
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.05: ಇರಾನ್ ಇಸ್ರೇಲ್ ಯುದ್ದದಿದ್ದಾಗಿ ಪ್ರವಾ ಸಕ್ಕೆಂದು ತೆರಳಿ ದುಬೈನಲ್ಲಿ ಸಿಲುಕಿಕೊಂಡಿದ್ದ ಬಳ್ಳಾರಿ ಜಿಲ್ಲೆಯ 35 ಜನರ ಪೈಕಿ 33 ಜನ ಇಂದು ಬೆಂಗಳೂರಿಗೆ ಬಂದು ತಲುಪಿದ್ದಾರೆ.
ದುಬೈ ವಿಮಾನ ನಿಲ್ದಾಣದಿಂದ ನಿನ್ನೆ ರಾತ್ರಿ 10.45 ಕ್ಕೆ ಹೊರಟು ಕೇರಳದ ಕೊಚ್ಚಿಗೆ ಬಂದಿಳಿದಿದ್ದಾರೆ. ಅಲ್ಲಿಂದ ಮತ್ತೆ ವಿಮಾನದಲ್ಲಿ ಬೆಳಿಗ್ಗೆ ಬೆಂಗಳೂರಿಗೆ ಬಂದಿದ್ದು ಅವರನ್ನು ಗ್ರಾಮೀಣ ಶಾಸಕ ಬಿ.ನಾಗೇಂದ್ರ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡಿದ್ದಾರೆ.
ಒಟ್ಟಾರೆ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯಿಂದ 50 ಜನರ ತಂಡ ಪ್ರವಾಸಕ್ಕೆ ತೆರಳಿತ್ತು. ಬಳ್ಳಾರಿಯ ದ್ರಾಕ್ಷಾಯಣಿ ಅವರ ಆರೋಗ್ಯ ಸರಿ ಇರದ ಕಾರಣ ಅವರು ಮತ್ತು ಅವರ ಪತಿ ಶರಣಪ್ಪ ಅಲ್ಲಿಯೇ ಇದ್ದಾರೆ.
ಈ ಬಗ್ಗೆ ಸಂಜೆವಾಣಿ ಜೊತೆ ಮಾತನಾಡಿದ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಯಾಳ್ಪಿ ಮೇಟಿ ಪಂಪನಗೌಡ ಅವರು ದುಬೈನಲ್ಲಿ ನಾವು ಸಂಕಷ್ಟಕ್ಕೆ ಸಿಲುಕಿದಾಗ ಅಲ್ಲಿನ ಜನ ನಮಗೆ ಊಟ, ವಸತಿ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ತುಂಬಾ ಸಹಕಾರ ಮಾಡಿದ್ದಾರೆ. ಅವರ ಸಹಕಾರ ಮರೆಯಲಾರದ್ದು ಎಂದು ಹೇಳಿದ್ದಾರೆ.






















