Home ಜಿಲ್ಲೆ ಕಲಬುರಗಿ ಸಿವಿಲ್ ಸರ್ವಿಸಸ್ ಗುರಿ ಮುಟ್ಟಿ: ಮೊಹಮ್ಮದ್ ಅಸ್ಗರ್ ಚುಲ್ಬುಲ್

ಸಿವಿಲ್ ಸರ್ವಿಸಸ್ ಗುರಿ ಮುಟ್ಟಿ: ಮೊಹಮ್ಮದ್ ಅಸ್ಗರ್ ಚುಲ್ಬುಲ್

ಕಲಬುರಗಿ,ಮೇ.1: ನಗರದ ಕೆಎಚ್‍ಬಿ ಕಾಲೋನಿಯ ತಯ್ಯಬತ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ, ಕುಡಾ ಮಾಜಿ ಅಧ್ಯಕ್ಷ ಹಾಗೂ ಸೀರತ್-ಉನ್-ನಬಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಮೊಹಮ್ಮದ್ ಅಸ್ಗರ್ ಚುಲ್ಬುಲ್ ಅವರು ಹೊಸ ಪೀಳಿಗೆಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ವೃತ್ತಿ ಚೌಕಟ್ಟುಗಳನ್ನು ಮುರಿದು ನಾಗರಿಕ ಸೇವೆಗಳಲ್ಲಿ ನಾಯಕತ್ವದ ಪಾತ್ರಗಳನ್ನು ವಹಿಸಿಕೊಳ್ಳಲು ಶ್ರಮಿಸಬೇಕು ಎಂದು ಕರೆ ನೀಡಿದರು.
ತಯ್ಯಬತ್ ಬಾಲಕಿಯರ ಪ್ರೌಢಶಾಲೆ ಮತ್ತು ಅಲ್ ಇಮ್ರಾನ್ ಪಬ್ಲಿಕ್ ಶಾಲೆಯಎಸ್‍ಎಸ್‍ಎಲ್‍ಸಿ ಸಾಧಕರನ್ನು ಉದ್ದೇಶಿಸಿ ಮಾತನಾಡಿದ ಡಾ. ಚುಲ್ಬುಲ್ ಅವರು, ಈ ಶೈಕ್ಷಣಿಕ ಮೈಲಿಗಲ್ಲು ವಿದ್ಯಾರ್ಥಿಗಳ ಭವಿಷ್ಯದ ಪಥವನ್ನು ನಿರ್ಧರಿಸುವ ತಿರುವು ಎಂದು ಬಣ್ಣಿಸಿದರು.
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಎಂಬ ಸ್ಯಾಚುರೇಟೆಡ್ ಮಾರುಕಟ್ಟೆಗಳಿಂದ ಆಚೆ ನೋಡುವಂತೆ ಡಾ. ಚುಲ್ಬುಲ್ ವಿದ್ಯಾರ್ಥಿಗಳನ್ನು ಆಗ್ರಹಿಸಿದರು. ಅವರು ಐಎ ಎಸ್, ಐಪಿಎಸ್,ಐಎಫ್‍ಎಸ್,ಕೆ ಎ ಎಸ್ ಹಾಗೂ ಕಾನೂನು ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವಂತೆ ಬಲವಾಗಿ ಪ್ರತಿಪಾದಿಸಿದರು.
ಪ್ರತಿಯೊಬ್ಬರೂ ವೈದ್ಯರು ಅಥವಾ ಇಂಜಿನಿಯರ್ ಆಗಲೇಬೇಕು ಎಂಬ ಆಲೋಚನೆ ಬದಲಾಗಬೇಕಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮಿರ್ಜಾ ಫಿರೋಜ್ ಇಮ್ರಾನ್,ಮೌಲಾನಾ ಹಫೀಜ್ ಸೈಯದ್ ಖಾಸಿಂ ಬುಕಾರಿ ಖಾದ್ರಿ,ಇಕ್ಬಾಲ್ ಅಲಿ,ಮೊಹಮ್ಮದ್ ರಫೀಕ್ ಅಹ್ಮದ್,ಡಾ. ಫಾರೂಕ್ ಮಣ್ಣೂರ್ ಮೊದಲಾದವರು ಉಪಸ್ಥಿತರಿದರು.