Home ಜಿಲ್ಲೆ ಭಾರತ – ಕಾಂಬೋಡಿಯಾ ಆರ್ಥಿಕ ಅವಕಾಶಗಳು: ಒಂದು ಅವಲೋಕನ : ವಿಶೇಷ ಸಭೆ

ಭಾರತ – ಕಾಂಬೋಡಿಯಾ ಆರ್ಥಿಕ ಅವಕಾಶಗಳು: ಒಂದು ಅವಲೋಕನ : ವಿಶೇಷ ಸಭೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಜೂ. 05: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಕಾಂಬೋಡಿಯಾದ ರಾಯಭಾರಿ ಕಚೇರಿಯ ಜಂಟಿ ಆಶ್ರಯದಲ್ಲಿ `ಭಾರತ – ಕಾಂಬೋಡಿಯಾ ಆರ್ಥಿಕ ಅವಕಾಶಗಳು: ಒಂದು ಅವಲೋಕನ’ ವಿಷಯದ ಕುರಿತು ವಿಶೇಷ ಸಭೆ ಗುರುವಾರ ಸಂಜೆ ನಡೆಯಿತು.

ದಕ್ಷಿಣ ಭಾರತದಲ್ಲಿನ ಕಾಂಬೋಡಿಯಾದ ಕಾನ್ಸುಲ್ ಜನರಲ್ ಕಾರ್ತಿಕ್ ತಲ್ಲಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕಾಂಬೋಡಿಯಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಬೆಳೆಯುತ್ತಿರುವ ಆರ್ಥಿಕತೆ, ಹೂಡಿಕೆಗೆ ಇರುವ ಅವಕಾಶಗಳು ಮತ್ತು ಸರ್ಕಾರದ ಪ್ರೋತ್ಸಾಹದ ಯೋಜನೆಗಳು, ಭಾರತೀಯ ಉದ್ಯಮಿಗಳಿಗೆ ಸಿಗುವ ಬಂಡವಾಳ ಹೂಡಿಕೆಯ ಅವಕಾಶಗಳ ಕುರಿತು ಸಮಗ್ರವಾಗಿ ಮಾಹಿತಿಯನ್ನು ನೀಡಿದರು.

ಕಾಂಬೋಡಿಯಾ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ  ಭಾಗದ ವಿವಿಧ ಜಿಲ್ಲೆಗಳ ಮಧ್ಯೆ ಕೈಗಾರಿಕೆ, ಕೃಷಿ, ಸಂಸ್ಕರಣೆ, ಶಿಕ್ಷಣ, ಪ್ರವಾಸೋದ್ಯಮ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಮತ್ತು ಹೂಡಿಕೆ ಅವಕಾಶಗಳ ಕುರಿತು ಸ್ಥಳೀಯ ಉದ್ಯಮಿಗಳು ಮತ್ತು ಆಸಕ್ತರು ಕೇಳಿದ ಪ್ರಶ್ನೆಗಳಿಗೆ ಕಾರ್ತಿಕ್ ತಲ್ಲಂ ಅವರು ಉತ್ತರಿಸಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಎಕ್ಸಿಂ ಕಮಿಟಿ ಚೇರ್ಮೆನ್ ಆಗಿರುವ ಎಸ್. ಜಿಂತೇಂದ್ರ ಪ್ರಸಾದ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಬಳ್ಳಾರಿ ಜಿಲ್ಲೆಯ ಜೀನ್ಸ್, ಅಪಾರಲ್ಸ್, ಒಣ ಮೆಣಸಿನಕಾಯಿ, ಭತ್ತ, ಇನ್ನಿತರೆ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಕಾಂಬೋಡಿಯಾದಲ್ಲಿ ಮುಕ್ತ ಅವಕಾಶಗಳಿವೆ. ಆಸಕ್ತರು ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ, ಜಾಗತಿಕ ಮಟ್ಟದ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಕುರಿತು ನಮ್ಮಲ್ಲಿರುವ ಉದ್ಯಮಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಬಿಡಿಸಿಸಿಐ ಈ ರೀತಿಯ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಈ ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಹೂಡಿಕೆಯ ಹೊಸ ಕಲ್ಪನೆಗಳು ಯಶಸ್ವಿಯಾಗಿ ಮೂಡಲಿ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು ಮುಖ್ಯ ಅತಿಥಿಗಳಾಗಿ, ಕಾಂಬೋಡಿಯಾ ರಾಷ್ಟ್ರವು ವಿಶ್ವದಲ್ಲಿ ಅಭಿವೃದ್ಧಿಶೀಲ ದೇಶವಾಗಿದೆ. ಪ್ರವಾಸೋದ್ಯಮ, ಜವಳಿ, ಆಹಾರ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಆಸಕ್ತರಿಗೆ ನಮ್ಮ ಸಂಸ್ಥೆಯು ಸೂಕ್ತ ಮಾರ್ಗದರ್ಶನ ನೀಡಿಲಿದೆ ಎಂದರು.

ಕುಮಾರಿ ಮಂಗಳಗೌರಿ ಅವರು ಪ್ರಾರ್ಥನೆ ಸಲ್ಲಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾಗಿರುವ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರು ಸ್ವಾಗತ ಕೋರಿದರು. ಕುಮಾರಿ ವರ್ಷಿಣಿ ಅವರು ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಐಟಿ ಕಮಿಟಿ ಚೇರ್ಮೆನ್ ಪಿ. ವೇಣುಗೋಪಾಲ್ ಗುಪ್ತ ಅವರು ವಂದನಾರ್ಪಣೆ ಸಲ್ಲಿಸಿದರು.

ಕೆನರಾ ಬ್ಯಾಂಕ್ನ ವಿಭಾಗೀಯ ವ್ಯವಸ್ಥಾಪಕರಾದ ಎ.ಜಿ. ಅರುಣ್ಕುಮಾರ್, ಕೈಗಾರಿಕಾ ಉದ್ಯಮಿ ರಾಜಶೇಖರ ಪಟ್ಟಣಶೆಟ್ಟಿ ಅವರು, ಕೈಗಾರಿಕೋದ್ಯಮ ಮತ್ತು ಅಂತಾರಾಷ್ಟ್ರೀಯ ಅಕಾಶಗಳು ಹಾಗೂ ಬಂಡಾಳ ಹೂಡಿಕೆಯ ಕುರಿತು ಮಾತನಾಡಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಖಜಾಂಚಿಗಳಾದ ಸಿ.ಎಸ್. ಸತ್ಯನಾರಾಯಣ ಅವರು ವೇದಿಕೆಯಲ್ಲಿದ್ದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಸಿ. ಶ್ರೀನಿವಾಸರಾವ್, ಡಾ. ಡಿ.ಎಲ್. ರಮೇಶ್ ಗೋಪಾಲ್,

ಹ್ಯಾಲೀಸ್ ಬ್ಲ್ಯೂನ ಕೆ.ಎಂ. ಶಿವಮೂರ್ತಿ, ಮೇಧಾ ಕಾಲೇಜಿನ ರಾಂಕಿರಣ್ ಮತ್ತು ಡಾ. ಸಿ.ಎಂ. ವೀರಭದ್ರಯ್ಯ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಕಮಿಟಿಗಳ ಅಧ್ಯಕ್ಷರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ವಿವಿಧ ಕೈಗಾರಿಕಾ ಹಾಗೂ ವಾಣಿಜ್ಯ ಕ್ಷೇತ್ರಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.