ಜವಳಿ ಇಲಾಖೆಯಿಂದ ಅಂಗನವಾಡಿ ಕಾರ್‍ಯಕರ್ತೆಯರಿಗೆ ಸೀರೆ ಖರೀದಿಸಿ

ಸಿದ್ದುಗೆ ಪತ್ರ

ಬೆಂಗಳೂರು:ಅ.೧೭ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಯರಿಗೆ ಸೀರೆ ಪೂರೈಕೆ ಮಾಡುವ ಆದೇಶವನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ತಲಾ ಎರಡು ಸೀರೆಗಳಂತೆ ಒಟ್ಟ ೨,೭೯,೬೬೮ ಸೀರೆಗಳನ್ನು ಐಸಿಡಿಎಸ್ ಯೋಜನೆ ಅಡಿ ಕೆಟಿಪಿಪಿ ನಿಯಮಗಳ ಅನ್ವಯ ಖರೀದಿಸಲು ಉದ್ದೇಶಿಸಿರುವುದಾಗಿ ತಿಳಿದುಬಂದಿದೆ.
ಈ ಸೀರೆಗಳ ಪೂರೈಕೆ ಆದೇಶವನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಿದರೆ ನೇಕಾರರಿಗೆ ಉದ್ಯೋಗ ದೊರಕಿಸುವುದರ ಜೊತೆಗೆ ನಷ್ಟದಲ್ಲಿರುವ ನಿಗಮದ ಪುನಶ್ಚೇತನಕ್ಕೂ ನೆರವಾಗಲಿದೆ ಎಂದು ಸಚಿವರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ವಿನಂತಿ ಮಾಡಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಾದ ಬಟ್ಟೆ ಮತ್ತು ಸೀರೆಗಳನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವವಹಿಸುತ್ತಿರುವ ನಿಗಮಗಳಿಂದ ಖರೀದಿ ಮಾಡಲು ಈ ಹಿಂದೆ ಆದೇಶ ಮಾಡಲಾಗಿದೆ.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಈಗಾಗಲೇ ವಿನಾಯಿತಿ ನೀಡಿ ಆದೇಶಿಸಿರುವುದರಿಂದ ಮತ್ತು ಕೆಎಚ್‌ಡಿಸಿ ಬಲವರ್ಧನೆ ಹಾಗೂ ನೇಕಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಿಗೆ ಬೇಡಿಕೆಯ ಪ್ರತಿಶತ ೭೫ರಷ್ಟು ಸಮವಸ್ತ್ರಗಳನ್ನು ಕಡ್ಡಾಯವಾಗಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಪೂರೈಕೆ ಮಾಡಲು ಆದೇಶ ಹೊರಡಿಸಿವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಹಲವು ಕಾರಣಗಳಿಂದ ನೇಕಾರರು ಕುಲಕಸುಬಿನಿಂದ ವಿಮುಖರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೀರೆ ಪೂರೈಕೆ ಆದೇಶವನ್ನು ಕೆಎಚ್‌ಡಿಸಿಗೆ ನೀಡಿದರೆ ನೇಕಾರರ ಹಿತರಕ್ಷಣೆಗೆ ಸಹಾಯವಾಗಲಿದೆ

ನೇಕಾರರ ಹಿತರಕ್ಷಣೆಗಾಗಿ ಜವಳಿ ಇಲಾಖೆಯಿಂದಲೂ ಕ್ರಮ ಕೈಗೊಳ್ಳುತ್ತಿದ್ದು, ಪ್ರೋತ್ಸಾಹ ನೀಡಲಾಗುತ್ತಿದೆ.

ಹತ್ತು ಅಶ್ವಶಕ್ತಿವರೆಗೆ ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

೧೦.೧ರಿಂದ ೨೦ ಅಶ್ವಶಕ್ತಿವರೆಗಿನ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.೨೦ರಿಂದ ೨೦೦ ಅಶ್ವಶಕ್ತಿ ಪಡೆದಿರುವ ಎಸ್‌ಸಿಎಸ್‌ಪಿ, ಟಿಎಸ್ಪಿ ಘಟಕಗಳು ಬಳಕೆ ಮಾಡಿರುವ ಒಟ್ಟು ವಿದ್ಯುತ್‌ನಲ್ಲಿ ಐದು ವರ್ಷಗಳವರೆಗೆ ಒಂದು ಬಾರಿ ಪ್ರತಿಶತ ೫೦ರಷ್ಟು ವಿದ್ಯುತ್ ಸಬ್ಸಿಡಿ ನೀಡಲಾಗುತ್ತಿದೆ.

ಅಂಗನವಾಡಿಗಳಿಗೆ ಸೀರೆ ಪೂರೈಕೆ ಮಾಡುವ ಆದೇಶವನ್ನು ಕೆಎಚ್‌ಡಿಸಿಗೆ ನೀಡಿದರೆ ನೇಕಾರರಿಗೆ ಉತ್ತೇಜನ ನೀಡಿದಂತಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.