ನಾಳೆ ರಂಗಕಲೆ ಬೆಳಗುತ್ತಿರುವ ೩೦ ಕಲಾ ಸಾಧಕರಿಗೆ ಗೌರವಾರ್ಪಣೆ

ತುಮಕೂರು, ಅ. ೧೧- ಶ್ರೀ ಮಂಜುನಾಥ ಕಲಾ ಸಂಘದ ವತಿಯಿಂದ ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಅ. ೧೨ ರಂದು ಬೆಳಿಗ್ಗೆ ೧೦ ಗಂಟೆಗೆ ದಾನ ವೀರ ಶೂರ ಕರ್ಣ ಎಂಬ ಪೌರಾಣಿಕ ನಾಟಕ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಜಿಲ್ಲೆಯ ೩೦ ಮಂದಿ ಕಲಾ ಸಾಧಕರಿಗೆ ಮಂಜುನಾಥ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಲಾ ಸಂಘದ ಅಧ್ಯಕ್ಷ ಟಿ.ವೈ.ಯೋಗಾನಂದಕುಮಾರ್ ಹೇಳಿದರು.


ನಗರದಲ್ಲಿ ನಾಟಕದ ಪ್ರಚಾರ ಪತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ರಂಗಭೂಮಿ ಕಲೆಯ ತವರೂರಾದ ತುಮಕೂರು ಜಿಲ್ಲೆಯ ಅನೇಕ ಹಿರಿಯ ಕಲಾವಿದರು ನಾಡಿನ ಕಲಾರಂಗಕ್ಕೆ ಕಲಾವಿದರ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ನಾಟಕ ಕ್ಷೇತ್ರದ ವೈಭವ ಮೆರೆಸಿದ್ದಾರೆ. ಡಾ. ಗುಬ್ಬಿ ವೀರಣ್ಣ, ಹಿರಣ್ಣಯ್ಯರಂತಹ ಮಹಾನ್ ಕಲಾವಿದರ ಜನ್ಮಭೂಮಿ ತುಮಕೂರು. ಈ ಮಣ್ಣಿನ ರಂಗಕಲೆ ಪರಂಪರೆಯನ್ನು ಮುಂದುವರೆಸಿ ಮೆರೆಸಬೇಕು. ಹೊಸ ತಲೆಮಾರಿನವರೂ ರಂಗಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡು ರಂಗಭೂಮಿಯನ್ನು ಸಮೃದ್ಧಗೊಳಿಸಬೇಕು ಎಂದರು.


ರಂಗಕಲೆಯನ್ನು ಉಳಿಸಿ ಬೆಳೆಸಲು ಅನೇಕ ಕಲಾ ಸಂಘಗಳು ಸಕ್ರಿಯಾಗಿ ನಾಟಕಗಳ ಪ್ರದರ್ಶನ ಮಾಡುತ್ತಿವೆ. ರಂಗಭೂಮಿ ಕಲೆಯನ್ನು, ಕಲಾವಿದರನ್ನು ಪ್ರೋತ್ಸಾಹಿಸುವವರು ಹೆಚ್ಚಾಗಬೇಕು. ಆಗ ನಮ್ಮ ನಾಟಕ ಕಲೆ ಶ್ರೀಮಂತವಾಗಿ ಬೆಳೆಯುತ್ತದೆ ಎಂದು ಹೇಳಿದರು.


ಅ. ೧೨ ರಂದು ನಡೆಯುವ ನಾಟಕವನ್ನು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಉದ್ಘಾಟಿಸುವರು. ಮಾಜಿ ಶಾಸಕರಾದ ಹೆಚ್.ನಿಂಗಪ್ಪ, ತಿಮ್ಮರಾಯಪ್ಪ, ಪಿ.ಆರ್.ಸುಧಾಕರಲಾಲ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ. ಆಂಜಿನಪ್ಪ, ಮುಖಂಡ ಗುಬ್ಬಿ ನಾಗರಾಜು, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ವೈ.ಹೆಚ್.ಶಿವಣ್ಣ, ಹಿರಿಯ ಕಲಾವಿದರಾದ ಡಾ. ಲಕ್ಷ್ಮಣದಾಸ್, ಎಂ.ವಿ. ನಾಗಣ್ಣ ಮತ್ತಿತರರು ಭಾಗವಹಿಸುವರು. ನಾಟಕ ಕಲೆಯನ್ನು ಪೋಷಿಸುತ್ತಾ ಬಂದಿರುವ ಜಿಲ್ಲೆಯ ೩೦ ಮಂದಿ ಹಿರಿಯ ಕಲಾ ಸಾಧಕರಿಗೆ ಮಂಜುನಾಥ್ ಕಲಾಶ್ರೀ ಪ್ರಶಸ್ತಿ ನೀಡಿ ಅವರ ಕಲಾ ಸೇವೆಯನ್ನು ಗೌರವಿಸಲಾಗುವುದು ಎಂದು ತಿಳಿಸಿದರು.


ಹತ್ತಾರು ವರ್ಷಗಳಿಂದ ವಿಶೇಷ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮಂಜುನಾಥ ಕಲಾ ಸಂಘ ಹೆಸರಾಗಿದೆ. ಈ ಬಾರಿ ಅನುಭವಿ ಕಲಾವಿದರು ಒಳಗೊಂಡ ದಾನವೀರ ಶೂರ ಕರ್ಣ ಎಂಬ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ. ಕಲಾ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.