
ಬೆಂಗಳೂರು, ಮೇ ೮- ಬೆಂಗಳೂರಿನಿಂದ ಐಪಿಎಲ್ ಕ್ರಿಕೆಟ್ ಫೈನಲ್ ಪಂದ್ಯ ಸ್ಥಳಾಂತರಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಅಹಮದಾಬಾದ್ನಲ್ಲಿ ಹೆಚ್ಚು ಆಸನಗಳ ವ್ಯವಸ್ಥೆ ಇದೆ ಎಂದು ಸ್ಥಳಾಂತರ ಮಾಡಿರಬಹುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರಿಡಾಂಗಣದಿಂದ ಐಪಿಎಲ್ ಫೈನಲ್ ಪಂದ್ಯ ವರ್ಗಾವಣೆ ಮಾಡಿರುವ ವಿಚಾರಣೆ ಬಿಸಿಸಿಐ ಆರ್ಸಿಬಿಗೆ ಬಿಟ್ಟದ್ದು ನಮಗೂ ಅದಕ್ಕೂ ಸಂಬಂಧ ಇಲ್ಲ. ಅವರ ಒಪ್ಪಂದ ನಮಗೇನೂ ಗೊತ್ತಿಲ್ಲ ಎಂದರು.
ಈ ಪಂದ್ಯಾವಳಿಗಳನ್ನು ವಾಣಿಜ್ಯ ದೃಷ್ಟಿಕೋನದಲ್ಲಿ ನೋಡಿದ್ದಾರೆ. ಆ ಕಾರಣಕ್ಕೆ ಸ್ಥಳಾಂತರ ಆಗಿರಬಹುದು. ಭದ್ರತೆ ಸೇರಿದಂತೆ ಬೇರೆ ಯಾವ ವಿಚಾರದಲ್ಲೂ ಕೊರತೆಯಾಗದಂತೆ ನಾವು ಕ್ರಮ ಕೈಗೊಂಡಿದ್ದೇವೆ. ಕಡಿಮೆ ಸಮಯದಲ್ಲಿ ಭದ್ರತೆ ವ್ಯವಸ್ಥೆ ಮಾಡಿ ನ್ಯಾ. ಖುನ್ನಾ ವರದಿಯಂತೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು
ರಾಜ್ಯದ ಶಾಸಕರು ಟಿಕೆಟ್ ಬೇಡಿಕೆ ಹೆಚ್ಚಿದ್ದರಿಂದ ಫೈನಲ್ ಪಂದ್ಯಾ ಸ್ಥಳಾಂತರವಾಗಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಗೆನಾದರೂ ಇದ್ದರೆ ಅದನ್ನು ಕ್ರಿಕೆಟ್ ಸಂಸ್ಥೆಯವರು ಹೇಳಬೇಕು. ಯಾರ್ಯಾರು ಎಷ್ಟು ಟಿಕೆಟ್ ತೆಗೆದಿದ್ದಾರೆ ಬಹಿರಂಗಪಡಿಸಲಿ ಎಂದರು
ಆರ್ಸಿಬಿ ಅಭಿಮಾನಿಗಳಿಗೆ ಸರ್ಕಾರದಿಂದ ಮೋಸ ಆಗಿದೆ ಎಂಬ ವಿಪಕ್ಷಗಳ ಆರೋಪ ಸರಿಯಲ್ಲ. ಬಿಜೆಪಿ- ಜೆಡಿಎಸ್ ಕ್ರೀಡೆಗೆ ಏನು ಸಹಕಾರ ಕೊಟ್ಟಿದೆ ಎಂಬುದು ಗೊತ್ತಿದೆ. ಸುಮ್ಮನೆ ಆರೋಪ ಮಾಡುವುದು ತರವಲ್ಲ ಎಂದು ಗರಂ ಆಗಿ ಹೇಳಿದರು
ತಮಿಳುನಾಡಿನಲ್ಲಿ ಸರ್ಕಾರ ರಚನೆ ವಿಳಂಬವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನದಲ್ಲಿ ಕೆಲವು ಅಂಶಗಳಿವೆ. ಅದನ್ನು ರಾಜ್ಯಪಾಲರು ನೋಡುತ್ತಾರೆ ಕಾನೂನಿನಲ್ಲಿ ಏನಿದೆ ಎಂಬುದನ್ನು ನೋಡಿ ಕ್ರಮ ವಹಿಸುತ್ತಾರೆ. ಟಿವಿಕೆ ಪಕ್ಷದವರು ನ್ಯಾಯಾಲಯದ ಕದ ತಟ್ಟಬಹುದು ಎಂದು ಪರಮೇಶ್ವರ್ ಹೇಳಿದರು

























