
ಬೆಂಗಳೂರು, ಫೆ. ೧೯- ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪ ತೊಡುವಂತೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶಖಾವತ್ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರಸ್ತುತ ಇರುವ ಪರಿಸ್ಥಿತಿ ಬಗ್ಗೆ ಗಂಭೀರ ಅವಲೋಕನ ಮಾಡಬೇಕಿದೆ. ಈ ಸಭೆಯ ಮೂಲಕ ಸರ್ಕಾರದ ವಿರುದ್ಧ ಹೋರಾಟಗಳನ್ನು ನಡೆಸುವ ತೀರ್ಮಾನ ಮಾಡುವ ಜತೆಗೆ ಭ್ರಷ್ರ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪ ತೊಡೋಣ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ನ ದುರಾಡಳಿತವಿದೆ. ಈ ಸಭೆಯ ಮೂಲಕ ಸರ್ಕಾರದ ವಿರುದ್ಧ ಸಂಘರ್ಷದ ಹಾದಿಯಲ್ಲಿ ಹೋಗುವ ತೀರ್ಮಾನಗಳನ್ನು ಮಾಡಿ, ಕಾಂಗ್ರೆಸ್ ದುರಾಡಳಿತದ ವಿರುದ್ಧ ರಾಜ್ಯಾದ್ಯಂತ ಹೋರಾಟಗಳನ್ನು ನಡೆಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿಯ ಸಿದ್ಧಾಂತ, ವಿಚಾರಧಾರೆಗೆ ಮತ್ತಷ್ಟು ಪುಷ್ಠಿ ಕೊಡೋಣ. ಪಕ್ಷದ ಬಲವರ್ಧನೆ ಮಾಡಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಪಣ ತೋಡೋಣ ಎಂದು ಹೇಳಿದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಪ್ರಗತಿಯ ಹಾದಿಯಲ್ಲಿ ಸಾಗಿದೆ. ಭಾರತದ ವಿಕಸಿತಕ್ಕೆ ಸಂಕಲ್ಪ ತೊಡೋಣ ಎಂದು ಹೇಳಿದರು.
ಯಡಿಯೂರಪ್ಪ ಭೀಷ್ಮ ಪಿತಾಮಹ
ರಾಜಕಾರಣದಲ್ಲಿ ೫೦ ವರ್ಷಗಳನ್ನು ಪೂರೈಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸಿದ ಕೇಂದ್ರ ಸಚಿವ ಶಖಾವತ್, ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿಯ ಭೀಷ್ಮ ಪಿತಾಮಹ ಎಂದು ಬಣ್ಣಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗೊಂದಲವಿದೆ. ಯಾರು ಸಿಎಂ ಆಗಬೇಕು ಎಂಬುದನ್ನು ಹತ್ತು ದಿನಗಳ ಕಾಲ ಚರ್ಚೆ ನಡೆಸಿ, ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ಸಿಗರು ಅಪಮಾನ ಮಾಡಿದ್ದಾರೆ. ಈಗಲೂ ಕುರ್ಚಿ ಕಚ್ಚಾಟ ನಿಂತಿಲ್ಲ. ಈ ಕುರ್ಚಿ ಗಲಾಟೆ ಆಡಳಿತದ ಮೇಲೆ ಪರಿಣಾಮ ಬೀರಿದೆ ಎಂದರು.
ಇದು ಭ್ರಷ್ಟಾಚಾರ ಮಾಡುವ ಸರ್ಕಾರ. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಈ ಸರ್ಕಾರವನ್ನು ಸಂಘಟನಾ ಶಕ್ತಿಯಿಂದ ಕಿತ್ತೊಗೆಯಿರುವ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಕಾನೂನು ಸುವ್ಯವಸ್ಥೆಯೂ ಹಾಳಾಗಿದೆ. ಡ್ರಗ್ ಮಾಫಿಯಾ ಹೆಚ್ಚಾಗಿದೆ. ಇಲ್ಲಿನ ಪೊಲೀಸರು ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಲು ಆಗಲಿಲ್ಲ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಪಕ್ಷ ತನ್ನ ವೋಟ್ ಬ್ಯಾಂಕ್ಗಾಗಿ ವಂದೇ ಮಾತರಂ ಗೀತೆಗೆ ವಿರೋಧ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಮಾನಸಿಕವಾಗಿ, ಬೌದಿಕವಾಗಿ ದಿವಾಳಿಯಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಸೋಲಿಸೋಣ. ಈ ಭ್ರಷ್ಟ ಸರ್ಕಾರದ ಮುಖಕ್ಕೆ ಹೋಡೆದು ಓಡಿಸೋಣ ಎಂದು ಹೇಳಿದರು.
