
ನವದೆಹಲಿ, ಮಾ.೧೦- ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಬೆಂಗಳೂರು, ಮುಂಬೈ, ಕೋಲ್ಕತ್ತಾ ಸೇರಿದಂತೆ ದೇಶದ ಮಹಾನಗರಗಳಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ಅಡಚಣೆಯಾಗಿದೆ. ಈ ಹೀಗಾಗಿ ದೇಶೀಯ ಬಳಕೆಗಾಗಿ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಆದೇಶಿಸಿದೆ.
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಎಲ್ ಪಿಜಿ ಕೊರತೆ ಯಿಂದ ಶೇಕಡಾ ೨೦ ರಷ್ಟು ಹೊಟೆಲ್ ಬಂದ್ ಮಾಡಲಾಗಿದೆ. ಜೊತೆಗೆ ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಇನ್ನಿತರೆ ನಗರಗಳ ಹೋಟೆಲ್ ಗಳ ಮೇಲೂ ಗಂಭೀರ ಪರಿಣಾಮ ಬೀರಿದೆ.
ಎಲ್ ಪಿಜಿ ಸಿಲಿಂಡರ್ ಕೊರತೆಯಿಂದ ಮುಂಬೈನ ವಡಾ ಪಾವ್, ಬೆಂಗಳೂರಿನ ಮಸಾಲೆ ದೋಸೆ ಸೇರಿದಂತೆ ವಿವಿಧ. ನಗರಗಳಲ್ಲಿನ ಜನಪ್ರಿಯ ತಿಂಡಿಗಳು ಆಹಾರ ಪ್ರಿಯರಿಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಸಿಲಿಂಡರ್ ಅಬಾವದಿಂದ ಹೋಟೆಲ್ ಮುಚ್ಚಲಾಗಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತೈಲ ಸಂಸ್ಕರಣಾಗಾರಗಳಿಗೆ ದ್ರವೀಕೃತ ಪೆಟ್ರೋಲಿಯಂ ಅನಿಲ – ಎಲ್ಪಿಜಿ ಉತ್ಪಾದನೆ ಹೆಚ್ಚಿಸಲು ಮತ್ತು ಹೆಚ್ಚುವರಿ ಉತ್ಪಾದನೆಯನ್ನು ನಿರ್ದಿಷ್ಟವಾಗಿ ದೇಶೀಯ ಬಳಕೆಗೆ ನಿರ್ದೇಶಿಸಲು ನಿರ್ದೇಶನ ನೀಡಿದೆ.
ಜಾಗತಿಕ ಇಂಧನ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸಿದ ಇತ್ತೀಚಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ
ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಜಾಗತಿಕ ತೈಲ ಮತ್ತು ಇಂಧನ ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ಅನಿಶ್ಚಿತತೆಯ ಮಧ್ಯೆ, ನಾಗರಿಕರಿಗೆ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂಧ್ರ ಸರ್ಕಾರ ಮನೆಗಳಿಗೆ ಎಲ್ಪಿಜಿ ಪೂರೈಕೆಗೆ ಆದ್ಯತೆ ನೀಡಿದೆ. ಹೀಗಾಗಿ ದೇಶೀಯ ನೈಸರ್ಗಿಕ ಅನಿಲ ಉತ್ಪಾದನೆ ಹೆಚ್ಚಳ ಮಾಡುವಂತೆ ನಿರ್ದೇಶಿಸಿದೆ.
