
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಜಿಲ್ಲೆಗೆ ಪ್ರತ್ಯೇಕ ಬಿಡಿಸಿಸಿ ಬ್ಯಾಂಕ್ ಆರಂಭಿಸಲು ಜಿಲ್ಲೆಯ ರಾಜಕಾರಣಿಗಳು, ಸಹಕಾರಿಗಳು,ಬ್ಯಾಂಕಿನ ನಮ್ಮ ಭಾಗದ ನಿರ್ದೇಶಕರು,ಮತ್ತು ಸಾರ್ವಜನಿಕರು ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಬೇಕು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ಒಂದು ಜಿಲ್ಲೆಗೆ ಒಂದು ಬ್ಯಾಂಕ್ ಎಂದು ಕೇಂದ್ರ ಸರ್ಕಾರದ ಸಹಕಾರಿ ಇಲಾಖೆ ಈ ಹಿಂದೆಯೇ ಜಿಲ್ಲೆಗೆ ಪ್ರತ್ಯೇಕ ಬ್ಯಾಂಕ್ ಆರಂಭಿಸಲು ಬೇಕಾದ ಕ್ರಮ ವಹಿಸುವಂತೆ ಸೂಚನೆ ನೀಡಿದೆ. ಅಗತ್ಯ ಸಿಬ್ಬಂದಿ ನೇಮಕಾತಿ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಘೋಷಿಸಿದೆ.ಇದಕ್ಕೆ ತಕ್ಕಂತೆ ರಾಜ್ಯ ಸಹಕಾರಿ ಇಲಾಖೆಯೂ ಕ್ರಮ ವಹಿಸಿದೆ ಅಧಿಕಾರಿಗಳ ನಿರ್ಲಕ್ಷ್ಯ ಒಂದು ಕಡೆಯಾದರೆ ನಮ್ಮ ಭಾಗದಲ್ಲಿ ಬರುವ ಬ್ಯಾಂಕಿನ ನಿರ್ದೇಶಕರುಗಳ ನಿರಾಸಕ್ತಿಯೂ ಇನ್ನೊಂದು ಕಾರಣವಾಗಿ ಇದುವರೆಗೆ ನಮ್ಮ ಜಿಲ್ಲೆಯಲ್ಲಿ ನಮ್ಮದೇ ಬಿಡಿಸಿಸಿ ಬ್ಯಾಂಕ್ ಆರಂಭ ಆಗಿಲ್ಲ.
ಬಳ್ಳಾರಿ ಜಿಲ್ಲೆ ಆರ್ಥಿಕವಾಗಿ ಸಾಕಷ್ಟು ಪ್ರಬಲವಾಗಿದೆ.ವಾಣಿಜ್ಯ ವಹಿವಾಟುಗಳಲ್ಲಿ ಮುಂದಿದೆ. ಆದರೆ,ಇದುವರೆಗೆ ನಮಗೆ ಪ್ರತ್ಯೇಕ ಬಿಡಿಸಿಸಿ ಬ್ಯಾಂಕ್ ಇರುವುದಿಲ್ಲ. ಈ ಮೊದಲು ಸಹ ಬಿಡಿಸಿಸಿ ಬ್ಯಾಂಕ್ನ ಪ್ರಧಾನ ಕಚೇರಿ ಹೊಸಪೇಟೆಯಲ್ಲಿಯೇ ಇತ್ತು. ಒಂದೇ ಜಿಲ್ಲೆ ಆಗಿದ್ದರಿಂದ ಎಲ್ಲರೂ ಸಹಕಾರ ಮಾಡಿಕೊಂಡು ಹೋಗಿದ್ದರು. ಆದರೆ, ಇದೀಗ ಜಿಲ್ಲೆ ಆರಂಭವಾಗಿ 6 ವರ್ಷ ಆಗುತ್ತಾ ಬಂದರೂ ಪ್ರತ್ಯೇಕ ಬಿಡಿಸಿಸಿ ಬ್ಯಾಂಕ್ ಆರಂಭ ಆಗಿರುವುದಿಲ್ಲ.
ಪ್ರತ್ಯೇಕ ಬಿಡಿಸಿಸಿ ಬ್ಯಾಂಕ್ ಆಗುವುದರಿಂದ ಬ್ಯಾಂಕಿನ ಬ್ರಾಂಚ್ಗಳ ವಿಸ್ತರಣೆಗೆ ಅವಕಾಶ ಆಗಲಿದೆ.ವಿಜಯನಗರ ಜಿಲ್ಲೆಯಲ್ಲಿ ಪ್ರಧಾನ ಕಚೇರಿ ಇರುವುದರಿಂದಲೇ ಅಲ್ಲಿ ಹೋಬಳಿ,ಗ್ರಾಮ ಮಟ್ಟದ ಬಿಡಿಸಿಸಿ ಬ್ಯಾಂಕ್ಗಳು ತಲೆ ಎತ್ತಿವೆ.ನಮ್ಮಲ್ಲಿ ತಾಲ್ಲೂಕು ಮಟ್ಟದಲ್ಲಿ ಬಿಟ್ಟರೆ ಹೋಬಳಿ, ಗ್ರಾಮ ಮಟ್ಟಕ್ಕೆ ಬ್ಯಾಂಕ್ ಪರಿಚಯವೇ ಆಗಿಲ್ಲ.
ಈ ತಕ್ಷಣ ನಮ್ಮ ಜಿಲ್ಲೆಯಲ್ಲಿರುವ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಈ ಕಡೆ ಹೆಚ್ಚಿನ ಗಮನ ಹರಿಸಬೇಕು. ಈ ಮೂಲಕ ನಮ್ಮದೇ ಆದ ಪ್ರತ್ಯೇಕ ಬಿಡಿಸಿಸಿ ಬ್ಯಾಂಕ್ ಆರಂಭಕ್ಕೆ ಮುಂದಾಗಬೇಕು ಎಂದಿದ್ದಾರೆ






















