
ಸಂಜೆವಾಣಿ ವಾರ್ತೆ
ಕಂಪ್ಲಿ, ಮೇ.06 ತಾಲೂಕಿನ ಹಂಪಾದೇವನಹಳ್ಳಿ ಗ್ರಾಮದಲ್ಲಿ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನಿಗೆ ಸಂಬಂಧಿಸಿದ ಶಾಸನ ಪತ್ತೆಯಾಗಿದೆ. ಹಂಪಾದೇವನಹಳ್ಳಿ ಗ್ರಾಮದ ಪಶ್ಚಿಮ ದಿಕ್ಕಿಗೆ 200 ಮೀಟರ್ ಅಂತರದ ನಾರಿಹಳ್ಳ ಹರಿಯುವಾ ಹಳ್ಳ ದಂಡೆ ಮೇಲೆ ಆಪ್ರಕಟಿತ ಶಾಸನ ಕಂಡುಬಂದಿದೆ. ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದ ಸುಮಾರು16ನೇ ಶತಮಾನದ ಅಪರೂಪದ ಶಾಸನ ಪತ್ತೆಯಾಗಿದೆ. ಇದು ಇತಿಹಾಸಾಸಕ್ತರಲ್ಲಿ ವಿಶೇಷ ಕುತೂಹಲ ಮೂಡಿಸಿದೆ.
ಕೊಪ್ಪಳ ತಾಲೂಕಿನ ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಕೆ ಅಂಜಿನಯ್ಯ (ಜೀರಿಗನೂರು ಗ್ರಾಮ ) ಅವರು ಈ ಮಹತ್ವದ ಶಾಸನವನ್ನು ಶೋಧನೆ ಮಾಡಿ ಪತ್ತೆ ಮಾಡಿದ್ದಾರೆ ಹಾಗೂ ಈ ಶಾಸನದ ಸಾಲುಗಳನ್ನು ಇವರು ಪ್ರಾಥಮಿಕ ಹಂತದಲ್ಲಿ ಓದಿ ಅರ್ಥೈಸಿದ್ದಾರೆ ಮತ್ತು ಹಂಪದೇವನಹಳ್ಳಿ ಇತಿಹಾಸದ ಹಿರಿಮೆ ಗರಿಮೆ ಮುಡಿಸಿದ್ದಾರೆ.
ಲಿಪಿ ಮತ್ತು ಭಾಷೆ , ಕಲ್ಲನ್ನು ಗಮನಿಸಿದರೆ ಇದು 16ನೆಯ ಶತಮಾನದ್ದು ಅಂದರೆ ವಿಜಯನಗರ ಸಾಮ್ರಾಜ್ಯದ ಕಾಲದ್ದು ಎಂದು ಭಾವಿಸಲಾಗಿದೆ ಹಾಗೂ ಕನ್ನಡ ಭಾಷೆ ಮತ್ತು ಕನ್ನಡ ಲಿಪಿ ಹೊಂದಿರುವ ಶಾಸನವಾಗಿದೆ. ಈ ಶಾಸನದ ತಿಳಿಯಲು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಶಾಸನ ತಜ್ಞರಾದ ಡಾ.ನಾಗರಾಜಪ್ಪ ಅವರು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಡೂರಿನ ಸಹಾಯಕ ಪ್ರಾಧ್ಯಾಪಕರಾದ ತಳವಾರ ನರಸಿಂಹ ಅವರು ಈ ಶಾಸನ ಪಾಠವನ್ನು ಓದಿ ಅರ್ಥೈಸಿ ಕೊಟ್ಟಿದ್ದಾರೆ. ಈ ಶಾಸನದಲ್ಲಿ ಬರೆದಿರುವ ಮೂರು ಸಾಲುಗಳ ಉಲ್ಲೇಖ
“ಶ್ರೀ ಕೃಷ್ಣರಾಯ ಪುರವೆಂ
ದು ಪ್ರತಿ ನಾಮವಾದ ಹಂಪಾ
ದೇವಿ ಹಳಿಯ ಹೊಲಮೆರೆ” ಎಂದು ಉಲ್ಲೇಖವಿದೆ. ಈಗಾಗಲೇ ಉಲ್ಲೇಖಗೊಂಡಿರುವ ಶ್ರೀಕೃಷ್ಣದೇವರಾಯನ ಹಂಪದೇವನಹಳ್ಳಿ ಶಾಸನದ ಪ್ರಕಾರ ಶಾಲಿವಾಹನ ಶಕವರ್ಷ ೧೪೩೩ನೆಯ ಪ್ರಜಾಪತಿ, ಚೈತ್ರ, ಶು.೧೩ ಬುಧವಾರ (ಕ್ರಿ.ಶ.