ವಿವೇಕಾನಂದ ಕೇಂದ್ರದಿಂದ ಯೋಗ ದಿನಾಚರಣೆ

ಕಲಬುರಗಿ:ಜೂ.24: ಇಲ್ಲಿಯ ಮಹಾವೀರ ನಗರದಲ್ಲಿರುವ ಶ್ರೀ ವಿವೇಕಾನಂದ ಯೋಗ ಮತ್ತು ಚಿಕಿತ್ಸಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಯೋಗ ದಿನಾಚರಣೆ ಸಮಾರಂಭವನ್ನು ನಿವೃತ್ತ ಪ್ರಾಧ್ಯಾಪಕರು ಹಾಗೂ ನೀಲಗಾರ ಕ್ಷತ್ರಿಯ ಸಮಾಜದ ಹಿರಿಯರಾದ ಪ್ರೊ. ನಾರಾಯಣ ಜೆ. ಕಳಸ್ಕರ್ ಉದ್ಘಾಟಿಸಿದರು. `ಸಂಯುಕ್ತ ಕರ್ನಾಟಕ’ದ ಸಹಾಯಕ ಸಂಪಾದಕ ಶೇಷಗಿರಿ ಹುಣಸಗಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ವಿವೇಕಾನಂದ ಯೋಗ ಮತ್ತು ಚಿಕಿತ್ಸಾ ಕೇಂದ್ರದ ನಿರ್ದೇಶಕ ನಿತ್ಯಾನಂದ ಬಂಡಿಯವರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದಲೂ ಕೇಂದ್ರವು ಯೋಗ ತರಬೇತಿ ಮತ್ತು ಯೋಗಿಕ ಚಿಕಿತ್ಸೆ ನೀಡುತ್ತಿದೆ, ದಿನದಿಂದ ದಿನಕ್ಕೆ ವಿದ್ಯಾರ್ಥಿಗಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ತರಬೇತಿ ಸೇರಿಕೊಳ್ಳುತ್ತಿದ್ದು, ಇದು ಯೋಗದ ಮಹತ್ವ ತಿಳಿಸಿಕೊಡುತ್ತದೆ ಎಂದರು.
ಕೇಂದ್ರದ ಯುವ ವಿದ್ಯಾರ್ಥಿನಿ ಕು. ಅಮೃತಾ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಕಿಶೋರ್ ಮೋರಖಂಡಿಕರ್ ಅವರು ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು.
ಆರಂಭದಲ್ಲಿ ಶ್ರೀಮತಿ ರೂಪಾ ಪಾಟೀಲ್ ಹಾಗೂ ತಂಡದವರು ದೇಶಭಕ್ತಿ ಗೀತೆ ಹಾಡಿದರು. ವೇಣುಗೋಪಾಲ ಎಂ. ಕುಲಕರ್ಣಿ ಸ್ವಾಗತಿಸಿದರು. ರಾಘವೇಂದ್ರ ನಿರೂಪಿಸಿದರು. ಸಚಿನ್ ಜವಾಜಿ ವಂದಿಸಿದರು.