ಕಮಲನಗರ ಗ್ರಾ.ಪಂ. ನಲ್ಲಿ ಭ್ರಷ್ಟಾಚಾರ ನಡೆದಿಲ್ಲ, ತೆರಿಗೆ ಹಣ ಪಾವತಿ ಮಾಡಿರುವ ವಿಡಿಯೋಗೆ ಲಂಚದ ಬಣ್ಣ ಬಳಿಯಲಾಗಿದೆ: ರಾಜಕುಮಾರ ತಂಬಾಕೆ

ಸAಜೆವಾಣಿ ವಾರ್ತೆ
ಬೀದರ್:ಜೂ.೨೨: ಅಕ್ಟೋಬರ್ ೨೧, ೨೦೨೪ ರಂದು ಹಕ್ಕು ಬದಲಾವಣೆಗಾಗಿ ಸಂಗಮೇಶ ಎನ್ನುವವರು ೧೫ ಸಾವಿರ ರೂಪಾಯಿ ತೆರಿಗೆ ಪಾವತಿಗಾಗಿ ನೀಡಿದ ಸನ್ನಿವೇಶವನ್ನು ವಿಡಿಯೋ ಮಾಡಿ ನನ್ನ ತೇಜೋವಧೆ ಮಾಡಲಾಗಿದೆ ಎಂದು ಕಮಲನಗರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಕುಮಾರ ತಂಬಾಕೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ತೆರಿಗೆಗಾಗಿ ೧೪,೭೭೨ ರೂ. ಹಣ ಸಂಗಮೇಶ ನನಗೆ ನೀಡಿದ್ದರು. ಉಳಿದ ಹಣ ನಾನು ಮರಳಿ ಕೊಟ್ಟಿದ್ದೇನೆ. ಎಂಟು ತಿಂಗಳ ಹಿಂದಿನ ವಿಡಿಯೋ ಈಗ ವೈರಲ್ ಮಾಡಿ ನನ್ನ ತೇಜೋವಧೆ ಮಾಡಲಾಗಿದೆ. ನಾನು ಲಂಚ ತೆಗೆದುಕೊಂಡಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ವಿಡಿಯೋ ಮಾಡಿರುವ ವ್ಯಕ್ತಿ ಕಾನೂನುಬಾಹಿರ ಕೆಲಸ ಮಾಡಿಕೊಡುವಂತೆ ನನಗೆ ಕೇಳಿದ್ದ. ಮಾಡಿಕೊಡದೇ ಇರುವ ಕಾರಣ ಇಷ್ಟೆಲ್ಲಾ ಆವಾಂತರ ಸೃಷ್ಟಿಯಾಗಿದೆ. ಮೊದಲು ನಾನು ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ ಈ ವಿಡಿಯೋ ನೋಡಿ ನನ್ನ ಸ್ನೇಹಿತರು, ಬಂಧುಗಳು ಮತ್ತು ವಿದ್ಯಾರ್ಥಿಗಳು ಕೂಡ ದಿಗ್ಭ್ರಮೆಯಾಗಿದೆ. ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಸತ್ಯಾಸತ್ಯತೆ ಹೊರಬರಲಿದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾಬಾಯಿ ಮಹೇಶ ಮಾತನಾಡಿ ನಮ್ಮ ಪಂಚಾಯತನಲ್ಲಿ ಯಾವುದೇ ಭ್ರಷ್ಟಾಚಾರ ಲಂಚಗುಳಿತನ ನಡೆದಿಲ್ಲ. ದೂರುದಾರ ಒಬ್ಬ ಬ್ರೋಕರ್ ಆಗಿದ್ದು, ತನ್ನ ಕೆಲಸ ಮಾಡಿಕೊಡದ ಕಾರಣ ಈ ರೀತಿ ಮಾಡಿರುವ ಶಂಕೆಯಿದೆ ಎಂದು ತಿಳಿಸಿದರು.
ವಿಡಿಯೋದಲ್ಲಿ ಹಣ ನೀಡಿದ್ದಾರೆ ಎನ್ನಲಾದ ಸಂಗಮೇಶ ಎನ್ನುವವರು ಕೂಡಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ನಾನು ಕಳೆದ ವರ್ಷ ಅ. ೨೧ ರಂದು ಹಣ ನೀಡಿದ್ದೂ ನಿಜ, ಅವರು ತೆಗೆದುಕೊಂಡಿದ್ದೂ ನಿಜ. ಆದರೆ ಅದು ಲಂಚ ಅಲ್ಲ. ಹಕ್ಕು ಬದಲಾವಣೆಗಾಗಿ ನೀಡಿದ ಶುಲ್ಕದ ಹಣ. ದೂರುದಾರ ತನ್ನ ಸ್ವಾರ್ಥಕ್ಕಾಗಿ ಎಂಟು ತಿಂಗಳ ಹಿಂದೆ ಗುಪ್ತವಾಗಿ ವಿಡಿಯೋ ಮಾಡಿ, ಅದನ್ನು ಈಗ ವೈರಲ್ ಮಾಡಿ ನನ್ನನ್ನು ಮಧ್ಯ ಎಳೆದು ತಂದಿದ್ದಾನೆ. ನನಗೂ ವೈರಲ್ ವಿಡಿಯೋಗೂ ಸಂಬAಧವಿಲ್ಲ. ನಾನು ಕಾನೂನಿನ ಪ್ರಕಾರವೇ ತೆರಿಗೆ ಕಟ್ಟಿದ್ದೇನೆ ಎಂದರು.
ಇದೇ ವೇಳೆ ಕಮಲನಗರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅರ್ಚನಾ ಧನರಾಜ, ಸದಸ್ಯರಾದ ಶಿವಕುಮಾರ ಝಲ್ಪೆ, ಸಂತೋಷ ಬಿರಾದಾರ, ರಾಜಕುಮಾರ ಗಾಯಕವಾಡ, ಸಾಯಿನಾಥ್ ಕಾಂಬಳೆ, ವಿನೋದ ಕದಮೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.