ಸಿನೆಮಾ ನೆಪದಲ್ಲಿ ನಟಿಗೆ ಲೈಂಗಿಕ ಕಿರುಕುಳ ಆರೋಪಿ ಬಂಧನ

ಬೆಂಗಳೂರು,ಅ.೭- ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಕೊಡುವುದಾಗಿ ನಂಬಿಸಿ, ನಟಿಗೆ ಲೈಂಗಿಕ, ಮಾನಸಿಕ ಕಿರುಕುಳ ನೀಡಿದ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿನಗರದ ಹೇಮಂತ್ ಕುಮಾರ್ (೩೪) ಬಂಧಿತ ಆರೋಪಿಯಾಗಿದ್ದಾನೆ. ಕಿರುತೆರೆ ನಟಿ ಹಾಗೂ ಬಿಗ್‌ಬಾಸ್‌ನ ಓಟಿಟಿ ಸ್ಪರ್ಧಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.


ಕಿರುತೆರೆಯಲ್ಲಿ ನಟಿಸುತ್ತಿರುವ ನಟಿಗೆ ೨೦೨೨ರಲ್ಲಿ ನಿರ್ದೇಶಕ, ನಿರ್ಮಾಪಕ ಎಂದು ಹೇಳಿಕೊಂಡು ಪರಿಚಯವಾದ ಆರೋಪಿ ತಾನು ರಿಚ್ಚಿ ಎಂಬ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನೀವು ನಾಯಕಿಯಾಗಿ ನಟಿಸಬೇಕು ಎಂದು ನಟಿಗೆ ಹೇಳಿದ್ದಾನೆ. ಅದಕ್ಕೆ ಒಪ್ಪಿಕೊಂಡ ನಟಿಗೆ ೨ ಲಕ್ಷ ರೂ. ಸಂಭಾವನೆ ನೀಡುತ್ತೇನೆಂದು ಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.


ಮುಂಗಡವಾಗಿ ನನಗೆ ೬೦ ಸಾವಿರ ರೂ. ಕೊಡಲಾಗಿತ್ತು. ಅದರಂತೆ ಚಿತ್ರೀಕರಣ ಆರಂಭವಾಗಿತ್ತು. ಆದರೆ, ಕಾರಣಾಂತರಗಳಿಂದ ಆರೋಪಿ ಸಿನಿಮಾ ಚಿತ್ರೀಕರಣವನ್ನು ಮುಂದೂಡಿದ್ದ. ಬಳಿಕವೂ ಸಿನಿಮಾದಲ್ಲಿ ನಟಿಸುತ್ತಿದ್ದೆ. ಆದರೆ, ಅಶ್ಲೀಲ ಬಟ್ಟೆ ತೊಡಬೇಕು, ಅಶ್ಲೀಲವಾಗಿ ನಟಿಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ, ಅಸಭ್ಯ ರೀತಿಯಲ್ಲಿ ಸ್ಪರ್ಶಿಸುತ್ತಿದ್ದರು. ಒಪ್ಪಂದದ ಅವಧಿ ಮುಗಿದಿದ್ದರಿಂದ ಸಿನಿಮಾ ಚೇಂಬರ್ ಸಮ್ಮುಖದಲ್ಲಿ ಅವಧಿ ವಿಸ್ತರಣೆ ಮಾಡಿ ಸಿನಿಮಾ ಪೂರ್ತಿಗೊಳಿಸಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಬಳಿಕ ಮುಂಬೈನಲ್ಲಿ ಸಿನಿಮಾ ಪ್ರಚಾರಕ್ಕೆ ಹೋಗಿದ್ದೆ. ಆಗ ಅಲ್ಲಿಯೂ ಅಸಭ್ಯವಾಗಿ ವರ್ತಿಸಿದ್ದ. ಬಳಿಕ ಬೇರೆ ಕಡೆ ಸಿನಿಮಾ ಪ್ರಚಾರಕ್ಕೆ ಒಬ್ಬಳೇ ಬರುವಂತೆ ಹೇಳುತ್ತಿದ್ದ. ಅದಕ್ಕೆ ನಿರಾಕರಿಸಿದಾಗ ನನ್ನ ಹಿಂದೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿದ್ದಾನೆ. ಇನ್ನು ರಿಚ್ಚಿ ಸಿನಿಮಾದ ಕೆಲವು ಸೆನ್ಸಾರ್ ಆಗದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ನಾನು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದೆ ಎಂದು ನಟಿ ದೂರಿದ್ದಾರೆ.


ನಟಿಗೆ ಪ್ರಾಣ ಬೆದರಿಕೆ:


ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ಬಾಕಿ ಹಣದ ಚೆಕ್ ನೀಡಿದ್ದು, ಅದು ಬೌನ್ಸ್ ಆಗಿತ್ತು. ಅದನ್ನು ಪ್ರಶ್ನಿಸಿ ನನ್ನ ಮೊಬೈಲ್ ಸಂಖ್ಯೆ ಇರುವ ಒಪ್ಪಂದದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ಹತ್ತಾರು ಮಂದಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಾನು ಸಿನಿಮಾ ಪ್ರಚಾರಕ್ಕೆ ನಿರಾಕರಿಸಿದಾಗ ನನಗೂ ಮತ್ತು ನನ್ನ ತಾಯಿಗೂ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಮಧ್ಯೆ ೨೦೨೫ರ ಸೆ.೧೭ರಂದು ಮದ್ಯದ ಅಮಲಿನಲ್ಲಿ ಕರೆ ಮಾಡಿ, ನನ್ನ ತಾಯಿ ಹಾಗೂ ನನಗೆ ಪ್ರಾಣ ಬೆದರಿಕೆ ಹಾಕಿದ್ದಲ್ಲದೆ, ಕೆಲವು ರೌಡಿಗಳನ್ನು ನನ್ನ ಹಿಂದೆ ಕಳುಹಿಸಿ ಹೆದರಿಸಿದ್ದಾರೆ. ಹೀಗಾಗಿ ನನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ತಾಯಿ, ನನಗೆ ಪ್ರಾಣ ಬೆದರಿಕೆ ಹಾಕಿದ್ದಲ್ಲದೆ, ಹಣ ಪಾವತಿಸದೆ ವಂಚಿಸಿದ್ದಾನೆ ಎಂದು ಆರೋಪಿಸಿ ಹೇಮಂತ್ ಕುಮಾರ್ ವಿರುದ್ಧ ನಟಿ ದೂರು ನೀಡಿದ್ದರು.