
ಬೆಳಗಾವಿ, ಡಿ. ೧೨- ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆಯ ಕದನ ಮತ್ತೆ ತಾರಕಕ್ಕೇರಿದ್ದು, ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ ಕುರ್ಚಿ ಕಿತ್ತಾಟ, ಬಣ ರಾಜಕೀಯ, ಔತಣಕೂಟಗಳ ಮೇಲಾಟ ನಡೆದಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಬ್ರೇಕ್ಫಾಸ್ಟ್ ನಂತರ ಕುರ್ಚಿ ಕಿತ್ತಾಟಕ್ಕೆ ಬೆಂಗಳೂರಿನಲ್ಲೇ ವಿರಾಮ ಬಿದ್ದು ಅಧಿವೇಶನದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವ ಮಂತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಪಿಸಿದ್ದರು. ಆದರೆ, ಬೆಳಗಾವಿಯ ಅಧಿವೇಶನದ ಹೊತ್ತಿನಲ್ಲೇ ಕಾಂಗ್ರೆಸ್ನಲ್ಲಿ ಒಗ್ಗಟ್ಟು ಮಾಯವಾಗಿ ಬಣ ರಾಜಕೀಯ ಬಿರುಸಾಗಿ ನಾಯಕತ್ವ ಬದಲಾವಣೆ ಪರ-ವಿರೋಧ ಚಟುವಟಿಕೆಗಳು ಮತ್ತೆ ಗರಿಗೆದರಿ ತಾರಕಕ್ಕೇರಿವೆ.
ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ಶಾಸಕರೊಂದಿಗೆ ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ತಮ್ಮ ಆಪ್ತರೊಂದಿಗೆ ಔತಣ ಕೂಟದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಎರೆಡೆರಡು ಬಾರಿ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು ಕಾಂಗ್ರೆಸ್ನಲ್ಲಿ ಕುರ್ಚಿ ಕಿತ್ತಾಟಕ್ಕೆ ಕಿಚ್ಚು ಹಚ್ಚಿದಂತಾಗಿದೆ.
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೆ ನಿನ್ನೆ ಸದನದಲ್ಲಿ ತಮ್ಮ ಆಪ್ತ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿನ್ನೆ ರಾತ್ರಿ ಔತಣಕೂಟದ ನೆಪದಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ತೋರಿದ್ದಾರೆ.
ಬೆಳಗಾವಿಯ ಹೊರವಲಯದ ತೋಟದ ಮನೆಯಲ್ಲಿ ನಡೆದ ಈ ಔತಣಕೂಟದಲ್ಲಿ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ, ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ೩೦ ಕ್ಕೂ ಹೆಚ್ಚು ಶಾಸಕರು ವಿಧಾನಸಭಾ ಸದಸ್ಯರು, ೧೫ ವಿಧಾನಪರಿಷತ್ ಸದಸ್ಯರು, ಡಿಕೆಶಿ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಸಹ ಪಾಲ್ಗೊಂಡಿದ್ದು ಇದರ ಜತೆಗೆ ಬಿಜೆಪಿಯಿಂದ ಉಚ್ಚಾಟಿತರಾದ ವಿಶ್ವನಾಥ್, ಶಿವರಾಮ್ ಹೆಬ್ಬಾರ್ ಸಹ ಔತಣಕೂಟದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಅಧಿವೇಶನ ನಡೆದಿರುವ ಹೊತ್ತಿನಲ್ಲಿ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಮೇಳೈಸಿ ಔತಣಕೂಟದ ರಾಜಕೀಯ ಬಿರುಸಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಹಲವು ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಗಳನ್ನು ಈ ಔತಣಕೂಟಗಳು ಸಂಕೇತಿಸಿವೆ.
