
ಬೆಂಗಳೂರು.ಏ೯: ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್ಡಿ ಕುಮಾರಸ್ವಾಮಿ ಹಾಗೂ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಸೋಮಣ್ಣ ಅವರು ಇಂದು ಬೆಂಗಳೂರುಮೈಸೂರು ರೈಲು ಮಾರ್ಗದಲ್ಲಿ ವಿಶೇಷ ವೀಕ್ಷಣಾ ಕಾರಿನಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದರು.
ಈ ವೇಳೆ ಶೆಟ್ಟಿಹಳ್ಳಿ ಪ್ರದೇಶದಲ್ಲಿ ಪ್ರಯಾಣಿಕರು ಮತ್ತು ಗ್ರಾಮಸ್ಥರ ಅಹವಾಲುಗಳನ್ನು ಸಚಿವರು ನೇರವಾಗಿ ಆಲಿಸಿದರು. ಇವರೊಂದಿಗೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದವೀರ್ ಒಡೆಯರ್ ಹಾಗೂ ಮಾಜಿ ಸಂಸದ ಸಿಎಸ್ ಪುಟ್ಟರಾಜು ಕೂಡ ಉಪಸ್ಥಿತರಿದ್ದರು.
ಪರಿಶೀಲನೆ ವೇಳೆ ಬೆಂಗಳೂರು ವಿಭಾಗದ ವಿಭಾಗೀಯ ರೈಲು ವ್ಯವಸ್ಥಾಪಕರಾದ ಅಶುತೋಷ್ ಕುಮಾರ್ಸಿಂಗ್, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾದ ಪರೀಕ್ಷಿತ್ ಮೋಹನ್ ಪರೀಯಾ ಸೇರಿದಂತೆ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇಂದು ಬೆಳಿಗ್ಗೆ ೧೧:೦೦ ಗಂಟೆಗೆ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಆರಂಭವಾದ ಈ ವೀಕ್ಷಣಾ ಪರಿಶೀಲನೆ, ಬೆಂಗಳೂರುಮೈಸೂರು ಮಾರ್ಗದ ಸೌಲಭ್ಯಗಳ ಸ್ಥಿತಿ, ಪ್ರಯಾಣಿಕರ ಅನುಕೂಲತೆ ಹಾಗೂ ಸುರಕ್ಷತೆ ಕುರಿತು ಸಮಗ್ರ ಪರಿಶೀಲನೆ ನಡೆಸುವ ಉದ್ದೇಶ ಹೊಂದಿತ್ತು.























