Home ಜಿಲ್ಲೆ ಮನೆ ಕುಸಿತ ಸಂತ್ರಸ್ತ ಕುಟುಂಬಕ್ಕೆ ಶಾಸಕ ಬಿ. ನಾಗೇಂದ್ರ ನೆರವು

ಮನೆ ಕುಸಿತ ಸಂತ್ರಸ್ತ ಕುಟುಂಬಕ್ಕೆ ಶಾಸಕ ಬಿ. ನಾಗೇಂದ್ರ ನೆರವು

ಸಂಜೆವಾಣಿ ವಾರ್ತೆ

ಬಳ್ಳಾರಿ, ಮೇ.22: ನಗರದ ಬಂಡಿಹಟ್ಟಿ ಮುಖ್ಯರಸ್ತೆಯ ಬಂದರ್ ಶಾ ಬಾಬಾ ದರ್ಗಾ ಸಮೀಪ ಭಾರೀ ಮಳೆಯಿಂದ ಮನೆ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಕ್ಕೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಮಾನವೀಯ ನೆರವಿನ ಕೈಚಾಚಿದ್ದಾರೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಾರ್ಡ್ 30ರಲ್ಲಿರುವ ಮನೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಕುಟುಂಬದ ಸದಸ್ಯರು ಭಯಭೀತರಾಗಿದ್ದು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿವೆ. ಮನೆ ಕಳೆದುಕೊಂಡ ಕುಟುಂಬ ತಾತ್ಕಾಲಿಕ ಆಶ್ರಯದಲ್ಲಿ ದಿನ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಂತ್ರಸ್ತ ಕುಟುಂಬದ ದುಸ್ಥಿತಿಯ ಮಾಹಿತಿ ತಿಳಿದ ತಕ್ಷಣ ಶಾಸಕ ನಾಗೇಂದ್ರ ಅವರು ಸ್ಪಂದಿಸಿ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ಇತರ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದ ಹಿನ್ನೆಲೆಯಲ್ಲಿ ಅವರ ಪರವಾಗಿ ಬೆಂಬಲಿಗರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದಬೆಂಬಲಿಗರು, “ಮಳೆ ಹಾನಿಯಿಂದ ಸಂಕಷ್ಟದಲ್ಲಿರುವ ಜನರ ನೆರವಿಗೆ ಶಾಸಕ ನಾಗೇಂದ್ರ ಅವರು ಸದಾ ಸ್ಪಂದಿಸುತ್ತಾರೆ. ಸಂತ್ರಸ್ತ ಕುಟುಂಬಕ್ಕೆ ತುರ್ತು ನೆರವು ಒದಗಿಸುವ ಉದ್ದೇಶದಿಂದ ಆರ್ಥಿಕ ಸಹಾಯ ನೀಡಲಾಗಿದೆ” ಎಂದು ಹೇಳಿದರು.

ಸ್ಥಳೀಯ ನಿವಾಸಿಗಳು ಕೂಡ ಶಾಸಕ ನಾಗೇಂದ್ರ ಅವರ ನೆರವಿನ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. “ಮನೆ ಕುಸಿತದಿಂದ ಕುಟುಂಬ ತೀವ್ರ ಆತಂಕಕ್ಕೆ ಒಳಗಾಗಿತ್ತು. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸ್ಪಂದಿಸಿರುವುದು ಧೈರ್ಯ ತುಂಬುವ ಕೆಲಸವಾಗಿದೆ” ಎಂದು ಹೇಳಿದರು.

ಮಳೆ ಹಾನಿಯಿಂದ ನಗರದಲ್ಲಿ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ಹಾನಿಯಾಗಿರುವುದರಿಂದ ಸರ್ಕಾರ ಮತ್ತು ಸ್ಥಳೀಯ ಆಡಳಿತ ಮತ್ತಷ್ಟು ಪರಿಹಾರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.