ಆಪ್ತರೊಂದಿಗೆ ಚರ್ಚೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ನಡೆದ ಔತಣಕೂಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ನಾವೆಲ್ಲಾ ಅಧಿಕಾರ ಹಂಚಿಕೆಯ ಬಗ್ಗೆ ಏನನ್ನೂ ಮಾತನಾಡದೆ ಮೌನವಾಗಿದ್ದರೂ ಯತೀಂದ್ರ ಅವರು ನಾಯಕತ್ವ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಪದೇ ಪದೇ ಪುನರುಚ್ಛರಿಸುತ್ತಿರುವ ಬಗ್ಗೆ ಚರ್ಚೆ ನಡೆಸಿ ಈ ಹೇಳಿಕೆಗ ಕಡಿವಾಣ ಹಾಕುವ ಸಂಬಂಧ ಹೈಕಮಾಂಡ್ ನಾಯಕರೊಂದಿಗೂ ಚರ್ಚಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಅಧಿವೇಶನ ಮುಗಿದ ನಂತರ ದೆಹಲಿಗೆ ತೆರಳುತ್ತೇನೆ. ವರಿಷ್ಠರೊಂದಿಗೆ ಎಲ್ಲವನ್ನು ಚರ್ಚಿಸುತ್ತೇನೆ ಅಲ್ಲಿಯವೆರೆಗೂ ಯಾರೂ ಏನನ್ನೂ ಮಾತನಾಡಬೇಡಿ, ಯಾರ ಹೇಳಿಕೆಗೂ ಉತ್ತರ ಕೊಡುವ ಕೆಲಸ ಬೇಡ ಎಂದು ತಮ್ಮ ಆಪ್ತ ಶಾಸಕರಿಗೆ ಹೇಳಿದ್ದಾರೆ ಎಂದು ಹೇಳಲಾಗಿದೆ.
ಸಿಎಂ ಗರಂ
ನಾನು ದೆಹಲಿಗೆ ಹೋಗುತ್ತೇನೆ ಎಂದು ನಿಮಗೆ ಹೇಳಿದವರು ಯಾರು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಧ್ಯಮಗಳ ವಿರುದ್ಧ ಗರಂ ಆದರು.
ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಮುಖ್ಯಮಂತ್ರಿಗಳು ದೆಹಲಿಗೆ ಹೋಗುತ್ತಾರೆ ಎಂಬ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಿಟ್ಟಾದ ಅವರು, ಯಾರ್ರೀ ನಿಮಗೆ ಹೇಳಿದ್ದು, ನಿಮಗೆ ಯಾರಾದರೂ ನಾನು ದೆಹಲಿಗೆ ಹೋಗುತ್ತೇನೆ ಎಂದು ಹೇಳಿದ್ದರಾ ಎಂದು ಪ್ರಶ್ನಿಸಿದರು.
ಯಾವ ಔತಣಕೂಟವೂ ಇಲ್ಲ-ಏನೂ ಇಲ್ಲ
ಬೆಳಗಾವಿಯಲ್ಲಿ ನಿನ್ನೆ ಶಾಸಕರಿಗೆ ಯಾವ ಔತಣಕೂಟವನ್ನು ಆಯೋಜಿಸಿರಲಿಲ್ಲ. ಬೆಳಗಾವಿ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾದ ದೊಡ್ಡಣ್ಣನವರ್ ನನ್ನ ಸ್ನೇಹಿತರು. ಅವರದ್ದು ದೊಡ್ಡ ಕುಟುಂಬ ಕಳೆದ ೧೫ ವರ್ಷಗಳಿಂದ ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ಹೀಗಾಗಿ ನಾನು ಸೇರಿದಂತೆ ಒಂದಷ್ಟು ಶಾಸಕರು ಊಟಕ್ಕೆ ಹೋಗಿದ್ದೆವು ಅಷ್ಟೆ. ಅದರಲ್ಲಿ ಯಾವುದೇ ಔತಣಕೂಟವೂ ಇಲ್ಲ ಏನೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಪ್ರೀತಿಯಿಂದ ಊಟಕ್ಕೆ ಕರೆದರೆ ಬರಲ್ಲ ಎನ್ನಲು ಆಗುತ್ತದೆಯೇ. ಹಾಗಾಗಿ ದೊಡ್ಡಣ್ಣನವರ ಮನೆಗೆ ನಾವೆಲ್ಲಾ ಊಟಕ್ಕೆ ಹೋಗಿದ್ದೇವು. ಇದನ್ನೇ ಔತಣಕೂಟ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳಿದರು.
