ಕಾಖಂಡಕಿ ವಿಠ್ಠಲ ರುಕ್ಮೀಣಿ ದೇವಸ್ಥಾನಕ್ಕೆ ಶಿವಾಜಿ ಬ್ಯಾಂಕ್‍ನಿಂದ 51,000 ರೂ. ದೇಣಿಗೆ

ವಿಜಯಪುರ,ಜೂ.26:ಜಿಲ್ಲೆಯ ಪ್ರತಿಷ್ಠಿತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತ ಶ್ರೀ ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿಯಲ್ಲಿ ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಂಘದ ಧರ್ಮಾರ್ಥ ನಿಧಿಯಿಂದ ದೇಣಿಗೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಂಕರ ಕನಸೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಖಂಡಕಿ ಗ್ರಾಮದ ಕ್ಷತ್ರೀಯ ಮರಾಠಾ ಸಮಾಜದ ವತಿಯಿಂದ ನಿರ್ಮಿಸುತ್ತಿರುವ ಶ್ರೀ ವಿಠ್ಠಲ ರುಕ್ಮೀಣಿ ದೇವಸ್ಥಾನಕ್ಕೆ ಸಂಘದ ವತಿಯಿಂದ ರೂ. 51,000/- ಗಳ ಚೆಕ್ಕನ್ನು ಗ್ರಾಮದ ಮರಾಠಾ ಸಮಾಜದ ಅಧ್ಯಕ್ಷ ರಾಮು ಜಾಧವ ಇವರಿಗೆ ನೀಡಲಾಯಿತು. ಅದೇ ರೀತಿ ನಗರದ ಬಿ.ಡಿ.ಈ ಸಂಸ್ಥೆಯ ಪಿ.ಡಿ.ಜೆ. ಪದವಿಪೂರ್ವ ಮಹಾವಿದ್ಯಾಲಯಕ್ಕೆ ಸಂಘದ ವತಿಯಿಂದ 20 ಗೋಡೆ ಗಡಿಯಾರಗಳನ್ನು ಉಪ-ಪ್ರಾಂಶುಪಾಲರಾದ ಮುಕುಂದ ಆಲೂರ ಇವರಿಗೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಹಿರಿಯ ನಿರ್ದೇಶಕ ಡಾ. ಸದಾಶಿವ ಪವಾರ, ಕಳೆದ 28 ವರ್ಷಗಳಿಂದ ನಮ್ಮ ಸಂಸ್ಥೆಯು ಕೇವಲ ಲಾಭದ ಉದ್ದೇಶದಿಂದ ಮಾತ್ರ ಕೆಲಸ ನಿರ್ವಹಿಸದೇ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಅವಿರತ ಸೇವೆಯನ್ನು ಮಾಡುತ್ತ ಬಂದಿದ್ದು, ಜಿಲ್ಲೆಯ ವಿವಿಧ ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳಿಗೆ ತನ್ನ ಧರ್ಮಾರ್ಥ ನಿಧಿಯಿಂದ ದೇಣಿಗೆಯನ್ನು ನೀಡುತ್ತಾ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂಜಯ ಜಂಬೂರೆ ಮಾತನಾಡಿ, ನಮ್ಮ ಸಂಸ್ಥೆಯು ಪ್ರಾರಂಭದಿಂದಲೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು ಪ್ರತಿವರ್ಷ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ರೂಪದಲ್ಲಿ ಗೌರವಧನವನ್ನು ನೀಡುತ್ತ ಬಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಿ. ಟಿ. ತರಸೆ, ಡಾ. ಸದಾಶಿವ ಪವಾರ, ಮಹಾದೇವ ಪವಾರ, ಪ್ರವೀಣ ಬೋಡಕೆ, ರಾಮಚಂದ್ರ ಚವ್ಹಾಣ, ರವಿ ಮಧಬಾವಿ, ಭಾರತ ದೇವಕುಳೆ, ಪಾಂಡುರಂಗ ರೋಹಿಟೆ, ಸರೋಜನಿ ನಿಕ್ಕಮ್, ಅಂಬುತಾಯಿ ಜಾಧವ, ಸುರೇಖಾ ಕದಂ, ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ, ಸಹಾಯಕ ವ್ಯವಸ್ಥಾಪಕ ಅಂಬಾದಾಸ ಚವ್ಹಾಣ ಹಾಗೂ ಸಿಬ್ಬಂದಿ ಸದಸ್ಯರು ಮತ್ತು ಕಾಖಂಡಕಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.