
ಬೆಂಗಳೂರು, ಅ. ೫- ಜಾತಿ ಸಮೀಕ್ಷೆಯನ್ನು ದಯವಿಟ್ಟು ಇಲ್ಲಿಗೆ ನಿಲ್ಲಿಸಿ. ಹುಚ್ಚರ ಸಂತೆಯಲ್ಲಿ ಯಾರೂ ಬಂದು ನಿಲ್ಲಬೇಡಿ” ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವಿಜಯನಗರ ನಿವಾಸದ ಬಳಿ ಮಾತನಾಡಿದ ಅವರು, “ಸಿದ್ದರಾಮಯ್ಯ ಕೆಲಸಕ್ಕೆ ಬಾರದ ಕೆಲಸ ಸೃಷ್ಟಿ ಮಾಡಿದ್ದಾರೆ. ಸುಮಾರು ೧ ಗಂಟೆ ೪ ನಿಮಿಷ ಸಮೀಕ್ಷಾದಾರರು ನನ್ನ ಮಾಹಿತಿ ಪಡೆದಿದ್ದಾರೆ. ಇದೊಂದು ಅವೈಜ್ಞಾನಿಕ ಸಮೀಕ್ಷೆ ಆಗಿದೆ. ತಾಂತ್ರಿಕ ಸಮಸ್ಯೆಯಿಂದ ಕೂಡಿದೆ. ಇನ್ನೊಂದು ಕಾಂತರಾಜ್ ಸಮಿತಿ ಆಗುತ್ತದೆ ಅಷ್ಟೇ. ಅನಾವಶ್ಯಕವಾಗಿ ಮಾಡುವ ಗೊಂದಲದಿಂದ ಸರ್ಕಾರಕ್ಕೆ ಸರಿಯಾದ ಮಾಹಿತಿ ಕೊಡಲ್ಲ.
ಇದರಲ್ಲಿ ಸರ್ಕಾರ ಸಾಧನೆ ಮಾಡಲು ಯಾವುದೂ ಸಿಗಲ್ಲ. ಅವೈಜ್ಞಾನಿಕ ಗಣತಿಯಿಂದ ಮಾಹಿತಿ ಸಿಗಲ್ಲ. ಇದನ್ನು ಇನ್ನೂ ಸರಳೀಕರಣ ಮಾಡಿ. ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ. ಸುಮಾರು ಅಧಿಕಾರಿಗಳು ಕೇಳಿದ ಮಾಹಿತಿ ಅನಾವಶ್ಯಕವಾಗಿತ್ತು. ಇದರಿಂದ ಜನರು ಗೊಂದಲ ಒಳಗಾಗುತ್ತಾರೆ” ಎಂದರು.
“ಸಮೀಕ್ಷೆ ಮಾಡಲು ೬ ತಿಂಗಳು ಬೇಕು. ಇದು ಕಾಂತರಾಜ್ ಸಮಿತಿಗಿಂತಲೂ ಕೆಟ್ಟದಾಗಿ ಆಗುತ್ತದೆ. ಈ ಸರ್ಕಾರಕ್ಕೆ ಜಾತಿ ಬಿಟ್ಟರೆ ಬೇರೆ ಅವಶ್ಯಕತೆ ಇಲ್ಲ. ಯಾವ ಸಮಾಜಕ್ಕೆ ಅನ್ಯಾಯ ಮಾಡಬೇಕು ಎಂಬುದು ನಿಮ್ಮ ತಲೆಯಲ್ಲಿ ಇದೆ. ಸಿದ್ದರಾಮಯ್ಯರ ಬಗ್ಗೆ ಕಾಂಗ್ರೆಸ್ ಅವರೇ ಮಾತನಾಡುತ್ತಾರೆ. ಇದು ನಿಮಗೆ ಶೋಭೆ ತರಲ್ಲ. ಈ ರೀತಿಯಲ್ಲಿ ಮಾಡಲು ಹೋದರೆ ಒಂದು ವರ್ಷ ಆಗುತ್ತದೆ. ದಯವಿಟ್ಟು ಈಗಲೇ ರದ್ದುಗೊಳಿಸಿ. ಸಿದ್ದರಾಮಯ್ಯ ಸಾಹೇಬರ್ರೆ ಇನ್ನೂ ನಾವು ಕಲಿಯಬೇಕು” ಎಂದು ಟಾಂಗ್ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಸಹ ಇದರ ಒಂದು ಭಾಗ. ಯಾರ ಮೇಲೆ ಎಷ್ಟು ಟೋಪಿ ಹಾಕುತ್ತಾರೆ. ಉಪಮುಖ್ಯಮಂತ್ರಿ ಸಹ ಇದಕ್ಕೆ ಪಾಲುದಾರರು. ದಯವಿಟ್ಟು ಇಲ್ಲಿಗೆ ನಿಲ್ಲಿಸಿ. ಹುಚ್ಚರ ಸಂತೆಯಲ್ಲಿ ಯಾರೂ ಬಂದು ನಿಲ್ಲಬೇಡಿ. ದೇವರಾಜ ಅರಸು ಫೋಟೋ ಹಾಕಿ ಸಮೀಕ್ಷೆ ಮಾಡುತ್ತೀರಾ?. ಮೇಲ್ಜಾತಿ ಅಥವಾ ಬೇರೆ ಯಾವುದೋ ಜಾತಿ ತುಳಿಯುವ ಕೆಲಸ ಮಾಡಬೇಡಿ. ವಾಂತಿ ಮಾಡುವ ಕೆಲಸ ಇದು. ಅವೈಜ್ಞಾನಿಕ ಹಾಗೂ ಅಸಹ್ಯದ ಕೆಲಸ” ಎಂದು ಸಚಿವ ಸೋಮಣ್ಣ ಟೀಕಿಸಿದ್ದಾರೆ.