೧೧ ನಗರ, ಪುರಸಭೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ

ಬೆಳಗಾವಿ, ಸುವರ್ಣ ವಿಧಾನಸೌಧ, ಡಿ.೧೮: ಕಾವೇರಿ, ಕಬಿನಿ, ಅರ್ಕಾವತಿ, ತುಂಗಭದ್ರಾ, ಭದ್ರಾ ಸೇರಿದಂತೆ ವಿವಿಧ ನದಿಗಳಿಗೆ ಸಂಸ್ಕರಿಸದ ಗೃಹ ತ್ಯಾಜ್ಯ ಜಲ ಹರಿಯುತ್ತಿದ್ದು ನದಿ ದಂಡೆಯ ೧೧ ನಗರ ಮತ್ತು ಪುರಸಭೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ.


ಪ್ರಶ್ನೋತ್ತರ ಕಲಾಪದಲ್ಲಿಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಗರಸಭೆ ಮತ್ತು ಪುರಸಭೆಗಳ ವಿರುದ್ಧ ಈ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ತಿಳಿಸಿದರು.


೧೨ ನದಿಗಳ ಪಾತ್ರದಲ್ಲಿ ೩೦ ಸ್ಥಳೀಯ ಸಂಸ್ಥೆಗಳಿದ್ದು, ಇಲ್ಲಿ ೮೧೪ ಎಂ.ಎಲ್.ಡಿ. ಗೃಹ ತ್ಯಾಜ್ಯ ನೀರು ಉತ್ಪತ್ತಿ ಆಗುತ್ತಿದ್ದು, ೬೧೪ ಎಂ.ಎಲ್.ಡಿ. ಸಂಸ್ಕರಣೆಗೆ ಮಾತ್ರ ಶುದ್ಧೀಕರಣ ಘಟಕ ಇದೆ. ೨೦೩ ಎಂ.ಎಲ್.ಡಿ. ಜಲ ಶುದ್ಧೀಕರಣಕ್ಕೆ ಘಟಕಗಳಿಲ್ಲ. ಹೀಗಾಗಿ ನಿಯಮಿತವಾಗಿ ಜಲ ತಪಾಸಣೆ ಮಾಡಲಾಗುತ್ತಿದ್ದು, ಜಲ ಶುದ್ಧೀಕರಣಕ್ಕೆ ಕ್ರಮ ವಹಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದರು.


ಎಲ್ಲ ನದಿಗಳಿಗೆ ಕೈಗಾರಿಕೆ ಮತ್ತು ಗೃಹಗಳ ರೊಚ್ಚು ನೀರನ್ನು ಸಂಸ್ಕರಿಸದೆ ಹರಿಸುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.