ನಮ್ಮ ಮಾಜಿ ಶಾಸಕರಾದ ಫಿರೋಜ್ಸೇಠ್, ಶಾಸಕ ಆಸೀಫ್ ಸೇಠ್ ಊಟಕ್ಕೆ ಕರೆದಿದ್ದಾರೆ. ಪ್ರೀತಿಯಿಂದ ಕರೆದರೆ ಊಟಕ್ಕೆ ಹೋಗುತ್ತೇನೆ. ಅದನ್ನೇ ಔತಣಕೂಟ ಎಂದೆಲ್ಲಾ ವ್ಯಾಖ್ಯಾನಿಸುವುದು ಬೇಡ ಎಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಔತಣಕೂಟ ಇಲ್ಲ ಊಟ ಮಾಡಿದ್ದೇವೆ.
ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲ ಶಾಸಕರು ಒಟ್ಟಾಗಿ ಊಟ ಮಾಡಿದ್ದೇವೆ. ನಾವು ಒಟ್ಟಾಗಿ ಊಟ ಮಾಡುವುದು ತಪ್ಪೇ ಎಂದು ಮಾಗಡಿಯ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನಾನು ಆ ಬಗ್ಗೆ ಮಾತನಾಡಲ್ಲ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಬಾಲಕೃಷ್ಣ ಹೇಳಿ, ಯಾರೇ ಆಗಲಿ, ಇರಿಸು-ಮುರಿಸಿನ ಹೇಳಿಕೆ ನೀಡಬಾರದು ಎಂದು ಪರೋಕ್ಷವಾಗಿ ಯತೀಂದ್ರ ಹೇಳಿಕೆಗೆ ಅಸಮಾಧಾನ ಹೊರಹಾಕಿದರು.
ಹೇಳಿಕೆ ಸಮರ್ಥಿಸಿದ ಯತೀಂದ್ರ
ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಕಾಂಗ್ರೆಸ್ ಬಣಗಳ ಔತಣಕೂಟ ರಾಜಕೀಯ ಬಿರುಸಾಗಿರುವಾಗಲೇ ನಾಯಕತ್ವ ಬದಲಾವಣೆ ಇಲ್ಲ ಎಂಬ ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಯಾರ್ಯಾರೋ ಮಾತುಗಳಿಗೆಲ್ಲಾ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದರು.
ಬೆಳಗಾವಿಯಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆಗಳ ಸಂಬಂಧಿಸಿದಂತೆ ನಾನು ಏನು ಮಾತನಾಡಬೇಕೋ ಅದನ್ನು ಮಾತನಾಡಿದ್ದೇನೆ. ನನ್ನ ಹೇಳಿಕೆಗೆ ಯಾರ್ಯಾರು ಮಾತನಾಡಿದ್ದಾರೋ ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿ, ನಾಯಕತ್ವ ಬದಲಾವಣೆ ಇಲ್ಲ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಧಿವೇಶನದ ಬಳಿಕ ಡಿಕೆಶಿ ಸಿಎಂ- ಹುಸೇನ್
ಸಂಕ್ರಾಂತಿಗೆ ಅಲ್ಲ ಅಧಿವೇಶನ ಮುಗಿದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಬೆಳಗಾವಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನನ್ನ ಮನೆಯಲ್ಲಿ ಬರೆದಿದ್ದಕ್ಕೆ ನಾನು ಶಾಸಕನಾಗಿಲ್ಲವೇ. ಹಾಗೇಯೇ ಡಿ.ಕೆ.ಶಿ. ಅವರ ಹಣೆಯಲ್ಲೂ ಬರೆದಿದೆ. ಅವರು ಮುಖ್ಯಮಂತ್ರಿಯಾಗುತ್ತಾರೆ. ನಿನ್ನೆ ನಡೆದ ಔತಣಕೂಟದಲ್ಲಿ ೫೫ ಮಂದಿ ಶಾಸಕರು ಸೇರಿದ್ದೇವು. ಊಟ ಮಾಡಿದ್ದೇವೆ ಅಷ್ಟೆ. ನಮಗೆ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು, ಆಗುತ್ತಾರೆ ಎಂದರು.
ನಿನ್ನೆ ನಡೆದ ಔತಣಕೂಟ ಸಭೆಯಲ್ಲಿ ೫೦ ರಿಂದ ೬೦ ಶಾಸಕರು ಭಾಗವಹಿಸಿದ್ದರೂ ಆದರೆ ರಾಜಕೀಯ ಚರ್ಚೆಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.




























