ಲೀನ್ ಮಾಡುವುದರಲ್ಲಿ ಇದ್ದಾರೆ ಪಾಪ.. ಆದರೆ ಕೆಪಿಎಸ್ಸಿ ಮಾತ್ರ ಕೊಳೆತು ನಾರುತ್ತಿದೆ. ನಿರುದ್ಯೋಗಿ ಯುವಕರು ಬೀದಿಗೆ ಬೀದಿಗೆ ಬಂದು ಹೋರಾಟ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೆಪಿಎಸ್ಸಿಯಲ್ಲಿ ತಪ್ಪು ಮಾಡಿದವರನ್ನು ಹಾಗೆಯೇ ಬಿಟ್ಟಿದ್ದಾರೆ. ತಪ್ಪೇ ಮಾಡಿರುವ ವ್ಯಕ್ತಿಗಳ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿರುವ ವಿದ್ಯಾರ್ಥಿಗಳು ಇಂತಹ ಕೆಟ್ಟ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು. ಇಲ್ಲವಾದರೆ ಅವರಿಗೆ ನ್ಯಾಯ ಸಿಗಲ್ಲ. ೬೦ರಿಂದ ೭೦ ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಯುವ ಜನರಲ್ಲಿ ನಂಬಿಕೆ ಹುಟ್ಟಿಸಿದ್ದರು. ಎನ್ನುವುದಿಲ್ಲ ಈ ಸರ್ಕಾರ. ಇದೇ ಸಿದ್ದರಾಮಯ್ಯ ಅವರು ೨೦೧೧ರಲ್ಲಿ ಕೆಪಿಎಸ್ಸಿ ಮಾಡಿದ್ದ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿದ್ದರು. ಹಿಂಸೆ ಕೊಡುವುದಕ್ಕೂ ಇತಿಮಿತಿ ಇಲ್ಲವೇ? ಒಬ್ಬ ವ್ಯಕ್ತಿಯನ್ನಷ್ಟೇ ಗುರಿಯಾಗಿಸಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಯುವಕರು ಸಿದ್ದರಾಗಬೇಕು, ಮೊದಲು ಈ ಕೆಟ್ಟ ಸರ್ಕಾರವನ್ನ ಒದ್ದು ಹೊರಗೆ ಹಾಕಿ ಎಂದ ಕುಮಾರಸ್ವಾಮಿ ಅವರು ಕರೆ ನೀಡಿದರು.
ವಾರಕ್ಕೆ ಎರಡು ದಿನ ಕರ್ನಾಟಕದಲ್ಲಿ ಇರುತ್ತೇನೆ:
ಈ ಸರ್ಕಾರ ಹೋರಾಟ ಮಾಡು ಉದ್ದೇಶದಿಂದ ನಾನು ಕೂಡ ಸುಮ್ಮನೆ ಇರುವ ಹಾಗಿಲ್ಲ. ಜನರ ಪರವಾಗಿ ನಾನು ಸಹ ದನಿ ಎತ್ತಬೇಕಾಗಿದೆ. ಇನ್ನು ಮುಂದೆ ವಾರದಲ್ಲಿ ಎರಡು ದಿನ ಕರ್ನಾಟಕದಲ್ಲೇ ಇರುತ್ತೇನೆ. ಪಕ್ಷವನ್ನು ಸಂಘಟನೆ ಮಾಡುತ್ತೇನೆ ಹಾಗೂ ಜನರ ಪರವಾಗಿಯೂ ಹೋರಾಟ ನಡೆಸುತ್ತೇನೆ ಎಂದು ಕೇಂದ್ರ ಸಚಿವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ನಾನು ಮುಕ್ತ ಮನಸ್ಸಿನಿಂದ ಹೇಳುತ್ತಿದ್ದೇನೆ. ಈ ಸರ್ಕಾರದಿಂದ ರಾಜ್ಯಕ್ಕೆ ಒಳ್ಳೆಯದು ಆಗುವುದಿಲ್ಲ. ನಾವು ಅಧಿಕಾರದಲ್ಲಿದ್ದಾಗ ಮಾತ್ರ ಈ ರಾಜ್ಯಕ್ಕೆ ಒಳ್ಳೆಯದಾಗಿದೆ. ಹೀಗಾಗಿ ಮುಂದೆ ನಾವು ಜನರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕಾಗಿದೆ ಎಂದು ಸಚಿವರು ಹೇಳಿದರು.
