
ಆಳಂದ:ಮೇ.8: ಡಾ. ಅಂಬೇಡ್ಕರ್ ಅವರ ಜೀವನದಿಂದ ಪ್ರತಿಯೊಬ್ಬರೂ ಕಲಿಯಬೇಕು. ಅವರ ಕೃತಿಗಳನ್ನು ಓದಿ ಅವರ ಜೀವನ ಮೌಲ್ಯಗಳನ್ನು ಅನುಸರಿಸಬೇಕು ಹಾಗೇ ಬಸವಣ್ಣನವರ ಸಾಮಾಜಿಕ ಕ್ರಾಂತಿ ಮತ್ತು ಸಮಾನತೆಗಾಗಿ ನೀಡಿದ ಕೊಡುಗೆ ಸ್ಮರಣೀಯವಾಗಿದೆ ಅವರ ನೀಡಿದ ತತ್ವಗಳೇ ನಮಗೆ ದಾರಿದೀಪವಾಗಿವೆ ಎಂದು ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯೆ ಜ್ಯೋತಿ ವಾಘ್ಮೋರೆ ಹೇಳಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಸ್ಥಳೀಯ ಭೀಮನಗರದ ಡಾ. ಬಿ.ಆರ್. ಅಂಬೇಡ್ಕರ್ ತಾಲೂಕು ಜಯಂತಿ ಉತ್ಸವ ಸಮಿತಿಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಬಹಿರಂಗ ಉದ್ಘಾಟಿಸಿ ಮಾತನಾಡಿದರು.
ಡಾ. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಮಾತ್ರವಲ್ಲ, ಆಧುನಿಕ ಭಾರತ ನಿರ್ಮಾಣಕ್ಕೆ ಸಮಗ್ರ ದೃಷ್ಟಿಕೋನದೊಂದಿಗೆ ದುಡಿದವರು. ಕೃಷಿ, ನೀರಾವರಿ, ಕೈಗಾರಿಕೆ, ಉದ್ಯೋಗ, ಬ್ಯಾಂಕಿಂಗ್ ಕ್ಷೇತ್ರ, ನೌಕರ ಮತ್ತು ಕಾರ್ಮಿಕರ ಹಕ್ಕುಗಳ ಕಾಯ್ದೆ, ಸಮಾನ ಹಾಗೂ ಮಹಿಳೆಯರ ಮತದಾನದ ಹಕ್ಕು ಸೇರಿದಂತೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನತೆ, ನ್ಯಾಯ ಮತ್ತು ಹಕ್ಕುಗಳನ್ನು ಒದಗಿಸುವ ಸಂವಿಧಾನ ನೀಡಿ ದೇಶವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿ ಎಂದು ಅವರು ಪ್ರತಿಪಾದಿಸಿದರು.
ಭಾಗವಹಿಸಿದ್ದ ಮಾಜಿ ಶಾಸಕ ಸುಭಾμï ಗುತ್ತೇದಾರ ಅವರು, ಬಸವಣ್ಣ ಮತ್ತು ಡಾ. ಅಂಬೇಡ್ಕರ್ರ ಮಾರ್ಗದಲ್ಲಿ ಸಮಾಜ ನಡೆಯಬೇಕು. ಅಪಾರ ಪಾಂಡಿತ್ಯ ಹೊಂದಿದ್ದ ಡಾ. ಅಂಬೇಡ್ಕರ್ ಅವರು ಸುಖ-ಸೌಲಭ್ಯದ ಜೀವನ ನಡೆಸುವ ಬದಲು ಶೋಷಿತ ಮತ್ತು ಬಡವರ ಧ್ವನಿಯಾಗಿ ಇಡೀ ಜೀವನ ಮುಡಿಪಾಗಿಟ್ಟರು. ಸಂವಿಧಾನದ ಮೂಲಕ ಎಲ್ಲ ಹಕ್ಕು ಮತ್ತು ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸಿದರು. ಆದರೆ, ಕಾಂಗ್ರೆಸ್ನ ಪಿತೂರಿಯಿಂದ ಡಾ. ಅಂಬೇಡ್ಕರ್ ಅವರನ್ನು ಎರಡು ಸಲ ಚುನಾವಣೆಯಲ್ಲಿ ಸೋಲಿಸಲಾಯಿತು. ಆದರೆ ನಂತರ ದೀನದಯಾಳು ಉಪಾಧ್ಯಾಯರಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು ಎಂದು ಸ್ಮರಿಸಿದರು. ಪತ್ನಿ ಮತ್ತು ಮಕ್ಕಳಿಗಾಗಿ ದುಡಿಯಲು ಸಮಯ ಮೀಸಲಿಡದೆ, ದೇಶದಲ್ಲಿ ಸಮಾನತೆ ಸ್ಥಾಪಿಸಲು ಸಂಪೂರ್ಣ ಜೀವನ ಮುಡಿಪಾಗಿಟ್ಟ ಅಂಬೇಡ್ಕರ್ ಅವರ ತ್ಯಾಗ ನಿಜಕ್ಕೂ ಅಸಾಮಾನ್ಯವಾಗಿದೆ. ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಸಮಾಜದ ಕೆಳವರ್ಗದ ಜನರಿಗೆ ಸಮಾನ ಅವಕಾಶ ಮತ್ತು ಘನತೆ ನೀಡಲು ಹೋರಾಡಿದ ಮಹಾ ಪುರುಷರು. ಬಸವಣ್ಣ ಅಲ್ಲಮಪ್ರಭು ಮುಂತಾದ ಕೆಳ ವರ್ಗದ ಶರಣರನ್ನು ಶೂನ್ಯ ಪೀಠದ ಅಧ್ಯಕ್ಷರನ್ನಾಗಿ ಮಾಡಿ ಸಮಾನತೆಯ ಸಂದೇಶ ಸಾರಿದರು ಎಂದು ಹೇಳಿದರು.
ನಿರಗುಡಿಯ ಶ್ರೀ ಹವಾ ಮಲ್ಲಯ್ಯಾ ಮುತ್ತಾಯ್ಯ ಮತ್ತು ಅಣದೂರ ಬುದ್ಧ ವಿಹಾರದ ಬಂತೇ ವರಜ್ಯೋತಿ ಥೆರೋ ನೇತೃತ್ವ ಸಾನ್ನಿಧ್ಯ ವಹಿಸಿದ್ದರು.
ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಮಹೇಶ ಗೌಳಿ ಮಾತನಾಡಿದರು. ವೇದಿಕೆಯಲ್ಲಿ ಪ್ರಬುದ್ಧ ಆರ್.ಕೆ.ಪಾಟೀಲ, ರೇವಣಸಿದ್ಧಪ್ಪ ನಾಗೂರೆ, ಗುಂಡುಗೌಳಿ, ಮಾಜಿ ಮಹಾಪೌರ್ ರಾಜಕುಮಾರ ಎಚ್. ಕಪನೂರ, ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಅಧ್ಯಕ್ಷತೆ ಪಾಂಡುರಂಗ ಮೊದಲೆ, ಉದ್ಯಮಿ ಸಿ.ಕೆ.ಪಾಟೀಲ ವಹಿಸಿದ್ದರು. ದಿಲೀಪ ಕ್ಷಿರಸಾಗರ, ಮಹಾದೇವ ಮೋಘಾ, ಸಂತೋಷ ಸಿಂಧೆ, ರಾಜಕುಮಾರ ಮುದಗಲೆ, ದರ್ಗಾ ಕಮೀಟಿ ಅಧ್ಯಕ್ಷ ಇದ್ರೀಸ್ ಅನ್ಸಾರಿ, ಸಮಿತಿ ಅಧ್ಯಕ್ಷ ಸೂರ್ಯಕಾಂತ ಸಾಲೇಗಾಂವ, ಶಿವುಪುತ್ರ ನಡಗೇರಿ, ಗಂಗಾರಾಮ ಮುದಗಲೆ, ನಾಗರಾಜ ದೇವನೂರ, ಲಕ್ಷ್ಮಣ ಝಳಕಿ, ದಯಾನಂದ ಸಾಲೇಗಾಂವ, ಪಿಂಟು ಸಾಲೇಗಾಂವ, ಮುತ್ತಣ್ಣಾ ಜಂಗಲೆ, ಚಂದ್ರು ಜಂಗಲೆ ಮತ್ತಿತರರು ಇದ್ದರು. ಸುಗಲಾರಾಣಿ ಶಿವುಕುಮಾರ ನಿರೂಪಿಸಿದರು. ಡಾ.ಅವಿನಾಶ ದೇವನೂರ ಸ್ವಾಗತಿಸಿದರು. ರಾಘವೇಂದ್ರ ಕಣಮುಸ್ ವಂದಿಸಿದರು.






















