
ಸಂಜೆವಾಣಿ ವಾರ್ತೆ:
ಕೊಟ್ಟೂರು: ಜೂನ್ 21: ಶಾಲಾ ಕಾಲೇಜು ಡೊನೇಷನ್ ಹಾವಳಿ ಮತ್ತು ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಕೊಟ್ಟೂರು ಬಂದ್ ಮಾಡುವುದಾಗಿ ಪ್ರಗತಿಪರ ಸಂಘಟನೆಗಳ ಮುಖಂಡರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಭೆ ನಡೆಸಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಶಾಲಾ ಕಾಲೇಜುಗಳು ವಸೂಲಿ ಮಾಡುತ್ತಿರುವ ವಿಪರೀತ ಡೊನೇಷನ್ ಹಾವಳಿ ವಿರುದ್ಧ ಮೇ 27ರಂದು ಕೊಟ್ಟೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಗಿತ್ತು ಇದನ್ನು ಮನಗಂಡು ಜೂನ್ 10 ರಂದು ತಹಸಿಲ್ದಾರ್,ಪೋಲಿಸ್ ಇಲಾಖೆ ಮತ್ತು ಬಿಇಓ ರವರ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ಸಭೆಯನ್ನು ನಡೆಸಿ ಶುಲ್ಕವನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಡಿಮೆ ಮಾಡಲು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಆಗ್ರಹ ಮಾಡಿದಾಗ ಅದಕ್ಕೆ ಮಣಿದು ಶಾಲಾ ಮತ್ತು ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರು ಎಲ್ಲರೂ ಚರ್ಚಿಸಿ ಇನ್ನೆರಡು ದಿನಗಳಲ್ಲಿ ಶುಲ್ಕವನ್ನು ಕಡಿಮೆ ಮಾಡುವುದಾಗಿ ಅಧಿಕಾರಿಗಳ ಮುಂದೆ ಭರವಸೆ ನೀಡಿದ್ದರು
ಆದರೆ ಭರವಸೆ ನೀಡಿ 12 ದಿನಗಳು ಕಳೆದರೂ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ಅಧಿಕಾರಿ ವರ್ಗದವರಿಂದ ದೊರೆಯದೆ ಇರುವುದರಿಂದ ಹಾಗೂ ಅಧಿಕಾರಿಗಳ ನಿರ್ದೇಶನಗಳಿಗೆ ಸ್ವಲ್ಪವೂ ಬೆಲೆ ಕೊಡದೆ ಇಲ್ಲಿಯವರೆಗೂ ಶುಲ್ಕವನ್ನು ಕಡಿಮೆ ಮಾಡದೆ ಇರುವುದು ಇವರ ಪ್ರಭಾವಿತನ,ನಿರ್ಲಕ್ಷತನ ಎದ್ದು ತೋರುತ್ತದೆ ಇದರಿಂದಾಗಿ ಕೊಟ್ಟೂರಿನ ಎಲ್ಲ ಪ್ರಗತಿಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕೊಟ್ಟೂರು ಬಂದ್ ಮಾಡುವುದಾಗಿ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಬದ್ದಿ ದುರುಗೇಶ್,ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ವಕೀಲರಾದ ತೆಗ್ಗಿನಕೇರಿಹನುಮಂತಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಗುಡಿಯಾರ್ ಮಲ್ಲಿಕಾರ್ಜುನ್,ರೈತ ಸಂಘದ ಮುಖಂಡರಾದ ಜಯಪ್ರಕಾಶ್ ನಾಯ್ಕ್,ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಪಿ. ಚಂದ್ರಶೇಖರ,ಅಂಜಿನಪ್ಪ,ಕುಬೇರಪ್ಪ,ಹನುಮನಹಳ್ಳಿ ಕೆಂಚಪ್ಪ,ಕೊಲ್ಲಾರೆಪ್ಪ, ಮುಂತಾದವರು ಇದ್ದರು.


























