
ನವಲಗುಂದ,ಮೇ.೧೧: ಒಂದೇ ಕಟುಂಬದವರು ಜತೆಗಿ ಕುಳಿತು ಊಟ ಮಾಡಲು ಪುರುಸೊತ್ತಿಲ್ಲದ ಈ ದಿನಗಳಲ್ಲಿ ತಾಲ್ಲೂಕಿನ ಭಕ್ತ ಸಮೂಹವೆಲ್ಲ ಸೇರಿ ಧರ್ಮದ ಬುತ್ತಿ ಹೆಸರಿನಲ್ಲಿ ಜಾತಿ,ಮತಗಳನ್ನು ಮೀರಿ ಎಲ್ಲರೂ ಒಂದಾಗಿ ಹಿರೇಮಠಕ್ಕೆ ಬುತ್ತಿಯನ್ನು ಹೊತ್ತು ತರುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದೀರಿ ಎಂದು ಮಣಕವಾಡ ದೇವಮಂದಿರದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮಿಜಿ ಹೇಳಿದರು.
ಭಾನುವಾರ ಸಂಜೆ ಪಂಚಗ್ರಹ ಹಿರೇಮಠದ ನೂತನ ಪೀಠಾಧಿಕಾರ ಹಾಗೂ ಗುರು ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಧರ್ಮದ ಬುತ್ತಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು ಹಿರೇಮಠದ ನೂತನ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ತಾಲೂಕಿನ ಸಾವಿರಾರು ಮಹಿಳೆಯರು ರಾತ್ರಿ ಪೂರ್ತಿ ಸೆಂಗಾ ಹೋಳಿಗೆ,ರೊಟ್ಟಿ ಬುತ್ತಿ ಮಾಡಿಕೊಂಡು ಬಿಸಿಲನ್ನು ಲೆಕ್ಕಿಸದೇ ಬೃಹತ್ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಆಧ್ಯಾತ್ಮ ಚಿಂತನೆಗೆ ಆದ್ಯತೆ ನೀಡಿರುವುದು ನವಲಗುಂದದ ಹೆಮ್ಮೆಯಾಗಿದೆ ಎಂದರು.
ಗವಿಮಠದ ಶ್ರೀ ಬಸವಲಿಂಗಸ್ವಾಮಿಜಿ ಮಾತನಾಡಿ ಈ ಹಿಂದೆ ನಡೆದ ಎಲ್ಲ ಮಠಗಳ ಪಟ್ಟಾಧಿಕಾರ ಮಹೋತ್ಸವಗಳನ್ನೂ ಮೀರಿಸುವಂತಹ ಧಾರ್ಮಿಕ ಕಾರ್ಯಗಳು ತಾಲೂಕಿನ ಎಲ್ಲ ಭಕ್ತರ ಸಹಕಾರದಿಂದ ಹಿರೇಮಠದಲ್ಲಿ ನಡೆದಿರುವುದು ಎಲ್ಲರನ್ನು ಭಕ್ತ ಸಾಗರದಲ್ಲಿ ಮಿಂದೇಳುವAತೆ ಮಾಡಿದೆ ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ ಪಟ್ಟನ್ದಲ್ಲಿ ಹಿಂದೇದು ಕಾಣದಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮ ಇದಾಗಿದ್ದು, ಸಾವಿರಾರು ಮಹಿಳೆಯರು ಧರ್ಮದ ಬುತ್ತಿಯನ್ನು ಹೊತ್ತು ಶ್ರೀಮಠಕ್ಕೆ ಮೆರವಣೆಗೆ ಮೂಲಕ ಬಂದು ಸಾವಿರಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ಬುತ್ತಿಯನ್ನು ನೀಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಇದಕ್ಕೂ ಮುನ್ನ ಶ್ರೀ ಶಂಕರ ಕಾಲೇಜು ಮೈದಾನದಲ್ಲಿ ಧರ್ಮದ ಬುತ್ತಿ ಜಾಥಾವನ್ನು ಪಂಚಗ್ರಹ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿಯವರ ಸಾನ್ನಿಧ್ಯದಲ್ಲಿ ಮಣಕವಾಡ ಶ್ರೀ ಗವಿಮಠದ ಬಸವಲಿಂಗ ಸ್ವಾಮಿಜಿ,ನರಗುಂದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಜಿ, ನಿಯೋಜಿತ ಪೀಠಾಧಿಕಾರಿ ಶ್ರೀ ವೀರಬಸವ ಸ್ವಾಮಿಜಿ, ಶಾಸಕ ಎನ್.ಎಚ್.ಕೋನರಡ್ಡಿ.ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಚಾಲನೆ ನೀಡಿದರು.
ಅಣ್ಣಪ್ಪ ಬಾಗಿ.ಪಾಂಡಪ್ಪ ಕೋನರಡ್ಡಿ, ಸಿದ್ದಲಿಂಗಯ್ಯ ಹಿರೇಮಠ,ಶಿವಾಜಿ ಕಲಾಲ,ಯಲ್ಲಪ್ಪ ಭೋವಿ, ಮಹೇಶ ಹಳ್ಳದ, ಬಾಬು ಹಳ್ಳದ,ಅಡಿವೆಪ್ಪ ಶಿರಸಂಗಿ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.





















