
ತುಮಕೂರು, ಆ. ೨೧- ಭಾರತೀಯ ಕಿಸಾನ ಸಂಘ, ರೈತರ ನಿಜವಾದ ಸಮಸ್ಯೆಗಳ ಪಡೆದ ಪರಿಹಾರಕ್ಕೆ ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ಸಂಘಟನೆಯಾಗಿದ್ದು, ಕರ್ನಾಟಕ ದಕ್ಷಿಣ ಪ್ರಾಂತ್ಯದಲ್ಲಿ ಐದು ಸಾವಿರ ಕಾರ್ಯಕರ್ತರಿಗೆ ತರಬೇತಿ ನೀಡಿ ಬೇರು ಮಟ್ಟದಲ್ಲಿ ಕೆಲಸ ಮಾಡಲು ಉತ್ತೇಜಿಸುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ತಿಳಿಸಿದರು.
ಗುಬ್ಬಿ ಪಟ್ಟಣದ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ರೈತ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ, ಗುಬ್ಬಿ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಹಾಗೂ ಗ್ರಾಮ ಸಮಿತಿಗಳ ಪ್ರಶಿಕ್ಷಣವರ್ಗ ಕಾರ್ಯಾಗಾರವನ್ನು ಗೋಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸದಸ್ಯತ್ವ ಅಭಿಯಾನದಲ್ಲಿ ಕರ್ನಾಟಕದ ದಕ್ಷಿಣ ಪ್ರಾಂತ್ಯದಲ್ಲಿ ಸುಮಾರು ೪೩ ಸಾವಿರ ಜನರು ಸದಸ್ಯರಾಗಿದ್ದು, ಇವರಲ್ಲಿ ೫ ಸಾವಿರ ಜನರಿಗೆ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಪ್ರಾಂತೀಯ, ಜಿಲ್ಲಾ ಮಟ್ಟದ ತರಬೇತಿಗಳು ಮುಗಿದಿವೆ ಎಂದರು.
ಸ್ವಾವಲಂಬಿ ರೈತ, ಸಂಪನ್ನ ಗ್ರಾಮ, ಸಮರ್ಥ ಭಾರತ ಇದು ಭಾರತೀಯ ಕಿಸಾನ್ ಸಂಘದ ಮೂಲ ಉದ್ದೇಶವಾಗಿದ್ದು, ರೈತರ ಸಮಸ್ಯೆಯ ಜತೆಗೆ ವಿಷಮುಕ್ತ ಆಹಾರ ನೀಡುವ ಸಾವಯವ ಕೃಷಿಯ ಮೂಲಕ ಕೃಷಿ ಬಂಡವಾಳ ಕಡಿತ ಮಾಡಿ, ಲಾಭವನ್ನು ಹೆಚ್ಚು ತರುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳ ಜತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಲ್ಲದೆ ಸ್ಥಳೀಯವಾಗಿ ರೈತರು ಅನುಭವಿಸುತ್ತಿರುವ ಸಂಕಷ್ಷಗಳ ಪಟ್ಟಿ ಮಾಡಿ, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಶಾಂತಿಯುತ ಮತ್ತು ಕಾನೂನಾತ್ಮಕ ಹೋರಾಟಗಳನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.
