
ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಏSಓಆಒಅ) ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿ ‘ಆರೆಂಜ್ ಅಲರ್ಟ್’ ಘೋಷಿಸಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಬುಧವಾರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಜುಲೈ ೩, ಶುಕ್ರವಾರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳು ಹಾಗೂ ಪದವಿ ಪೂರ್ವ (ಪಿಯು) ಕಾಲೇಜುಗಳಿಗೆ (೧೨ನೇ ತರಗತಿವರೆಗೆ) ರಜೆ ಘೋಷಿಸಲಾಗಿದೆ.
ಅಧಿಕೃತ ಪ್ರಕಟಣೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಜಿಲ್ಲಾಡಳಿತವು ಹಲವು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ:
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಮತ್ತು ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪೋಷಕರು ಕಡ್ಡಾಯವಾಗಿ ಜಾಗ್ರತೆ ವಹಿಸಬೇಕು. ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಇರುವುದರಿಂದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಸೂಚಿಸಲಾಗಿದೆ.
ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ತೀರ ಮತ್ತು ಸಮುದ್ರ ತೀರಗಳಿಗೆ ತೆರಳದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
ಉಡುಪಿ: ‘ರೆಡ್ ಅಲರ್ಟ್’ ನಡುವೆಯೂ ಕೈಕೊಟ್ಟ ಮಳೆ; ಸಾರ್ವಜನಿಕರಲ್ಲಿ ಕಳವಳ
ಉಡುಪಿ ಭಾರತೀಯ ಹವಾಮಾನ ಇಲಾಖೆ ಜುಲೈ ೨ ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿ ‘ರೆಡ್ ಅಲರ್ಟ್’ ಘೋಷಿಸಿದ್ದರೂ, ಉಡುಪಿ ನಗರದ ಸುತ್ತಮುತ್ತ ಗುರುವಾರ ನಿರೀಕ್ಷಿತ ಮಟ್ಟದಲ್ಲಿ ಮಳೆ ದಾಖಲಾಗಿಲ್ಲ. ನೆರೆಯ ದಕ್ಷಿಣ ಕನ್ನಡ (ಮಂಗಳೂರು) ಮತ್ತು ಉತ್ತರ ಕನ್ನಡ (ಕಾರವಾರ) ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದಲೇ ಭಾರಿ ಮಳೆಯಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಆದರೆ ಉಡುಪಿಯಲ್ಲಿ ಮಾತ್ರ ಹವಾಮಾನ ಇಲಾಖೆಯ ಮುನ್ಸೂಚನೆ ಸಂಪೂರ್ಣ ನಿಜವಾಗದೆ ಮಳೆರಾಯ ಕಣ್ಣಾಮುಚ್ಚಾಲೆ ಆಡಿದ್ದಾನೆ.
ಮೋಡ ಕವಿದ ವಾತಾವರಣ:
ಜಿಲ್ಲೆಯಾದ್ಯಂತ ಮುಂಜಾನೆಯಿಂದಲೇ ದಟ್ಟವಾದ ಕಪ್ಪು ಮೋಡಗಳು ಕವಿದಿದ್ದರೂ, ಕೇವಲ ಸಾಧಾರಣ ತುಂತುರು ಮಳೆಯಷ್ಟೇ ಕಂಡುಬಂದಿದೆ. ಮಧ್ಯಾಹ್ನದ ವೇಳೆಗೆ ಕೆಲವು ಕಡೆಗಳಲ್ಲಿ ಬಿಸಿಲಿನ ವಾತಾವರಣ ತಲೆದೂರಿತ್ತು. ರೆಡ್ ಅಲರ್ಟ್ ಇರುವುದರಿಂದ ಭಾರಿ ಗಾಳಿ-ಮಳೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ಜನರಿಗೆ ಸದ್ಯದ ಹವಾಮಾನ ಕಳವಳ ಸೃಷ್ಟಿಸಿದೆ. ಮಳೆಯ ಕೊರತೆಯು ಕರಾವಳಿಯ ರೈತಾಪಿ ವರ್ಗದಲ್ಲಿ ತೀವ್ರ ಕಳವಳ ಮೂಡಿಸಿದೆ. ಜೂನ್ ತಿಂಗಳ ಆರಂಭದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕರಾವಳಿ ಭಾಗದಲ್ಲಿ ಶೇಕಡಾವಾರು ಮಳೆ ಕೊರತೆ ಎದುರಾಗಿತ್ತು, ಸದ್ಯದ ಪರಿಸ್ಥಿತಿ ಕೂಡ ಅದೇ ಮುನ್ಸೂಚನೆಯನ್ನು ನೀಡುವಂತಿದೆ.
ಮುನ್ನೆಚ್ಚರಿಕೆಯಲ್ಲಿ ಜಿಲ್ಲಾಡಳಿತ
ನೆರೆ ಜಿಲ್ಲೆಗಳ ಪರಿಸ್ಥಿತಿಯನ್ನು ಗಮನಿಸಿ ಉಡುಪಿ ಜಿಲ್ಲಾಡಳಿತವೂ ಕೂಡ ಕಟ್ಟೆಚ್ಚರ ವಹಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಪಶ್ಚಿಮ ಘಟ್ಟಗಳ ತಳಭಾಗದಲ್ಲಿ ಮತ್ತು ಕಡಲ ತೀರದಲ್ಲಿ ಯಾವುದೇ ಕ್ಷಣದಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ತಜ್ಞರ ವಿಶ್ಲೇಷಣೆ
ಹವಾಮಾನ ತಜ್ಞರ ಪ್ರಕಾರ, ಕರಾವಳಿ ತೀರದಲ್ಲಿ ಬೀಸುತ್ತಿರುವ ತೀವ್ರ ಗಾಳಿಯ ಕಾರಣದಿಂದಾಗಿ ಮಳೆ ಮೋಡಗಳು ನಗರ ಪ್ರದೇಶಗಳಲ್ಲಿ ನಿಲ್ಲದೆ ಪಶ್ಚಿಮ ಘಟ್ಟಗಳ ಕಡೆಗೆ ಚಲಿಸುತ್ತಿವೆ. ಹೀಗಾಗಿ ಕರಾವಳಿಯ ಬಯಲು ಸೀಮೆಯಲ್ಲಿ ಮಳೆ ಕಡಿಮೆಯಾಗಿ ಕಾಣಿಸುತ್ತಿದೆ. ಮುಂಬರುವ ದಿನಗಳಲ್ಲಿ ಮುಂಗಾರು ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದ್ದು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಪ್ರಕಟಣೆಗಳನ್ನು ಗಮನಿಸಬೇಕಾಗಿ ಜಿಲ್ಲಾಡಳಿತ ವಿನಂತಿಸಿದೆ.


























