Home ಜಿಲ್ಲೆ ಬೆಂಗಳೂರು ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ

ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ

ಕೋಲಾರ, ಮೇ,೧೩-ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡುಬರುತ್ತಿರುವ ಫ್ಲೋರೋಸಿಸ್ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಶಾಲೆಗಳಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೂಚಿಸಿದರು


ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ವಿವಿಧ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಳೆದ ೨೦೨೫-೨೬ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಆರೋಗ್ಯ ಇಲಾಖೆಯ ಸಾಧನೆ ಹಾಗೂ ಪ್ರಮುಖ ಅಂಕಿ ಅಂಶಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಾತನಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತು ರೋಗಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಜಿಲ್ಲೆಯ ತಾಯಿ ಮತ್ತು ಮಗು ಆರೋಗ್ಯ ಕಾರ್ಯಕ್ರಮದಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ. ಏಪ್ರಿಲ್ ೨೦೨೫ ರಿಂದ ಮಾರ್ಚ್ ೨೦೨೬ ರವರೆಗೆ ಜಿಲ್ಲೆಯಲ್ಲಿ ಒಟ್ಟು ೧೯,೪೪೬ ಗರ್ಭಿಣಿಯರು ನೋಂದಾಯಿಸಿಕೊಂಡಿದ್ದು, ಇದರಲ್ಲಿ ೯೧%ರಷ್ಟು ಮೊದಲ ತ್ರೈಮಾಸಿಕದಲ್ಲೇ ನೋಂದಣಿಯಾಗಿದೆ. ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲ್ಲೂಕುಗಳು ತಲಾ ೯೪% ಸಾಧನೆಯೊಂದಿಗೆ ಮುಂಚೂಣಿಯಲ್ಲಿವೆ ಎಂದು ಅಭಿನಂದಿಸಿದರು.


ಜಿಲ್ಲೆಯಲ್ಲಿ ಒಟ್ಟು ೧೭,೧೭೩ ಹೆರಿಗೆಗಳಾಗಿದ್ದು, ಇದರಲ್ಲಿ ೫೪% ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದಿವೆ. ಮುಳಬಾಗಿಲು ತಾಲ್ಲೂಕಿನಲ್ಲಿ ಗರಿಷ್ಠ ೯೬% ಸರ್ಕಾರಿ ಹೆರಿಗೆಗಳಾಗಿವೆ ಎಂದರು.


ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣ ಪ್ರತಿ ಲಕ್ಷ ಜೀವಂತ ಜನನಗಳಿಗೆ ೨೩ ಕ್ಕೆ ಇಳಿಕೆಯಾಗಿದ್ದು, ಇದು ರಾಜ್ಯದ ಸರಾಸರಿ (೬೮) ಗಿಂತ ಗಣನೀಯವಾಗಿ ಕಡಿಮೆಯಿದೆ. ಅದೇ ರೀತಿ ಶಿಶು ಮರಣ ಪ್ರಮಾಣ ಪ್ರತಿ ಸಾವಿರಕ್ಕೆ ೯ ಕ್ಕೆ ದಾಖಲಾಗಿದೆ. ಜಿಲ್ಲೆಯಲ್ಲಿ ೯೬% ರಷ್ಟು ಮಕ್ಕಳು ಪೂರ್ಣ ಲಸಿಕಾಕರಣಕ್ಕೆ ಒಳಪಟ್ಟಿದ್ದಾರೆ.


ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ೧೪-೧೫ ವರ್ಷದ ಹೆಣ್ಣು ಮಕ್ಕಳಿಗೆ ನೀಡಲಾಗುವ ಊPಗಿ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯು ಏಪ್ರಿಲ್ ೩೦ರ ವೇಳೆಗೆ ೩೨.೪% ಗುರಿ ತಲುಪಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್ ಸಭೆಗೆ ತಿಳಿಸಿದರು.


ಮಾರ್ಚ್-೨೦೨೬ರ ವೇಳೆಗೆ ಜಿಲ್ಲೆಯಲ್ಲಿ ಮಹಿಳಾ ಸಂತಾನಹರಣ ಚಿಕಿತ್ಸೆಯಲ್ಲಿ ೫೯.೯೧% ಸಾಧನೆಯಾಗಿದ್ದು, ಶ್ರೀನಿವಾಸಪುರ ತಾಲ್ಲೂಕು ೭೭% ರೊಂದಿಗೆ ಅಗ್ರಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ೧೫ ಮಲೇರಿಯಾ, ೧೭೮ ಡೆಂಗ್ಯೂ ಮತ್ತು ೮೯ ಚಿಕುನ್ ಗುನ್ಯ ಪ್ರಕರಣಗಳು ವರದಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಅಲ್ಲದೆ ತಾಯಿ ಹಾಗೂ ಶಿಶು ಮರಣವನ್ನು ಆದಷ್ಟು ತಪ್ಪಿಸಲು ವೈದ್ಯರು ಕಾರ್ಯಪ್ರವೃತ್ತರಾಗಬೇಕೆಂದರು


೨೦೨೬ ರ ಮೊದಲ ತ್ರೈಮಾಸಿಕದಲ್ಲಿ ೧೪,೯೯೦ ಜನರನ್ನು ಕಣ್ಣಿನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜಿಲ್ಲೆಯು ೧೨೧% ಸಾಧನೆ ಮಾಡಿದೆ. ೨೦೨೫-೨೬ ಸಾಲಿನಲ್ಲಿ ಒಟ್ಟು ೧೦,೧೭೬ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ’ಮನೋಚೈತನ್ಯ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಒಟ್ಟು ೮,೭೦೩ ಪ್ರಕರಣಗಳಿಗೆ ಚಿಕಿತ್ಸೆ ಮತ್ತು ಸಮಾಲೋಚನೆ ನೀಡಲಾಗಿದೆ ಎಂದು ಶ್ರೀನಿವಾಸ್ ಅವರು ವಿವರಿಸಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ. ಕೆ. ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣ ಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಆಸ್ಮಾ ಎಲ್ಲಾ ತ್ತಾಲ್ಲೂಕಿನ ಸಿ ಡಿ ಪಿ ಓ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಶಸ್ತ್ರಚಿಕಿತ್ಸೆಕ ಡಾ. ಜಗದೀಶ್, ಕುಟುಂಬ ಕಲ್ಯಾಣ ಅಧಿಕಾರಿ ಡಾ. ಚಂದನ್, ವಿವಿಧ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.