
ಬೆಂಗಳೂರು, ಜೂ.೨೧: ಸಸಬೆಂಗಳೂರು ನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ೨೩ ಕೋಟಿ ೩೩ ಲಕ್ಷ ರೂ. ಮೌಲ್ಯದ ೬ ಎಕರೆ ೭ ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಹಶೀಲ್ದಾರ್ಗಳು ಕಾಲುದಾರಿ, ಕುಂಟೆ, ಗೋಮಾಳ ಹಾಗೂ ಸ್ಮಶಾನ ಜಾಗಗಳ ಮೇಲಿನ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆ ನಡೆಸಿದರು.
ತಾಲ್ಲೂಕುವಾರು ತೆರವುಗೊಂಡ ಜಮೀನು:
ಬೆಂಗಳೂರು ಪೂರ್ವ: ಚನ್ನಸಂದ್ರದಲ್ಲಿ ಕಾಲುದಾರಿ (೫೦ ಲಕ್ಷ ರೂ.) ಹಾಗೂ ಭೈರಸಂದ್ರದಲ್ಲಿ ಕುಂಟೆ (೧.೮೦ ಕೋಟಿ ರೂ.) ಒತ್ತುವರಿ ತೆರವು.
ಆನೇಕಲ್: ಕುಂಬಾರನಹಳ್ಳಿಯಲ್ಲಿ ಕಾಲುದಾರಿ ಜಾಗ (೮ ಲಕ್ಷ ರೂ.) ತೆರವು.
ಬೆಂಗಳೂರು ದಕ್ಷಿಣ: ದೊಡೇರಿಯಲ್ಲಿ ಸ್ಮಶಾನ ಜಾಗದ ಒತ್ತುವರಿ ತೆರವು.
ಬೆಂಗಳೂರು ಉತ್ತರ: ಗೋಪಾಲಪುರದಲ್ಲಿ ೫ ಎಕರೆ ಗೋಮಾಳ ಜಾಗ ತೆರವುಗೊಳಿಸಲಾಗಿದ್ದು, ಇದರ ಅಂದಾಜು ಮೌಲ್ಯ ೨೦ ಕೋಟಿ ರೂ. ಆಗಿದೆ.
ಯಲಹಂಕ: ಬ್ಯಾಲಕೆರೆಯಲ್ಲಿ ಗೋಮಾಳ ಜಾಗದ ಒತ್ತುವರಿ ತೆರವು.
ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನುಗಳ ಅಕ್ರಮ ಒತ್ತುವರಿ ವಿರುದ್ಧ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿದ್ದು, ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.




