“ಇಂಧನ ಪೂರೈಕೆಯಲ್ಲಿನ ಪ್ರಸ್ತುತ ಭೌಗೋಳಿಕ ರಾಜಕೀಯ ಅಡೆತಡೆಗಳು ಮತ್ತು ಎಲ್ಪಿಜಿ ಪೂರೈಕೆಯ ಮೇಲಿನ ನಿರ್ಬಂಧಗಳ ಹಿನ್ನೆಲೆಯಲ್ಲಿ, ಸಚಿವಾಲಯ ತೈಲ ಸಂಸ್ಕರಣಾಗಾರಗಳಿಗೆ ಹೆಚ್ಚಿನ ಎಲ್ಪಿಜಿ ಉತ್ಪಾದನೆಗಾಗಿ ಮತ್ತು ಅಂತಹ ಹೆಚ್ಚುವರಿ ಉತ್ಪಾದನೆಯನ್ನು ದೇಶೀಯ ಎಲ್ಪಿಜಿ ಬಳಕೆಗೆ ಬಳಸಲು ಆದೇಶಗಳನ್ನು ಹೊರಡಿಸಿದೆ” ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಕಟಿಸಿದೆ.
ಪ್ರಸ್ತುತ ಪೂರೈಕೆ ವಾತಾವರಣ ನಿರ್ವಹಿಸಲು, ಗ್ರಾಹಕರು ಸಂಗ್ರಹಣೆ ತಪ್ಪಿಸಲು ಮತ್ತು ಕಾಳ ಸಂತೆಯಲ್ಲಿ ಮಾರುಕಟ್ಟೆ ತಡೆಗಟ್ಟಲು ಸಚಿವಾಲಯ ೨೫ ದಿನಗಳ ಇಂಟರ್-ಬುಕಿಂಗ್ ಅವಧಿಯನ್ನು ಪರಿಚಯಿಸಿದ್ದ ಸಚಿವಾಲಯ ಮನೆಗಳಿಗೆ ದೇಶೀಯ ಎಲ್ ಪಿಜಿ ಪೂರೈಕೆಗೆ ಆದ್ಯತೆ ನೀಡಿದೆ
ಆಮದು ಮಾಡಿಕೊಂಡ ಇಂಧನ ವಿತರಣೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ದೇಶೀಯವಲ್ಲದ ವಲಯಗಳಿಗೆ ನಿರ್ದಿಷ್ಟ ಆದ್ಯತೆಗಳನ್ನು ನಿಗದಿಪಡಿಸಿದೆ.
“ಆಮದು ಮಾಡಿಕೊಂಡ ಎಲ್ಪಿಜಿಯಿಂದ ದೇಶೀಯವಲ್ಲದ ಪೂರೈಕೆಗಳಿಗೆ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ದೇಶೀಯವಲ್ಲದ ವಲಯಗಳಿಗೆ ಆದ್ಯತೆ ನೀಡಲಾಗುತ್ತಿದೆ” ಎಂದು ಸಚಿವಾಲಯ ಹೇಳಿದ್ದು, “ಇತರ ದೇಶೀಯವಲ್ಲದ ವಲಯಗಳಿಗೆ ಎಲ್ಪಿಜಿ ಪೂರೈಕೆಗಾಗಿ, ರೆಸ್ಟೋರೆಂಟ್ಗಳು, ಹೋಟೆಲ್ಗಳು, ಇತರ ಕೈಗಾರಿಕೆಗಳಿಗೆ ಎಲ್ಪಿಜಿ ಪೂರೈಕೆಗಾಗಿ ಪ್ರಾತಿನಿಧ್ಯಗಳನ್ನು ಪರಿಶೀಲಿಸಲು ಮೂರು ಮಂದಿ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ” ಎಂದು ಹೇಳಿದೆ.