ಮಹಿಳಾ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದರೆ ರಾಜಕೀಯ ಚಿತ್ರಣವೆ ಬದಲಾಗುತ್ತದೆ. ಮೋದಿಯವರ ನಾಯಕತ್ವದಲ್ಲಿ ಮಹಿಳೆಯರಿಗೆ ೩೩% ಮೀಸಲಾತಿ ಕೊಡಲಾಗುತ್ತಿದೆ. ಅಲ್ಲದೆ ಕ್ಷೇತ್ರಗಳ ಮರು ವಿಂಗಡಣೆ ನಂತರ ರಾಜ್ಯದಲ್ಲಿ ೪೨ ಲೋಕಸಭಾ ಕ್ಷೇತ್ರಗಳು ಅಸ್ತಿತ್ವಕ್ಕೆ ಬರಲಿವೆ. ಈ ೪೨ ಲೋಕಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ೩೩% ಮೀಸಲಾತಿ ದೊರೆಯಲಿದ್ದು, ನಮ್ಮ ಪಕ್ಷದಲ್ಲಿ ಮಹಿಳಾ ಕಾರ್ಯಕರ್ತರಿಗೆ ಹೆಚ್ಚಿನ ಉತ್ತೇಜನ ಕೊಡಲಿದ್ದೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಬಿಜೆಪಿಯವರು ಮಹಾ ಸುಳ್ಳುಗಾರರು ಎಂದು ಮುಖ್ಯಮಂತ್ರಿಗಳು ಭಾಷಣ ಮಾಡುತ್ತಾರೆ. ಆದರೆ, ಇವರು ಎಷ್ಟು ಸುಳ್ಳುಗಳು ಹೇಳಿದ್ದಾರೆ ಎಂಬುದು ಗೊತ್ತಿದೆ. ಯಾರು ಸುಳ್ಳುಗಾರರು ಎಂದು ಸಿದ್ದರಾಮಯ್ಯ ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ತಿರುಗಿ ನೀಡಿದರು.
ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಸಾಗರಕಟ್ಟೆ ಎಂಬ ಗ್ರಾಮ ಇದೆ. ಕೆ.ಆರ್.ನಗರದಿಂದ ಸಾಗರಕಟ್ಟೆಗೆ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು ನನ್ನ ಸರ್ಕಾರದ ಕಾಲದಲ್ಲಿ. ಆಗಲೇ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸೂಚನೆಯನ್ನು ನೀಡಿದ್ದೆ. ಆ ಇಲಾಖೆಯು ಹಣಕಾಸು ಮಂಜೂರಿಗೆ ನಿರ್ಧಾರ ತೆಗೆದುಕೊಂಡಿತ್ತು. ಈಗ ಸಿದ್ದರಾಮಯ್ಯ ಅವರು ಸೇತುವೆ ಉದ್ಘಾಟನೆ ಮಾಡಿ ಅದನ್ನು ತಾವೇ ಮಾಡಿದ್ದು ಎಂದು ಹೇಳುತ್ತಿದ್ದಾರೆ. ಪ್ರತಿಪಕ್ಷಗಳು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ತಮ್ಮ ಲೆಕ್ಕಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇಂಥ ಪ್ರವೃತ್ತಿಯನ್ನು ಅವರು ಬಿಡುವುದು ಉತ್ತಮ ಎಂದು ಸಚಿವ ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.
