ಶಿವಮೊಗ್ಗದ ಬೊಮ್ಮನಕಟ್ಟೆಗೆ ಸರ್ಕಾರಿ ಸಿಟಿ ಬಸ್ ಸಂಚಾರ ಆರಂಭ!

ಶಿವಮೊಗ್ಗ, ಜೂ. ೧೫- ಶಿವಮೊಗ್ಗ ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ಬೊಮ್ಮನಕಟ್ಟೆ ಬಡಾವಣೆಗೆ ಜೂ. ೧೪ ರಿಂದ ಸರ್ಕಾರಿ ಸಿಟಿ ಬಸ್ ಸೇವೆ ಆರಂಭವಾಗಿದೆ. ಬೊಮ್ಮನಕಟ್ಟೆ ಬಡಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಬಸ್ ಸಂಚಾರಕ್ಕೆ ಅಧಿಕೃತ ಚಾಲನೆ ನೀಡಿದರು.

ಬೊಮ್ಮನಕಟ್ಟೆ ಬಡಾವಣೆಗೆ ಸರ್ಕಾರಿ ಸಿಟಿ ಬಸ್ ಓಡಿಸುವಂತೆ, ಯುವ ಕಾಂಗ್ರೆಸ್ ಮುಖಂಡ ಕೆ ಚೇತನ್ ಅವರು ಕೆಎಸ್‌ಆರ್‌ಟಿಸಿಗೆ ಒತ್ತಾಯಿಸಿಕೊಂಡು ಬಂದಿದ್ದರು. ಈ ಸಂಬಂಧ ಹಲವು ಬಾರಿ ಸ್ಥಳೀಯ ನಿವಾಸಿಗಳೊಂದಿಗೆ ಮನವಿ ಮಾಡಿದ್ದರು. ಆದರೆ ಬಸ್ ಸಂಚಾರ ಆರಂಭವಾಗಿರಲಿಲ್ಲ.

ಈ ನಡುವೆ ಕಳೆದ ಕೆಲ ತಿಂಗಳುಗಳ ಹಿಂದೆ ಕೆ.ಚೇತನ್ ಅವರು ಮೂಲತಃ ಭದ್ರಾವತಿ ನಗರದ ನಿವಾಸಿಯಾದ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡ ಬಿ.ವಿ. ಶ್ರೀನಿವಾಸ್ ಅವರ ನೇತೃತ್ವದಲ್ಲಿ, ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿದ್ದರು.

ಸರ್ಕಾರಿ ಸಿಟಿ ಬಸ್ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಬಿ.ವಿ. ಶ್ರೀನಿವಾಸ್ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ್ದ ಸಚಿವರು, ಕಾಲಮಿತಿಯೊಳಗೆ ಸದರಿ ಬಡಾವಣೆಗೆ ಸರ್ಕಾರಿ ಬಸ್ ಓಡಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಕೆಎಸ್‌ಆರ್’ಟಿಸಿ ಸಂಸ್ಥೆ ಬಸ್ ಸಂಚಾರ ಆರಂಭಿಸಿದೆ.

ಸಚಿವರು ಗಮನಿಸಲಿ : ಶಿವಮೊಗ್ಗ ನಗರಕ್ಕೆ ಈ ಹಿಂದೆ ಜೆನ್ ನರ್ಮ್ ಯೋಜನೆಯಡಿ ೬೫ ಸರ್ಕಾರಿ ಸಿಟಿ ಬಸ್‌ಗಳು ಮಂಜೂರಾಗಿದ್ದವು. ಈ ಹಿಂದೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೂ ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರ ಅವಧಿಯಲ್ಲಿಯೇ ಬಸ್‌ಗಳ ಸಂಚಾರಕ್ಕೂ ಚಾಲನೆ ನೀಡಲಾಗಿತ್ತು.

ಆದರೆ ಕಾಲಕ್ರಮೇಣ ಸರ್ಕಾರಿ ಸಿಟಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಗಮನಹರಿಸಬೇಕಾಗಿದೆ. ಸ್ಥಗಿತಗೊಂಡ ಸರ್ಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ.

ಸಾರಿಗೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದ ಅರ್ಪಿಸಿದ ಕೆ.ಚೇತನ್

*** ‘ಶಿವಮೊಗ್ಗ ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ಬೊಮ್ಮನಕಟ್ಟೆ ಬಡಾವಣೆಗೆ ಸರ್ಕಾರಿ ಸಿಟಿ ಬಸ್ ಓಡಿಸಲು ಕ್ರಮಕೈಗೊಂಡ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಯುವ ಕಾಂಗ್ರೆಸ್ ಘಟಕದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ಅವರಿಗೆ ಧನ್ಯವಾದ ಅರ್ಪಿಸುವುದಾಗಿ’ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಕೆ.ಚೇತನ್ ಅವರು ತಿಳಿಸಿದ್ದಾರೆ.