ಮೆಟ್ರೋ ನಗರಗಳಲ್ಲಿ ಬಾರಿ ಹೊಡೆತ : ಪ್ರಧಾನಿಗೆ ಪತ್ರ
ಬೆಂಗಳೂರು ನಂತರ, ಚೆನ್ನೈ ಮತ್ತು ಮುಂಬೈ, ಕೋಲ್ಕತ್ತಾ ದಂತಹ ಮೆಟ್ರೋ ನಗರಗಳು ಸಹ ಎಲ್ಪಿಜಿ ಕೊರತೆಯ ಸಮಸ್ಯೆ ಎದುರಿಸಿದ್ದು ಸಮಸ್ಯೆಗೆ ಸಿಲುಕುವಂತಾಗಿದೆ
ಆಹಾರ ಉದ್ಯಮಕ್ಕೆ ಅಗತ್ಯ ವಸ್ತುಗಳ ಅಡಿಯಲ್ಲಿ ವಾಣಿಜ್ಯ ಎಲ್ಪಿಜಿಯನ್ನು ನಿರಂತರವಾಗಿ ಪೂರೈಸುವಂತೆ ಕೋರಿ ಚೆನ್ನೈ ಹೋಟೆಲ್ಗಳ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
“ಪರಿಸ್ಥಿತಿ ಈಗ ಇನ್ನಷ್ಟು ಗಂಭೀರವಾಗಿದೆ. ವಾಣಿಜ್ಯ ಎಲ್ಪಿಜಿ ವಿತರಕರು ಸಿಲಿಂಡರ್ಗಳ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ, ತಮ್ಮ ಬಳಿ ದಾಸ್ತಾನು ಲಭ್ಯವಿಲ್ಲ ಎಂದು ಹೇಳಿದ್ದಾರೆ.
ಪರಿಣಾಮವಾಗಿ, ಅನೇಕ ರೆಸ್ಟೋರೆಂಟ್ಗಳನ್ನು ಮುಚ್ಚಲು ಒತ್ತಾಯಿಸಲಾಗಿದೆ” ಎಂದು ಅಸೋಸಿಯೇಷನ್ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಉಪ ಮುಖ್ಯಮಂತ್ರಿ ಉದಯನಿಧಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಲಾಗಿದೆ.
ಕೇಂದ್ರಕ್ಕೆ ತೇಜಸ್ವಿ ಪತ್ರ
ಎಲ್ಪಿಜಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿಯವರಿಗೆ ಬಿಜೆಪಿ ಸಂಸದ ತೇಜಸ್ವಿಸೂರ್ಯ ಹಾಗೂ ಕೇಂದ್ರ ಸಚಿವೆ ಶೋಭಾ ಕರ್ಲಂದಾಜೆ ಸಮಸ್ಯೆ ಬಗೆಹರಿಸುವಂತೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ ಹೋಟೆಲ್ ಹಾಗೂ ಆತಿಥ್ಯ ಕ್ಷೇತ್ರಕ್ಕೆ ನಿರಂತರ ಎಲ್ ಪಿಜಿ ಪೂರೈಕೆ ಖಚಿತಪಡಿಸುವಂತೆ ಮನವಿ ಮಾಡಿದ್ದಾರೆ.
ಹೋಟೆಲ್ ಮತ್ತು ರೆಸ್ಟೋರೆಂಟ್ ಕ್ಷೇತ್ರವು ದಿನನಿತ್ಯದ ಅಡುಗೆ ಕಾರ್ಯಗಳಿಗೆ ವಾಣಿಜ್ಯ ಎಲ್ ಪಿಜಿ ಅವಲಂಬಿತವಾಗಿದೆ. ಪಿಎನ್ಜಿ ಸಂಪರ್ಕ ಅಥವಾ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆ ಲಭ್ಯವಿಲ್ಲದ ಕಾರಣ ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಹೋಟೆಲ್ ಉದ್ಯಮ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಮಧ್ಯೆ ಕೇಂದ್ರ ಸಚಿವೆ ಶೋಭಾ ಕರ್ಲಂದಾಜೆ ಅವರು ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಹೋಟೆಲ್ ಅಸೋಸಿಯನ್ ನೀಡಿರುವ ಮನವಿ ಪತ್ರವನ್ನು ಕೇಂದ್ರ ಸಚಿವರಿಗೆ ರವಾನಿಸಿದ್ದಾರೆ.




























