
ಮಧುಗಿರಿ, ಅ. ೬- ತಾಲ್ಲೂಕಿನ ಕೊಡಿಗೇನಹಳ್ಳಿ ಭಾಗದ ಕೂಲಿ ಕಾರ್ಮಿಕರಿಗೆ ಮತ್ತು ರೈತರು ಪ್ರತಿನಿತ್ಯ ಕೃಷಿ ಚಟುವಟಿಕೆ ಹಾಗೂ ವಿದ್ಯಾಭ್ಯಾಸಕ್ಕೆ ಗ್ರಾಮದಿಂದ ತೆರಳಲು ಹರಸಾಹಸ ಪಡುತ್ತಿದ್ದು, ತುರ್ತಾಗಿ ಡಾಂಬರ್ ರಸ್ತೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಹೋಬಳಿಯ ಸೂರನಾಗೇನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಸೋರನಾಗೇನಹಳ್ಳಿ-ಕಾಳೆನಹಳ್ಳಿಗೆ ಹೋಗುವ ರಸ್ತೆ ಗುಣಿಗಳು ಬಿದ್ದಿದ್ದು ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು, ವಿದ್ಯಾರ್ಥಿಗಳು, ರೈತ ಕೂಲಿ ಕಾರ್ಮಿಕರು ಹಾಗೂ ಹಾಲು ಉತ್ಪಾದಕರು ಡೈರಿಗೆ ಹೋಗಬೇಕಾದರೆ ಕಷ್ಟ ಪಡಬೇಕಾಗುತ್ತದೆ ಎಂದು ಆರೋಪಿಸಿದರು.
ಈಗಾಗಲೇ ಇಲ್ಲಿನ ಸಮಸ್ಯೆ ಬಗ್ಗೆ ಶಾಸಕ ಕೆ.ಎನ್. ರಾಜಣ್ಣ ನವರ ಗಮನಕ್ಕೆ ತಂದಿದ್ದು ಶಾಸಕರು ಸುಮಾರು ೧ ಕೋಟಿ ರೂ. ವೆಚ್ಚದ ವಿಶೇಷ ಅನುದಾನದಡಿ ೧.೩ ಕಿಮಿ ರಸ್ತೆ ಡಿಪಿಆರ್ ಮಾಡಿಸಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ರಸ್ತೆಗೆ ಕಾಯಕಲ್ಪ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಲಕ್ಷ್ಮಿನಾರಾಯಣ, ಆನಂದ, ಚೌಡಪ್ಪ, ನರಸಿಂಹಪ್ಪ, ರವಿ, ನಾಗರಾಜು, ನರಸಿಂಹಪ್ಪ ಎಸ್. ಸಂಜೀವಪ್ಪ, ಈಶ್ವರಪ್ಪ, ರಘು ಮತ್ತಿತರರು ಉಪಸ್ಥಿತರಿದ್ದರು.