೧೨-೩-೧೫೧೧)ದಂದು ಕೃಷ್ಣರಾಯನು ನಾನಾ ಗೋತ್ರದ ಮಹಾಜನಗಳೆಗೆ ನಾರಿಸೀಮೆಯ ಹಂಪದೇವಹಳ್ಳಿಯನ್ನು ಕೃಷ್ಣರಾಯಪುರವೆಂದು ಮರುನಾಮಕರಣ ಮಾಡಿ ದಾನ ನೀಡಿರುವ ಹಂಪಾದೇವನಹಳ್ಳಿ ಶಾಸನದಲ್ಲಿ ಉಲ್ಲೇಖವಾಗಿದೆ ಹಾಗೂ ನಾರಿ ಹಳ್ಳ ದಂಡೆಯ ಮೇಲೆ ವಿಷ್ಣುವಿನ ಅಗ್ರಹಾರವನ್ನು ನಿರ್ಮಿಸಿದ್ದಾನೆ ಮತ್ತು ಈ ಶಾಸನಕ್ಕೂ ಮತ್ತು ನೂತನ ಪತ್ತೆ ಮಾಡಿದ ಶಾಸನಕ್ಕೂ ಸಂಬಂಧವಿದೆ .ಶಾಸನದ ಮೇಲ್ಭಾಗದ ಎಡ ಮತ್ತು ಬಲಭಾಗದಲ್ಲಿ ಸೂರ್ಯ ಮತ್ತು ಚಂದ್ರನ ಚಿಹ್ನೆಗಳನ್ನು ಕೆತ್ತಲಾಗಿದೆ. ಶಾಸನದ ಕೆಳ ಹಂತದಲ್ಲಿ ವಿಷ್ಣುವಿನ ಮೂರನೇ ಅವತಾರ ವಾಮನ ಚಿತ್ರ ಕೆತ್ತಲಾಗಿದೆ ಕಾರಣ ಕೃಷ್ಣದೇವರಾಯ ವಿಷ್ಣುವಿನ ಆರಾಧಕನಾಗಿದ್ದನು ಇದು ವಿಶೇಷವಾದ ಶಾಸನವಾಗಿದೆ. ವಿಷ್ಣುವಿನ ಅವತಾರ ವಾಮನು ತನ್ನ ಎಡ ಮತ್ತು ಬಲ ಕೈಯಲ್ಲಿ ಕಮಂಡಲು ಮತ್ತು ಛತ್ರಿ ಹಿಡಿದಿದ್ದಾನೆ ಆತನ ಸಂಪ್ರದಾಯಿಕ ವಸ್ತ್ರಗಳನ್ನು ಧರಿಸಿದ್ದಾನೆ ,ಈ ಚಿತ್ರದ ಉದ್ದೇಶ ವಾಮನ ಬಲಿ ಚಕ್ರವರ್ತಿ ತುಳಿದು ಭೂಮಂಡಲದ ಅಧಿಪತಿಯಾದ ಸಂಗತಿ ಅದೇ ರೀತಿಯಾಗಿ ಅದೇ ಹಂಪ ದೇವನಹಳ್ಳಿಯ ವಿಷ್ಣು ಪ್ರತಿರೂಪ ವಾಮನಿಗೆ ಹೊಲಮೆರೆ ಭೂಮಿಯನ್ನು ದಾನ ಅರ್ಪಿಸಿದ ಭಾವ ಅರ್ಥ ತೋರುಸ್ತದೆ.
ಈ ಶಾಸನ ಸುಮಾರು ಐದು ಅಡಿ ಎತ್ತರ ,2 ಅಡಿ ಅಗಲವಿರುವ ಈ ಬೃಹತ್ ಗಾತ್ರದ ಬಿಳಿ ಗ್ರಾನೈಟ್ ಕಲ್ಲು ಬಂಡೆಯ ಮೇಲೆ ಮೂರು ಫಲಕಗಳನ್ನು ಒಳಗೊಂಡಿದ್ದು ಹಾಗೂ ಮೂರು ಸಾಲುಗಳ ಶಾಸನ ಬರೆಯಲಾಗಿದೆ. ಮೊದಲನೇ ಶಾಸನದ ಮೇಲ್ಭಾಗದಎಡ ಮತ್ತು ಬಲಭಾಗದಲ್ಲಿ ಸೂರ್ಯ ಮತ್ತು ಚಂದ್ರನ ಚಿಹ್ನೆಗಳನ್ನು ಕೆತ್ತಲಾಗಿದೆ ಎರಡನೇ ಭಾಗ ಮೂರು ಸಾಲುಗಳ ಶಾಸನ ಹಾಗೂ ಮೂರನೇ ಭಾಗದ ಹಂತದಲ್ಲಿ ವಿಷ್ಣುವಿನ ಮೂರನೇ ಅವತಾರ ವಾಮನ ಚಿತ್ರವನ್ನು ಕೆತ್ತಲಾಗಿದೆ. ಈ ಒಂದು ಶಾಸನ ಇಡೀ ವಿಜಯನಗರ ಸಾಮ್ರಾಜ್ಯದಲ್ಲಿ ಒಂದು ವಿಶೇಷವಾದ ಶಾಸನವಾಗಿದೆ ಗ್ರಾಮದ ಪದನಾಮ ವಿಶೇಷ ಮತ್ತು ವಾಮನ ಚಿತ್ರ ಇರುವ ಸಂಗತಿ ವಿಶೇಷವಾಗಿದೆ. ಹಂಪ ದೇವನಹಳ್ಳಿ ಗ್ರಾಮದ ಯುವಕರಾದ ಕರಿಬಸವ, ಉಮೇಶ್, ಪ್ರವೀಣ್ ಅವರು ಈ ಶಾಸನ ಪತ್ತೆ ಹಚ್ಚಲು ಹಾಗೂ ಗುರುತಿಸುವುದರಲ್ಲಿ ಸಂರಕ್ಷಣೆ ಸಹಾಯಕರಾಗಿ ಕೈಜೋಡಿಸಿದ್ದಾರೆ.





















