
ಕೋಲಾರ,ಏ,೧೬- ಅಂಬೇಡ್ಕರ್ ಅವರ ಕಲಿಕೆಯ ಹಸಿವು ನಿಮ್ಮದಾಗಿಸಿಕೊಂಡು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜದ ಉನ್ನತ ಸ್ಥಾನಗಳಿಗೆ ಆಯ್ಕೆಯಾಗಿ ಪೋಷಕರ ಆಶಯಗಳನ್ನು ಈಡೇರಿಸಿ ಎಂದು ವಿದ್ಯಾರ್ಥಿಗಳಿಗೆ ರಮಾಮಣಿ ಸುಂದರರಾಜ ಅಯ್ಯಂಗಾರ್ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಛಾಯಾದೇವಿ ಕರೆ ನೀಡಿದರು.
ತಾಲ್ಲೂಕಿನ ನರಸಾಪುರ ಸಮೀಪದ ಬೆಳ್ಳೂರಿನ ಕೃಷ್ಣಮಾಚಾರ್ ಮತ್ತು ಶೇಷಮ್ಮ ಸ್ಮಾರಕ ನಿಧಿ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ರಮಾiಣಿ ನಗರದ ಶ್ರೀಮತಿ ರಮಾಮಣಿ ಸುಂದರರಾಜ ಅಯ್ಯಂಗಾರ್ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ನಡೆದ ಬಾಬಾಸಾಹೇಬ್ ಅಂಬೇಡ್ಕರ್ ರವರ೧೩೫ನೇ ಜಯಂತಿ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರಿಗಿದ್ದ ಪುಸ್ತಕ ಓದುವಲ್ಲಿನ ಪ್ರೀತಿ ಇಂದು ಮಕ್ಕಳಲ್ಲಿ ಇಲ್ಲವಾಗುತ್ತಿದೆ ಎಂದು ವಿಷಾದಿಸಿದ ಅವರು, ಅಂಬೇಡ್ಕರ್ ಅವರು ಇಡೀ ಸಮಾಜ ಮತ್ತು ಮನುಕುಲಕ್ಕೆ ಮಾದರಿಯಾಗಿದ್ದಾರೆ ಅವರ ಆದರ್ಶಗಳು ಜಾರಿಗೆ ಬಂದರೆ ಮಾತ್ರ ಸುಂದರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಈ ಬಾರಿ ಕಾಲೇಜಿಗೆ ಶೇಕಡ ೧೦೦ರಷ್ಟು ಫಲಿತಾಂಶ ಬಂದಿದ್ದು ಜೊತೆಗೆ ಶೇಕಡ ೩೧ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, ಶೇಕಡ ೬೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ಶೇಕಡ ೧ ರಷ್ಟು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಕೀರ್ತಿತಂದಿರುತ್ತಾರೆಂದು ಹರ್ಷ ವ್ಯಕ್ತಪಡಿಸಿದರು.
ಅದರಲ್ಲೂ ಹೆಮ್ಮೆಯ ವಿಷಯವೆಂದರೆ ವಾಣಿಜ್ಯ ವಿಭಾಗದ ಕುಮಾರಿ ಕುರ್ರತ್ ಖಾನಂ ಎಂಬ ವಿದ್ಯಾರ್ಥಿನಿ ೫೯೦ ಅಂಕಗಳನ್ನು ಪಡೆದು ಹೋಬಳಿಗೆ ಪ್ರಥಮ ಸ್ಥಾನ, ಜಿಲ್ಲೆಗೆ ಆರನೇ ಸ್ಥಾನ ಹಾಗೂ ರಾಜ್ಯಕ್ಕೆ ೧೦ನೇ ಸ್ಥಾನ ಪಡೆದಿದ್ದು , ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿರುವುದು ಹಾಗೂ ವಿಜ್ಞಾನ ವಿಭಾಗದ ಮಹಮ್ಮದಿ ಎಂಬ ವಿದ್ಯಾರ್ಥಿನಿ ಗಣಕ ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ನಮ್ಮ ಮುಂಬರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿರುತ್ತಾರೆ ಎಂದು ತಿಳಿಸಿದರು.
ಬೆಳೆಮಾರನಹಳ್ಳಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಭಾರತ ದೇಶದ ನಿರ್ಮಾಣದಲ್ಲಿ ಅಂಬೇಡ್ಕರ್ ರವರ ಪಾತ್ರವನ್ನು ಸ್ಮರಿಸಿ, ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಅಭಿನಂದಿಸಿ, ಯೋಗಾಚಾರ್ಯ ಡಾಕ್ಟರ್ ಬಿಕೆಎಸ್ ಅಯ್ಯಂಗಾರ್ ಅವರು ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿಸಿದ್ದು, ಇಂದಿಗೂ ಗುರೂಜಿಯವರ ಮಾರ್ಗದರ್ಶನದಲ್ಲಿಯೇ ನಡೆಯುತ್ತಿರುವ ಆಡಳಿತ ವರ್ಗ ಹಾಗೂ ಶಿಕ್ಷಕರು ಪ್ರತಿ ವರ್ಷವೂ ಉತ್ತಮ ಫಲಿತಾಂಶ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಗಣಕ ವಿಭಾಗದ ಉಪನ್ಯಾಸಕ ಮನೋಹರ್ ಮತ್ತು ಕನ್ನಡ ವಿಭಾಗದ ಯಶವಂತ್ ಪಾಲ್ ಡಾಕ್ಟರ್ ಅಂಬೇಡ್ಕರವರ ಜೀವನವನ್ನು ಬಣ್ಣಿಸುವ ಹಾಡುಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಕಳೆದ ಮಾರ್ಚ್ ೨೦೨೬ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆದ ೬೨ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಕಾಲೇಜಿನ ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
