ದೆಹಲಿಯಲ್ಲಿ ಎಐ ಶೃಂಗಸಭೆ ನಡೆಯುತ್ತಿದೆ. ಆದರೆ ಇಲ್ಲಿ ಹೆಚ್ಚಿನ ಕಂಪನಿಗಳು ಬೆಂಗಳೂರು ಮೂಲದವು. ಇದು ಕರ್ನಾಟಕದ ಶಕ್ತಿ. ಕರ್ನಾಟಕದಷ್ಟು ಸಮೃದ್ಧ, ಸಾಂಸ್ಕೃತಿಕ ಪ್ರದೇಶ ಬೇರೆ ಇಲ್ಲ. ಇಂತಹ ರಾಜ್ಯದಲ್ಲಿ ಕಾಂಗ್ರೆಸ್ನಂತಹ ಭ್ರಷ್ಟ ಸರ್ಕಾರ ಇದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ: ರಾಧಾ ಮೋಹನ್ದಾಸ್
ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿದೆ. ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನದಾಸ ಅಗರವಾಲ್ ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಹೇಳಿದರು.
ಅನ್ಯ ರಾಜ್ಯಗಳ ಚುನಾವಣೆಗಳಿಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದೆ. ಬೇರೆ ಚುನಾವಣೆಗೆ ರಾಜ್ಯದಿಂದ ಹಣ ಹೋಗುತ್ತಿದೆ. ಕಾಂಗ್ರೆಸ್ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಜನರಿಗೂ ತಪ್ಪಿನ ಅರಿವಾಗಿದೆ. ನಾವು ಜೆಡಿಎಸ್ ಜತೆ ಮೈತ್ರಿಯಲ್ಲಿದ್ದೇವೆ. ಎರಡೂ ಪಕ್ಷಗಳೂ ಒಟ್ಟಾಗಿ ಸರ್ಕಾರ ಕಿತ್ತೊಗೆಯುವ ಕೆಲಸ ಮಾಡುತ್ತವೆ ಎಂದರು.
ನಮ್ಮ ಪಕ್ಷದಲ್ಲೂ ಗೊಂದಲಗಳಿವೆ ನಿಜ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಇರುವಷ್ಟು ಸಂಘರ್ಷ ನಮ್ಮಲ್ಲಿ ಇಲ್ಲ ಎಂದರು
ಕಾಂಗ್ರೆಸ್ ಸರ್ಕಾರ ಮುಸ್ಲಿಂರ ಪರ ಇದೆ. ಮುಸ್ರಿಂರ ಓಲೈಕೆ ನಡೆದಿದೆ. ರೋಹಿತ್ ವೆಮುಲಾ ಮಸೂದೆ ತಂದು ದಲಿತರಿಗೆ ಸಂಕಷ್ಟ ಸೃಷ್ಟಿಸುವ ಕೆಲಸ ನಡೆದಿದೆ ಎಂದು ದೂರಿದರು
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವರ ಮೇಲೆ ಪ್ರಕರಣಗಳಿವೆ ಎಂದು ಅವರು ಆರೋಪಿಸಿದರು.
ಅಭಿನಂದನಾ ನಿರ್ಣಯ
ಈ ಕಾರ್ಯಕಾರಣಿಯಲ್ಲಿ ರಾಜ್ಯ ರಾಜಕಾರಣದಲ್ಲಿ ೫೦ ವರ್ಷ ಪೂರೈಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಈ ಕಾರ್ಯಕಾರಣಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕರುಗಳಾದ ಆರ್.ಅಶೋಕ್, ಚಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಶೋಭಾಕರಂದ್ಲಾಜೆ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ಶೆಟ್ಟರ್ ಸೇರಿದಂತೆ ಬಿಜೆಪಿಯ ಎಲ್ಲ ಪ್ರಮುಖ ನಾಯಕರು, ಶಾಸಕರು, ಸಂಸದರು ಪಾಲ್ಗೊಂಡಿದ್ದರು.


