ಕರ್ನಾಟಕ ದಕ್ಷಿಣ ಪ್ರಾಂತ್ರದಲ್ಲಿ ಸುಮಾರು ೧೪ ಜಿಲ್ಲೆಗಳಿದ್ದು, ೭೦ ತಾಲ್ಲೂಕುಗಳನ್ನು ಒಳಗೊಂಡಿದೆ. ಭೌಗೋಳಿಕವಾಗಿ ವೈವಿಧ್ಯತೆಯನ್ನು ಹೊಂದಿದೆ. ತೆಂಗು, ಅಡಿಕೆ, ಕಬ್ಬು, ಆಲೂಗಡ್ಡೆ, ಶೇಂಗಾ, ತೊಗರಿ, ಭತ್ತ ಹೀಗೆ ಹಲವಾರು ವೈವಿಧ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇವುಗಳಿಗೆ ಬೆಂಬಲ ಬೆಲೆ ಕೊಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ದೊರೆಯುವ ಸಾಲ, ಸೌಲಭ್ಯಗಳ ಮಾಹಿತಿ ನೀಡಿ, ರೈತರನ್ನು ಎಜುಕೇಟ್ ಮಾಡುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮ ಸಮಿತಿಗಳ ಪದಾಧಿಕಾರಿಗಳನ್ನು ತರಬೇತಿ ಮಾಡಿ, ಅವರ ಮೂಲಕ ಈ ಕೆಲಸವನ್ನು ಮಾಡಲು ಬಿ.ಕೆ.ಎಸ್. ಮುಂದಾಗಿದೆ ಎಂದು ತಿಳಿಸಿದರು.
ರೈತರನ್ನು ಸದೃಢರನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಹೈನುಗಾರರಿಗೆ ಅನುಕೂಲವಾಗುವಂತೆ ಲೀಟರ್ ಹಾಲಿಗೆ ೪೩ ರೂ. ನೀಡಬೇಕು. ಸಕಾಲಕ್ಕೆ ಬೀಜ, ವಿದ್ಯುತ್ ಟಾನ್ಸ್ಫಾರಂಗಳನ್ನು ನಿಗದಿತ ಕಾಲಾವಧಿಯಲ್ಲಿ ನೀಡುವುದು, ರಸಗೊಬ್ಬರ ಮತ್ತು ಮಾರ್ಗದರ್ಶನ ಹಾಗೂ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ, ರೈತರ ಉತ್ಪನ್ನಗಳ ಖರೀದಿಗೆ ವರ್ಷವಿಡಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂಬುದು ಭಾರತೀಯ ಕಿಸಾನ್ ಸಂಘದ ಒತ್ತಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿ.ಕೆ.ಎಸ್.ನ ಗುಬ್ಬಿ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಗ್ರಾಮ ಮಟ್ಟದಿಂದ ರೈತರನ್ನು ಸಂಘಟಿಸುವ ನಿಟ್ಟಿನಲ್ಲಿ ಗುಬ್ಬಿ ತಾಲ್ಲೂಕು ಮಟ್ಟದ ಗ್ರಾಮ ಸಮಿತಿಗಳ ಪ್ರಶಿಕ್ಷಣ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರೈತರು ರಾಷ್ಟ್ರ, ರಾಜ್ಯಮಟ್ಟದಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳ ಜತೆಗೆ, ಸ್ಥಳೀಯವಾಗಿರುವ ತೊಂದರೆಗಳ ನಿವಾರಣೆಗೆ ಭಾರತೀಯ ಕಿಸಾನ್ ಸಂಘ ಪ್ರಯತ್ನಿಸುತ್ತಿದೆ ಎಂದರು.
ಬಿ.ಕೆ.ಎಸ್.ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರ ಸ್ವಾಮಿ, ಸಂಘಟನೆ ಕುರಿತು ಮಾತನಾಡಿದರು. ವೇದಿಕೆಯಲ್ಲಿ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ್, ದಕ್ಷಿಣ ಪ್ರಾಂತ ಮಹಿಳಾ ಪ್ರಮುಖರಾದ ಪುಟ್ಟಮ್ಮ, ದಕ್ಷಿಣ ಪ್ರಾಂತ ಕಾರ್ಯದರ್ಶಿ ಸಂತೋಷ, ಜಿಲ್ಲಾ ಉಪಾಧ್ಯಕ್ಷರಾದ ಶಿವನಂಜಪ್ಪ, ಸಾವಯವ ಕೃಷಿ ಪ್ರಮುಖ ಶಂಕರಪ್ಪ, ತಾಲ್ಲೂಕು ಉಪಾಧ್ಯಕ್ಷ ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.