
ಕಾಳಗಿ :ಜೂ.5: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ತೀವ್ರ ಕೊರತೆಯಿದ್ದು, ಸಾರ್ವಜನಿಕರು ಮತ್ತು ರೋಗಿಗಳು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿವಿಧ ಸಂಘಟನೆಗಾರರು ಗುರುವಾರ ಮಾನ್ಯ ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮುಲ್ಲಾ ಶರೀಫ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವೈದ್ಯರ ಕೊರತೆ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ವೈದ್ಯರು ಹಾಗೂ ಸಿಬ್ಬಂದಿ ಲಭ್ಯವಿರುವುದಿಲ್ಲ. ಅಗತ್ಯವಿರುವ ಜೀವ ರಕ್ಷಕ ಔಷಧಿಗಳು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛವಾದ ಶೌಚಾಲಯಗಳ ಕೊರತೆ ಇದೆ. ರಕ್ತ ಪರೀಕ್ಷೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳ ಕೊರತೆಯಿಂದಾಗಿ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ.ಆದ್ದರಿಂದ, ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಅಗತ್ಯ ಮೂಲ ಸೌಕರ್ಯಗಳನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಈ ವೇಳೆಯಲ್ಲಿ ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಸಾಮಾಜಿಕ ಹೋರಾಟಗಾರ ಮೋಹನ ಚಿನ್ನ, ಅರ್ಜುನ ಚಿಂಚೋಳಿ ಎಚ್, ರೇವಣಸಿದ್ಧ ಅರಣಕಲ್, ಪವನ ಪೂಜಾರಿ ಮಲಘಾಣ ಇಂದ್ರಜೀತ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

