ಎಲ್ಲಿ ಹೋದರು ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳುವುದು ಬಿಟ್ಟು ಗ್ಯಾರಂಟಿಗಳ ಬಗ್ಗೆ ಭಜನೆ ಮಾಡುತ್ತಿದ್ದಾರೆ. ?೨೦೦೦ ಹಣದಿಂದ ಜನರು ಸುಖದ ಸುಪ್ಪತ್ತಿಗೆಯ ಮೇಲೆ ತೇಲುತ್ತಿದ್ದಾರೆ ಎಂದು ಕಥೆ ಕಟ್ಟಿ ಹೇಳುತ್ತಿದ್ದಾರೆ. ರಾಜ್ಯವನ್ನು ಆಳುವ ಜನ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಎಸಿ ರೂಮ್ನಲ್ಲಿ ಕೂತು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರೆ ಜನರ ಬವಣೆ ನೀಗುವುದಿಲ್ಲ. ಸಣ್ಣ ಸಣ್ಣ ಹಳ್ಳಿಗಳಿಗೆ ಹೋಗಿ ಅವರ ಪರಿಸ್ಥಿತಿಗಳನ್ನು ಖುದ್ದು ನೋಡಬೇಕು. ವಿಧಾನಸೌಧದ ಮುಂಬಾಗದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಸುಮ್ಮನೆ ಹಾರ ಹಾಕಿ ಬಂದರೆ ಸಾಕಾಗುವುದಿಲ್ಲ, ಅಂಬೇಡ್ಕರ್ ಅವರು ಯಾರು ಸಬಲರಾಗಬೇಕು ಎಂದು ಹೋರಾಡಿದ್ದಾರೋ ಅವರು ಸಬಲರಾಗಿದ್ದಾರಾ ಇಲ್ಲವಾ ಎಂಬುದನ್ನು ಅವರಿದ್ದಲ್ಲಿಗೆ ಹೋಗಿ ನೋಡಬೇಕು ಹಾಗೂ ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅದುವೇ ಸಂವಿಧಾನ ಶಿಲ್ಪಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಕೇಂದ್ರ ಸಚಿವರು ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದರು.
ಪ್ರಧಾನಿಗಳಿಗೆ ತುಂಬು ಹೃದಯದ ಸ್ವಾಗತ:
ನಾನು ಕೇಂದ್ರ ಸಚಿವನಾದ ಮೇಲೆ ಪ್ರಧಾನಿಗಳಾದ ನರೇಂದ್ರ ಮೋದಿಯವರು ಪ್ರಪ್ರಥಮ ಬಾರಿಗೆ ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಪ್ರಧಾನಿಗಳಿಗೆ ತುಂಬು ಹೃದಯದ ಸ್ವಾಗತ ಕೋರುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಆದಿಚುಂಚನಗಿರಿ ಕ್ಷೇತ್ರದ ಹಿರಿಯ ಸ್ವಾಮಿಗಳ ಶ್ರೀ ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಲು ಪ್ರಧಾನಿಗಳು ಬರುತ್ತಿದ್ದಾರೆ. ಶ್ರೀಮಠದ ಜಗದ್ಗುರುಗಳಾದ ಡಾ. ನಿರ್ಮಲಾನಂದ ನಾಥ ಮಹಾಸ್ವಾಮಿಗಳು ಸಾನಿಧ್ಯ ವಹಿಸುತ್ತಾರೆ. ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಸೇರಿ ಇನ್ನು ಅನೇಕ ಗಣ್ಯರು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ಹೇಳಿದರು.
ಇದು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮ ಆಗಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು, ರಾಜ್ಯದ ನಾನಾ ಭಾಗಗಳಿಂದ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು ಬಂದು ಸೇರಲಿದ್ದಾರೆ ಎಂದು ಅವರು ಹೇಳಿದರು.
ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದೆ:
ಮೊದಲಿನಿಂದಲೂ ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದೆ ಎಂದ ಸಚಿವ ಕುಮಾರಸ್ವಾಮಿ ಅವರು; ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ನಂತರ ಇದು ದೊಡ್ಡ ಪ್ರಮಾಣದಲ್ಲಿ ಗೋಚರವಾಗುತ್ತಿದೆ ಎಂದು ಹೇಳಿದರು.
ಆದರೆ ಅವರ ಪಕ್ಷದ ಬಗ್ಗೆ ನಾನು ಏನನ್ನು ಹೇಳಲು ಬರುವುದಿಲ್ಲ. ಇದ್ದರು ಆಂತರಿಕವಾಗಿ ಅವರಿಗೆ ಸಂಬಂಧಪಟ್ಟ ವಿಚಾರ. ಒಂದು ಮಾತನ್ನು ನಾನು ಹೇಳಬಲ್ಲೆ, ಇವರ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಹಳಿತಪ್ಪಿದೆ ಎಂದರು.
ಯಾವ ಸಮಾಜವನ್ನು ಅತಿಯಾಗಿ ಓಲೈಕೆ ಮಾಡುತ್ತಿದ್ದರೋ ಈಗ ಅದೇ ಸಮಾಜದ ನಾಯಕರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ದ್ವಿಮುಖ ಧೋರಣೆಯನ್ನು ತೋರಿಸುತ್ತದೆ. ಜನರು ಎಲ್ಲವನ್ನು ಬಹಳ ಗಮನವಿಟ್ಟು ನೋಡುತ್ತಿದ್ದಾರೆ. ಇನ್ನು ಸಿಎಂ – ಡಿಸಿಎಂ ನಡುವೆ ಮೂರು ವರ್ಷದಿಂದ ಜಟಾಪಟಿ ನಡೆಯುತ್ತಿದೆ. ಇದಕ್ಕೆ ತೆರೆ ಬೀಳುವ ಸೂಚನೆಗಳು ಕಾಣುತ್ತಿಲ್ಲ. ಆದರೆ ಆಡಳಿತ ಮಾತ್ರ ಸಂಪೂರ್ಣ ಅದಕ್ಕೆ ಹೋಗಿದೆ ಎಂದು ಕುಮಾರಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಎಲ್ಲಾ ಸಮುದಾಯಗಳನ್ನು ಒಂದೇ ರೀತಿ ನೋಡುವ ಪರಿಪಾಠ ಇರಬೇಕು. ಸಮುದಾಯವನ್ನು ಓಲೈಸುವ ಇನ್ನೊಂದು ಸಮುದಾಯವನ್ನು ತುಳಿಯುವ ಕೆಲಸ ಮಾಡಬಾರದು. ರಾಜಕೀಯ ಪಕ್ಷಗಳಿಗೆ ನಿರ್ದಿಷ್ಟ ಒಂದು ಸಮುದಾಯದ ಬೆಂಬಲ ಶಾಶ್ವತವಲ್ಲ. ಇದನ್ನು ನಾಯಕರು ಅರ್ಥ ಮಾಡಿಕೊಂಡರೆ ಉತ್ತಮ. ಮುಂದಿನ ದಿನಗಳಲ್ಲಿ ಏನೇನು ಬೆಳವಣಿಗೆಗಳು ಆಗುತ್ತವೆ ಕಾದು ನೋಡೋಣ ಎಂದು ಸಚಿವರು ಮಾರ್ಮಿಕವಾಗಿ ಉತ್ತರಿಸಿದರು.
ಮಾಜಿ ಮಂತ್ರಿಗಳಾದ ವೆಂಕಟರಾವ್ ನಾಡಗೌಡ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಮಾಜಿ ಶಾಸಕ ಡಾ. ಕೆ. ಅನ್ನದಾನಿ ಈ ಸಂದರ್ಭದಲ್ಲಿ ಹಾಜರಿದ್ದರು.























