
ಕೋಲಾರ,ಮಾ.೨೧- ಶ್ರೀ ದ್ಯಾವೀರಪ್ಪ ಮತ್ತು ಶ್ರೀಮತಿ ರತ್ನಮ್ಮ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಡಿ. ದೇವರಾಜ್ ಅವರ ಡಿ.ಎಂ.ಆರ್ ಫೌಂಡೇಶನ್ ಮತ್ತು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೋಲಾರದಲ್ಲಿ ನಡೆದ ಅದ್ದೂರಿ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ನಟ ಖ್ಯಾತ ಚಿತ್ರನಟ ಕ್ರೇಜಿಸ್ಟಾರ್ ವಿ.ರವಿಚಂದ್ರನ್, ಸಂಗೀತ ನಿರ್ದೇಶಕ ಅರ್ಜನ್ ಜನ್ಯ ಅವರ ಅಭೂತ ಪೂರ್ವ ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ೨೦ ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಸಾಕ್ಷಿಯಾದರು.
ಕೋಲಾರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಯುಗಾದಿ ಯಂದು ಸಂಜೆ ನಡೆದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಅಖಿಲ ಪಜುಮಣ್ಣ, ಮತ್ತಿತರ ಹಿನ್ನಲೆ ಗಾಯಕಿಯರು, ಖ್ಯಾತ ನಿರೂಪಕಿ ಅನುಶ್ರೀ, ಕೋಲಾರದ ಅಕ್ಬರ್, ಸ್ಥಳೀಯ ಕಲಾವಿದರ ತಂಡ ನೀಡಿದ ಸಾಂಸ್ಕೃತಿಕ ಸಂಭ್ರಮ ಹಾಗೂ ಖ್ಯಾತ ಚಿತ್ರನಟ ಕ್ರೆಜಿಸ್ಟಾರ್ ವಿ.ರವಿಚಂದ್ರನ್, ಅನುಪ್ರಭಾಕರ್ ಮತ್ತು ಡಾ.ರಾಜ್ಕುಮಾರ್ ಕುಟಂಬದ ಯುವರಾಜ್ ಕುಮಾರ್, ಸಂಜನಾ ಆನಂದ್ ಅವರು ಹಾಡುಗಳಿಗೆ ಹೆಜ್ಜೆ ಹಾಕಿ ೨೦ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ಬೇವು, ಬೆಲ್ಲದ ಜತೆ ಸಂಗೀತದ ರಸದೌತಣ ಉಣಬಡಿಸಲಾಯಿತು. ಇದೇ ಸಂದರ್ಭದಲ್ಲಿ ಇಂದು ಅವರು ಡಿಂಕು ಜೊತೆಗೆ ಮಾಡಿದ ಕಾಮಿಡಿ ಇಡೀ ಪ್ರೇಕ್ಷಕರನ್ನು ನೆಗೆಗಡಲಲ್ಲಿ ತೇಲಿಸಿತು.
ಯುಪಿಎಸ್ಸಿ ರ್ಯಾಂಕ್ ಪಡೆದವರಿಗೆ ಸನ್ಮಾನ
ಯುಪಿಎಸ್ಸಿಯಲ್ಲಿ ರ್ಯಾಂಕ್ ಪಡೆದ ಕೋಲಾರ ತಾಲೂಕಿನ ಇರಗಸಂದ್ರ ಗ್ರಾಮದ ಎ.ಮಧು, ತ್ಯಾವನಹಳ್ಳಿ ಗ್ರಾಮದ ವರುಣ್ಗೌಡ, ನೆನಮನಹಳ್ಳ ಗ್ರಾಮದ ಎ.ಸಾಗರ್, ಬಂಗಾರಪೇಟೆಯ ತೌಷಿಕ್ ಉಲ್ಲಾಖಾನ್, ಮೇಡಿತಂಬಿಹಳ್ಳಿ ಗ್ರಾಮದ ಉಲ್ಲಾಸ್ ಮತ್ತು ಅವರ ಪೋಷಕರನ್ನು ವೇದಿಕೆ ಮೇಲೆ ಖ್ಯಾತ ಚಿತ್ರ ನಟ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರನಟ ವಿ.ರವಿಚಂದ್ರನ್ ಅವರು ಕೋಲಾರ ಜಿಲ್ಲೆಯಲ್ಲಿ ಐವರು ಯುಪಿಎಸ್ಸಿಯಲ್ಲಿ ರ್ಯಾಂಕ್ ಪಡೆದಿರುವುದು ಹೆಮ್ಮೆಯ ವಿಚಾರ. ಡಿಎಂಆರ್ ಪೌಂಡೇಷನ್ ಅವರು ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ತರಭೇತಿ ನೀಡುತ್ತಿದ್ದು ಅದನ್ನು ಬಳಸಿಕೊಳ್ಳಬೇಕೆಂದರು.
ಡಿ.ದೇವರಾಜ್ ಅವರು ಖಡಕ್ ಅಧಿಕಾರಿಯಾಗಿದ್ದಾರೆ, ಅವರು ಶಿವನ ಭಕ್ತ ನಾನು ಶಿವನ ಭಕ್ತ, ನಮ್ಮಿಬ್ಬರನ್ನು ಸ್ನೇಹಕ್ಕೆ ಆ ಶಿವನೇ ಕಾರಣ, ಮುಂದಿನ ದಿನಗಳಲ್ಲಿ ಅವರ ಭವಿಷ್ಯ ಒಳ್ಳೇಯದಾಗಲಿ ಎಂದು ಶುಭ ಕೋರಿದರು.
