ಪಿಎಸ್‍ಐ ನೇಮಕಾತಿ ಹಗರಣ: ಆರ್.ಡಿ.ಪಾಟೀಲ್‍ಗೆ ಮಧ್ಯಂತರ ಜಾಮೀನು

ಕಲಬುರಗಿ,ನ.20-ಪಿಎಸ್‍ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆಗಿರುವ ಆರ್.ಡಿ.ಪಾಟೀಲಗೆ ಸುಪ್ರೀಂಕೋರ್ಟ್ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಬುಧವಾರ (ನ.19) ಆದೇಶ ಹೊರಡಿಸಿದೆ.
ಮಗಳ ಮದುವೆ ಸಮಾರಂಭದ ಧಾರ್ಮಿಕ ವಿಧಿಗಳನ್ನು ಡಿ.4ರೊಳಗೆ ಪೂರೈಸಬೇಕಿದ್ದು, ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಆರೋಪಿ ಆರ್.ಡಿ.ಪಾಟೀಲ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ವಿನೋದಚಂದ್ರ ಅವರ ಏಕ ಸದಸ್ಯ ನ್ಯಾಯಪೀಠವು, ‘ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಾಕ್ಷಿದಾರರಿರುವ ಕಾರಣ ವಿಚಾರಣೆಗೆ ಇನ್ನಷ್ಟು ಕಾಲಾವಕಾಶ ಹಿಡಿಯುವ ಸಾಧ್ಯತೆಗಳಿವೆ. ಹೀಗಾಗಿ ಅರ್ಜಿದಾರರಿಗೆ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಬಹುದು ಎಂದು ಹೇಳಿದೆ.
ಜಾಮೀನು ಅವಧಿ ಮುಗಿದ ಬಳಿಕ ಅರ್ಜಿದಾರರು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದೂ ಸುಪ್ರೀಂಕೋರ್ಟ್, ನಿರ್ದೇಶನ ನೀಡಿದೆ.