
ಮಂಗಳೂರು- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು.ಕೆ ಅವರ ಅದ್ಯಕ್ಷತೆಯಲ್ಲಿ ನಡೆಯಿತು.
ಮಿಷನ್ ಶಕ್ತಿ ಯೋಜನೆಯಲ್ಲಿ ಜಿಲ್ಲೆಯ ಸಖಿ ಒನ್ ಸ್ಟಾಪ್ ಕರ್ನಾಟದಲ್ಲಿ ಮೊದಲನೇ ಸ್ಥಾನದಲ್ಲಿದ್ದು ರಾಷ್ಟ್ರದ ೯೬೬ ಸಖಿ ಕೇಂದ್ರಗಳ ಪೈಕಿ ೭ ನೇ ಸ್ಥಾನ ಪಡೆದಿರುವುದಕ್ಕೆ ಸಮಿತಿಯು ಅಭಿನಂದಿಸಿತು.
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಲ್ಲಿ ಮೊದಲನೇ ಗರ್ಭಿಣಿಯರಿಗೆ ಸಂಪೂರ್ಣ ಸೌಲಭ್ಯ ನೀಡಿದ್ದು, ಎರಡನೇ ಹೆಣ್ಣು ಮಗು ಜನಿಸಿದ ಎಲ್ಲಾ ಅರ್ಹ ತಾಯಂದಿರಿಗೆ ಸೌಲಭ್ಯ ದೊರೆಯುವಂತೆ ಕ್ರಮ ವಹಿಸಲು ಸೂಚಿಸಲಾಯಿತು.
ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆ ಮೂಲಕ ಹೆಚ್ಚಿನ ಆರಿವು ಕಾರ್ಯ ಕ್ರಮಗಳನ್ನು ಕೈಗೊಂಡು ಹೆಣ್ಣು ಮಕ್ಕಳ ಲಿಂಗಾನುಪಾತ ಕಡಿಮೆ ಯಾಗದಂತೆ ನೋಡಿಕೊಳ್ಳಬೇಕಿದೆ.
ಉದ್ಯೋಗಸ್ತ ಮಹಿಳೆಯರ ವಸತಿನಿಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದಾಖಲಾಗಬೇಕು. ಜಿಲ್ಲೆಯ ೫೨ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಂ ಕ್ರಷ್ ಕೇಂದ್ರ ಆರಂಭಿಸಲಿದ್ದು, ಇಲ್ಲಿ ೬ ತಿಂಗಳಿಂದ ೩ ವರ್ಷದ ಮಕ್ಕಳನ್ನು ದಾಖಲು ಮಾಡಲಾಗುತ್ತಿದ್ದು ಪ್ರತ್ಯೇಕ ಕಾರ್ಯಕರ್ತೆ ಮತ್ತು ಸಹಾಯಕಿಯರು ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳಾದಾಗ ಶೀಘ್ರವಾಗಿ ಕ್ರಮ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಜು.ಕೆ ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು ೨೧೩೧ ಅಂಗನವಾಡಿ ಕೇಂದ್ರಗಳಿದ್ದು ೧೯೩೪ ಕೇಂದ್ರಗಳಿಗೆ ಸ್ವಂತ ಕಟ್ಟಡವಿದ್ದು ೨೫ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ೪೮ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇವುಗಳಿಗೆ ನಿವೇಶನವನ್ನು ಗುರುತಿಸುವಂತೆ ತಿಳಿಸಲಾಯಿತು.
೧೩೮೪ ಅಂಗನವಾಡಿ ಕೇಂದ್ರಗಳಿಗೆ ಸಕ್ಷಮ ಅಂಗನವಾಡಿ ಯೋಜನೆಯಲ್ಲಿ ಸ್ಮಾರ್ಟ್ ಟಿವಿ, ಕಲಿಕಾ ಸಾಮಗ್ರಿ, ಕೈತೋಟ, ವಾಟರ್ ಫಿಲ್ಫ್ಟರ್, ಸ್ವಚ್ಛ ದಾಸ್ತಾನು ಕಿಟ್ ಗಳನ್ನು ಒದಗಿಸಲಾಗಿದೆ. ಇನ್ನುಳಿದ ಅಂಗನವಾಡಿ ಕೇಂದ್ರಗಳನ್ನು ಸಕ್ಷಮ ಯೋಜನೆಯಲ್ಲಿ ಸೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಪುತ್ತೂರು ಮತ್ತು ಬಂಟ್ವಾಳ ತಾಲೂಕಿನ ಸಾಂತ್ವನ ಕೇಂದ್ರಗಳ ಮೂಲಕ ಸಮುದಾಯದತ್ತ ಸಾಂತ್ವನ ಎಂಬ ವಿಶಿಷ್ಟ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆಯುತ್ತಿದ್ದು, ಜಿಲ್ಲೆಯ ಎಲ್ಲಾ ಸಾಂತ್ವನ ಕೇಂದ್ರಗಳು ಇಲಾಖೆಯ ಮೂಲಕ ಇಂತಹ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಸೂಚಿಸಿದರು.
ತ್ರೈಮಾಸಿಕದಲ್ಲಿ ಯಾವುದೇ ಬಾಲ್ಯ ವಿವಾಹ ಜರುಗಿರುವುದಿಲ್ಲ. ಒಂದು ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಬಾಲ್ಯ ವಿವಾಹದ ದುಷ್ಟರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

