ಕೋಲಾರ ಜಿಲ್ಲೆಯ ತಮಿಳುನಾಡಿನ ಒಂದು ಗ್ರಾಮ ನನ್ನ ಹೆಂಡ್ತಿಯ ತವರೂರು. ಅಲ್ಲಿಗೆ ಹೋಗಬೇಕಾದರೆ ಕೋಲಾರದ ಮೂಲಕವೇ ಹೋಗುತ್ತಿದ್ದು, ಆದರೆ ಇಂದು ಕೋಲಾರ ನಗರಕ್ಕೆ ಅದರಲ್ಲೂ ನನ್ನ ಸ್ನೇಹಿತ ಡಿಐಜಿಪಿ ಡಿ.ದೇವರಾಜ್ ಅವರ ಕರೆಗೆ ಇಲ್ಲಿಗೆ ಬಂದಿದ್ದೇನೆ. ಇಷ್ಟೊಂದು ಜನರನ್ನು ನೋಡಿ ನನಗೆ ಖುಷಿಯಾಗಿದೆ. ಇಲ್ಲಿ ಸೇರಿರುವ ಸಾವಿರಾರು ಜನ ನನ್ನ ಚಿತ್ರಗಳಿಗೆ ಪ್ರೋತ್ಸಾಹ ಕೊಟ್ಟಿದ್ದೀರಿ ಇದನ್ನು ನಾನು ಯಾವತ್ತಿಗೂ ಮರೆಯೋದಿಲ್ಲ ಎಂದು ಹೇಳಿದರು.
ಅಲ್ಲದೆ ಪ್ರೀತ್ಸೋದ್ ತಪ್ಪಾ ಚಿತ್ರವನ್ನು ಇದೇ ಅಂತರಗಂಗೆ ಬೆಟ್ಟದಲ್ಲಿ ಮಾಡಿದಾಗ ನಾನು ಮತ್ತು ಶಿಲ್ಪಶೆಟ್ಟಿ ಅವರು ಬೈಕ್ನಲ್ಲಿ ಓಡಾಡಿದ್ದನ್ನು ಸ್ಮರಿಸಿದರು. ಇದಕ್ಕೂ ಮೊದಲು ವಿ.ರವಿಚಂದ್ರನ್ ಅವರು ವೇದಿಕೆ ಮೆಲೆ ಬರುತ್ತಿದ್ದಂತೆ ” ಬಾರೋ ಬಾರೋ ರಣಧೀರ “, ನಾನು ನನ್ನ ಹೆಂಡ್ತಿ ಚಿತ್ರದ “ಯಾರೇ ನೀನು ರೋಜಾ ಹೂವೇ ” ಹಾಡಿಗೆ ಚಿತ್ರನಟಿ ಅನುಪ್ರಭಾಕರ್ ಮತ್ತು ಆಂಕರ್ ಅನುಶ್ರೀ ಜೊತೆಗೆ ವಿ.ರವಿಚಂದ್ರನ್ ಹೆಜ್ಜೆ ಹಾಕಿದರು.
ಕಾರ್ಯಕ್ರಮವನ್ನು ಆಯೋಜಿಸಿದ್ದ ಡಿಎಂಆರ್ ಫೌಂಡೇಷನ್ನ ನೇತೃತ್ವ ವಹಿಸಿರುವ ಡಿಐಜಿಪಿ ಅಧಿಕಾರಿ ಡಿ. ದೇವರಾಜ್ ಮಾತನಾಡಿ ಕಳೆದ ಮೂರು ವರ್ಷಗಳಿಂದ ಯುಗಾದಿ ಉತ್ಸವ ಮಾಡಿಕೊಂಡು ಬಂದಿದ್ದೇವೆ. ಈ ಸಲ ಯುಗಾದಿ ಉತ್ಸವ ನಡೆಯೋದಿಲ್ಲ ಎಂದು ಕೆಲವರು ಅಂದು ಕೊಂಡಿದ್ದರು, ನಾನು ಇರೋವರೆಗೂ ಯುಗಾದಿ ಉತ್ಸವ ನಿಲ್ಲೋದಿಲ್ಲ ಎಂದು ಕೋಲಾರ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಮುಂದಿನ ದಿನದಲ್ಲಿ ಮತ್ತಷ್ಟು ಅದ್ದೂರಿಯಾಗಿ ಕಾರ್ಯಕ್ರಮವನ್ನು ಮಾಡುವುದಾಗಿ ಘೋಷಣೆ ಮಾಡಿದರು.
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸಿದರು. ಯುಗಾದಿ ಉತ್ಸವದ ನಂತರ ಬಾಣಬಿರುಸುಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಅತ್ಯಂತ ಅದ್ಧೂರಿ ಹಾಗೂ ಆಕರ್ಷಣೀಯವಾಗಿ ಮೂಡಿ ಬಂತು.
ಕಾರ್ಯಕ್ರಮದಲ್ಲಿ ಸಿ.ಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ, ಹಿರಿಯ ಪತ್ರಕರ್ತ ಬಿ.ವಿ.ಗೋಪಿನಾಥ್, ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಅಪರ ಜಿಲ್ಲಾಧಿಕಾರ ಎಸ್.ಮಂಗಳ, ಸಿಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು ಮತ್ತಿತರರು ಹಾಜರಿದ್ದರು.























